Thursday, September 11, 2014

ವಿಷಾದದಿಂದ ವಿಕಾಸಕ್ಕೆ ನೆಗೆಯುವ ಸಂಸ್ಕಾರ:


ಅನಂತವನ್ನು ಮೂರ್ತವಾಗಿಸಿಕೊಂಡವರು.....ಆನಂತರ...... ಅನಂತದಲ್ಲೂ ಅಮೂರ್ತವಾದವರು ಅನಂತಮೂರ್ತಿ!
-      ವಸಂತ ಭಟ್, ಹಾಸಣಗಿ

ಅನಂತಮೂರ್ತಿ!....... ಹೆಸರನ್ನೇ ಇಡಬೇಕೆಂದು ಅವರ ತಂದೆ-ತಾಯಿಗೆ ಹೊಳೆದಿದ್ದಾದರೂ ಹೇಗೆ? ಹುಟ್ಟು...ಹುಟ್ಟುತ್ತಲೇ.... ಹೆಸರಿನಲ್ಲೇ ಅನಂತವನ್ನು ಮೂರ್ತವಾಗಿಸಿಕೊಂಡವರು.....ಆನಂತರ...... ಅನಂತದಲ್ಲೂ ಅಮೂರ್ತವಾದವರುಸಂದರ್ಭದಲ್ಲಿ ನನಗೆ ಥಟ್ಟನೆ ಹೊಳೆಯುವ ಇನ್ನೊಂದು ವಿಸ್ಮಯ ಎಂದರೆ ಗಾಯನ ಜಗತ್ತಿನ ಅನಭಿಷಿಕ್ತ ಸಾಮ್ರಾಟಭೀಮಸೇನ ಜೋಶಿ’! ಇಬ್ಬರಲ್ಲೂ ಎಂಥ ಸಾಮ್ಯತೆ ನೋಡಿ! ಒಬ್ಬರು ಅನಂತದೊಳಗಣ ಮೂರ್ತಿ...ಇನ್ನೊಬ್ಬರು ಕಾಯಾ, ವಾಚಾ, ಮನಸಾ, ಭೀಮಸೇನ! ಈರ್ವರೂ ಸವಾಲುಗಳು ಮತ್ತು ಸಲಾಮುಗಳನ್ನು ಪಳಗಿಸಿಕೊಂಡವರು! ಸಾಮು ಹೊಡೆದರೇ ಹೊರತು ಸಲಾಮು ಮಾಡಿದವರಲ್ಲ! ಎತ್ತರೆತ್ತರಕ್ಕೇರುತ್ತಲೇ ಜಾರಿ ಪ್ರಪಾತಕ್ಕೆ ಬೀಳದಂತೆ  ಎಚ್ಚರವಹಿಸಿದವರು.....ಧ್ಯಾನಿಸಿದವರು.... ಎಚ್ಚೆತ್ತುಕೊಂಡವರು.....ಮತ್ತು ಅನಂತರೂ......ಭೀಮಸೇನರೂ ಆಗಿ ಅನ್ವರ್ಥಕರಾದವರು!

ಇವರೀರ್ವರೂ ಭೌತಿಕವಾಗಿ ಈಗ ಇಲ್ಲದೇ ಇರಬಹುದು. ಆದರೆ... ನಮ್ಮ ನಿಮ್ಮೆಲ್ಲರ ಮಾನಸದಲ್ಲಿರುವ ಒಂದು ಪರಂಪರೆಯ ಭಾಗವಾಗಿ, ವೈಯಕ್ತಿಕ ಭಾವದೊಳಗಣ ಪರಂಪರೆಯಾಗಿ ಎಂದಿಗೂ ದೂರಸರಿಯುವುದಿಲ್ಲ!
ನಾನಿಂದುಸಂಸ್ಕಾರಕಾದಂಬರಿಯ ಕುರಿತು ನಿಮ್ಮೊಂದಿಗೆ ನನ್ನ ವಿಚಾರಗಳನ್ನು ಹಂಚಿಕೊಳ್ಳಬೇಕೆಂದು ಕೇಳಿಕೊಂಡಿದ್ದಾರೆ. ಅದಕ್ಕಿಂತಲೂ ಮೊದಲು ಒಂದು ಪೀಠಿಕೆಯೊಂದಿಗೆ ನನ್ನ ಅನಿಸಿಕೆಗಳನ್ನು ನಿಮ್ಮೊಂದಿಗೆ ಅಭಿವ್ಯಕ್ತಿಸಲು ಪ್ರಯತ್ನಿಸುತ್ತೇನೆ. ಉಡುಪಿ ರಾಜಗೋಪಾಲಾಚಾರ್ಯ ಅನಂತ ಮೂರ್ತಿ ಕನ್ನಡದ, ಆಧುನಿಕವೆಂದು ನಾವು ಕರೆಯುವ ಸಾಹಿತ್ಯಕ್ಕೆ ಏನು ಕೊಟ್ಟು ಕಡಿದು ಗುಡ್ಡೆಹಾಕಿದರು? ಎಂಬ ಪ್ರಶ್ನೆಯನ್ನಿಟ್ಟರೆ.........ಉತ್ತರಿಸುವುದು ತುಸು ಕಷ್ಟವೇ!

ಅಡಿಗರಿಂದಾರಂಭಿಸಿ ಆಡೆನ್ ವರಗೆ, ಸಾರ್ತ್ರ್, ಕಮೂ, ಎಲಿಯಟ್ ಮುಂತಾದವರನ್ನು.....ಅವರ ಅಭಿವ್ಯಕ್ತಿಯನ್ನು ಅರಗಿಸಿಕೊಂಡು ನಮಗೆ ದಾಟಿಸುವಲ್ಲಿ ಮಹತ್ವದ ಪಾತ್ರವಾದವರು. ಕನ್ನಡ ಹಾಗೂ ಕನ್ನಡದ ಆಚೆಗೆ ಮತ್ತು ಆಚಿನಿಂದ ಈಚೆಗೆ ಪರಂಪರೆ ಸಂಪ್ರದಾಯವನ್ನು ದಾಟಿಸುವ ಹರಿಗೋಲು ಮೀಟಿದವರು. ಹಾಗೆ ಮೀಟುತ್ತಲೇ ನಡು-ನಡುವೆಸರೋದಿನ ತಂತಿ ಹರಿದು ಅಪಸವ್ಯಕ್ಕೆಡೆಯಾಗುವಂತೆಆದರೂ, ಮಾನವನ್ನೂ, ಅನುಮಾನವನ್ನೂ, ಅಪಮಾನವನ್ನೂ ಸನ್ಮಾನವನ್ನೂ ಏಕಕಾಲಕ್ಕೆ ತಂಬೂರಿಯ.ಸಾ.ಸಾ.ಸಾಸ್ವರದಂತೆ ಶೃತಿಗೊಳಿಸುವಲ್ಲಿ ಹದವರಿತವರು! ಅಪಶೃತಿಯನ್ನೂ ಮೀಟಿ ಬೇಸೂರು ಸೂರಾಗಿಸುವ ತಾಂತ್ರಿಕರು!
ಲೋಕವನ್ನು ಪ್ರಶ್ನಿಸುತ್ತಲೇ, ತನ್ನನ್ನು ತಾನೇ ಪ್ರಶ್ನಿಸಿಕೊಳ್ಳಲು ಅವರು ಹಿಂಜರಿಯಲಿಲ್ಲ. ಸ್ವಯಂಸಂಶಯ ಮತ್ತು ಒಂದುರೀತಿಯ ಸಮಾಧಿಸ್ಥ ಎಚ್ಚರ ಸಾಮಾನ್ಯರಾದ ನಮಗೆ ವೈರುಧ್ಯವೆಂದು ಅನಿಸಬಹುದು. ಇರಲಿ...ಮುಂದೆ ಸಾಗೋಣ....
ಅನಂತಮೂರ್ತಿಯವರ ಭಾಷೆ ಸಂಗೀತದ ಹಾಗೆಅದರಲ್ಲಿ ಜನರನ್ನು ಒಳಗೊಳ್ಳುವ ಶಕ್ತಿಯಿದೆ. ಆಪ್ತವಾಗಿ ತೆಕ್ಕೆಗೇ ತೆಗೆದುಕೊಳ್ಳುವ ಹಾಗೆ. ಅಲ್ಲಿ ಅಹಂಕಾರಕ್ಕೆ ಎಡೆಯಿಲ್ಲ. ಬೋಧನೆಯಿಲ್ಲ. ಇದು ಹೀಗೇ ಎಂಬ ಉಪದೇಶವಿಲ್ಲ. ಮನಸ್ಸನ್ನು ತಟ್ಟುತ್ತ, ತಡವುತ್ತ, ಆನಂದವನ್ನು ಅನುಭವಿಸುವಂತೆ ಮಾಡುತ್ತಲೇ ಅರಿವಿನ ಅಲಗಿಗೆ ಸಿಲುಕಿಸುವ ಅನಂತತೆಯ ಮುಖಾಮುಖಿಯದು.

ಮುಂದೆ ಗುರಿ, ಹಿಂದೆ ಗುರುಇದ್ದರಷ್ಟೇ ಸಾಕಾಗದು. ಅದನ್ನು ಸೇರುವ ಮಾರ್ಗವೂ ಋತವಾಗಿರಬೇಕು ಎನ್ನುವ ಗಾಂಧಿತತ್ವ ಅನಂತಮೂರ್ತಿಯವರದ್ದು. ಏನೆಲ್ಲ ವೈರುಧ್ಯಗಳನ್ನು ಸಾರಿ ಹೇಳುತ್ತಲೇ ಎಲ್ಲವನ್ನೂ ಒಳಗೊಳ್ಳುವ ಅವಧೂತ ಅಲ್ಲಮನ ಮಾತಿನಹಾಗೆ ಅನಂತಮೂರ್ತಿ ಒಂದು ಬಾಗಿಗೆ ನಿಲುಕುವರಲ್ಲ. ಹಾಗೆ ಅವರನ್ನು ಬಗ್ಗಿಸುವುದೂ ಸಾಧುವಲ್ಲನೇತಿ... ನೇತಿ ಎಂದು ನೋಡಿದರೆ.... ಅಥವಾಐದರ್ ದಿಸ್ ಆರ್ ದ್ಯಾಟ್’’ ಎಂದುಕೊಂಡರೆ ಅನಂತಮೂರ್ತಿ ಇಡಿಯಾಗಿ ನಮಗೆ ಸಿಗದೇ ಹೋಗಬಹುದು!
ಕನ್ನಡ ಸಾಹಿತ್ಯಕ್ಕೆ ಹೊಸ ಸಂವೇದನೆ, ಭಾಷೆ, ನುಡಿಕಟ್ಟು ಕೊಟ್ಟ ಅನಂತಮೂರ್ತಿಯವರ ಹೊರತಾಗಿ ಕನ್ನಡ ಸಾರಸ್ವತ ಲೋಕದ ಕುರಿತು ಮಾತನಾಡರೊಡಗಿದರೆ ಅದು ಅಪೂರ್ಣವಾಗಿಬಿಡುತ್ತದೆ. ‘ಸಂಸ್ಕಾರ’, ‘ಅವಸ್ಥೆ’, ಭಾರತೀಪುರ, ‘ಭವ’ ಮುಂತಾದ ಕಾದಂಬರಿಗಳು, ‘ಎಂದೆಂದೂ ಮುಗಿಯದ ಕತೆ’, ‘ಪ್ರಶ್ನೆ’, ‘ಮೌನಿ’, ‘ಆಕಾಶ ಮತ್ತು ಬೆಕ್ಕು’, ‘ಸೂರ್ಯನ ಕುದುರೆ’ ಇತ್ಯಾದಿ ಕಥಾಸಂಕಲನಗಳು ಹಾಗೂ ‘ಸನ್ನಿವೇಶ’, ‘ಸಮಕ್ಷಮ’, ‘ಪ್ರಜ್ಞೆ ಮತ್ತು ಪರಿಸರ’, ‘ಬೆತ್ತಲೆ ಪೂಜೆ ಯಾಕೆ ಕೂಡದು?’ ‘ಋಜುವಾತು’, ‘ವಾಲ್ಮೀಕಿಯ ನೆವದಲ್ಲಿ’ ಮುಂತಾದ ವೈಚಾರಿಕ ಬರಹಗಳ ಮೂಲಕ ವಿಶಿಷ್ಟ ಒಳನೋಟಗಳನ್ನು ಹೊಳೆಸಿ, ಚಿಂತನೆಗೆ ಹೊಸ ದಿಕ್ಕನ್ನೊದಗಿಸುವ ಕಾಣ್ಕೆಯನ್ನು ನೀಡಿದವರು ಅನಂತಮೂರ್ತಿ. ಸಾಹಿತ್ಯಾಭ್ಯಾಸಿಗಳಿಗೆ ಹೊಸದಿಸೆಯನ್ನು ಪರಿಚಯಿಸಿದ ಅವರು ಇಂದಿನ ಪೀಳಿಗೆಯ ಬಹುತೇಕರಿಗೆ ಪಾಠ ಮಾಡಿಯೂ, ಮಾಡದೆಯೂ ‘ಮೇಷ್ಟ್ರಾ’ದವರು.

ಕನ್ನಡ ಹಾಗೂ ಇಂಗ್ಲೀಷ್ ಸಾಹಿತ್ಯಗಳೆರಡನ್ನೂ ಆಳವಾಗಿ ಓದಿ ಅರಗಿಸಿಕೊಂಡಮೇಲೆ ಸ್ವಂತದ್ದನ್ನು ಅಕ್ಷರವಾಗಿಸಿದ ಇವರಲ್ಲಿ ಯುಗಪ್ರಜ್ಞೆಯ ಅನಿವಾರ್ಯ ಲಕ್ಷಣ ಎಂದು ಹೇಳಬಹುದಾದ; ‘ಹೊಸತು’ ಎಂದೆನ್ನಬಹುದಾದ ಸ್ವಯಂಪ್ರತಿಭೆಯ ಅಂತಃಸತ್ವವನ್ನು ಕಾಣಬಹುದು. ದೂರ್ವಾಸಪುರದ ದೂರ್ವಾಸರೆಂದೇ ಕರೆಯಬೇಕಾದ ರಾಜಗೋಪಾಲಾಚಾರ್ಯ ಅವರ ಮಗನಾಗಿ, ಸಂಪ್ರದಾಯವನ್ನು ವಿರೋಧಿಸುತ್ತಲೇ ಆಧುನಿಕತೆಯನ್ನು ಒಪ್ಪಿಕೊಳ್ಳುತ್ತ, ಆದರೆ ಸಂಪ್ರದಾಯವನ್ನು ತಿರಸ್ಕರಿಸಲಾಗದೇ, ಒಳಗೊಳಗೇ ಆರಾಧಿಸುತ್ತ, ಅತ್ತ ಆಧುನಿಕತೆಯನ್ನೂ ಸಂಪೂರ್ಣವಾಗಿ ಅಪ್ಪಿಕೊಳ್ಳಲಾಗದೇ ಚಡಪಡಿಸುತ್ತ, ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಎಂಬಂತೆ ಆಂತರಿಕ ಸಂಘರ್ಷಗಳ ನಡುವೆಯೇ ಬೇಯುತ್ತ ಬೇಯುತ್ತ ಹದಗೊಂಡು ‘ಭವ’ ವನ್ನು ಮೀರಿದವರು.
‘ಎಂದೆಂದಿಗೂ ಮುಗಿಯದ ಕಥೆ’ ಯಿಂದಾರಂಭವಾಗುವ ಅನಂತಸಾಹಿತ್ಯಯಾತ್ರೆ ಅಷ್ಟು ಸುಲಭಕ್ಕೆ ದಕ್ಕುವ ದಾರಿಯಲ್ಲಿಲ್ಲ. ‘ಪ್ರಶ್ನೆ’ಗಳ ಮೂಲಕ ಬೆಳೆಯುತ್ತ ಗೋಪಾಲಕೃಷ್ಣ ಅಡಿಗರ ಒತ್ತಾಸೆ ಹಾಗೂ ಇಲಿಯಟ್ಟನ ‘ಪ್ರೆಲ್ಯೂಡ್’ ಪದ್ಯದ ಪ್ರಭಾವಗಳಿಂದಾಗಿ ‘ಸಂಸ್ಕಾರ’ವನ್ನು ಪಡೆಯುವಂತಾಯಿತು ಎಂದು 1970ರ ದಶಕದಾರಂಭದಲ್ಲಿ ಸ್ವತಃ ಅನಂತಮೂರ್ತಿಯವರೇ ಹೇಳಿಕೊಂಡಿದ್ದಾರೆ.

‘ಎಂದೆಂದೂ ಮುಗಿಯದೆ ಕತೆ’ ಗೂ ‘ಪ್ರಶ್ನೆ’ ಗೂ  ದಶಕಗಳ ಕಾಲದ ಅಂತರವಿದೆ. ಈ ವೇಳೆಗಾಗಲೇ ಅನಂತದಾರಿ ತೆರೆದುಕೊಂಡು ಬರವಣಿಗೆಯ ನಡೆಯಲ್ಲಿ ಹದ ಸಿಕ್ಕಿತ್ತು. ‘ಪ್ರಶ್ನೆ’ಯ ಕುರಿತು ಸ್ವತಃ ಅನಂತಮೂರ್ತಿ ಹೇಳುತ್ತಾರೆ,”ಇಲ್ಲಿ ಯಾವ ಮುಖವಾಡವನ್ನೂ ಹಾಕಿಕೊಳ್ಳದೆ ಕತೆ ಬರೆದಿದ್ದೇನೆಂದುಕೊಂಡಿದ್ದೇನೆ. ಆದರೆ ಒಂದು ಮುಖವಾಡವನ್ನು ಕಳಚಿದಾಗ, ವಾಸ್ತವವಾಗಿ ಅದರ ಬದಲು ಇನ್ನೊಂದು ಮೊಗವಾಡವೇ ಇರಬಹುದಲ್ಲವೇ? ಎಂಬ ಶಂಕೆಯೂ ಬರುವುದುಂಟು”. ಇದು ಅನಂತಮೂರ್ತಿಯ ಸತ್ಯದರ್ಶನಕ್ಕೆ ಹಿಡಿಯಬಹುದಾದ ಕನ್ನಡಿ.
ನೆಪೋಲಿಯನ್, ಸಾಕ್ರೆಟಿಸ್, ಕಾರ್ಲ್ ಮಾರ್ಕ್ಸ್, ವಾಲ್ಟರ್ ಬೆಂಜಮಿನ್, ಹಾಗೂ ಇನ್ನೂ ಅನೇಕ ಶಕ್ತಿಗಳ ಹಾಗೆ ಅನಂತಮೂರ್ತಿ ಕೂಡಾ ಒಂದು ವ್ಯಕ್ತಿಯ ರೂಪವಷ್ಟೇ ಅಲ್ಲ. ಹಲವು ವ್ಯಕ್ತಿತ್ವಗಳನ್ನು ಒಳಗಿಳಿಸಿ ಜೀರ್ಣಿಸಿಕೊಂಡ ವ್ಯಕ್ತಿಗಳ ಸಮ್ಯಕ್ ಗೀತ. ಹಲವು ಧ್ವನಿಗಳ ಸಿಂಫನಿ. ಸುಮಾರು ಐದು ದಶಕಗಳಿಗೂ ಮಿಕ್ಕಿದ ಕಾಲವನ್ನು ವೈಚಾರಿಕ, ಸೃಜನಾತ್ಮಕ ಚಟುವಟಿಕೆಗಳಲ್ಲಿ ಕಳೆಯುವ ಮೂಲಕ ಬೆಳೆದವರು ಅವರು. ಈ ಕಾಲಘಟ್ಟದಲ್ಲಿ ಕಟ್ಟಾ ವಿಚಾರವಾದದಿಂದ ಹಿಡಿದು ಮುಂದುವರೆದು ಒಣವೈಚಾರಿಕತೆಯನ್ನು ಪ್ರಶ್ನಾರ್ಥಕವಾಗಿ ಕಾಣುವ ಕ್ರಮಣವೂ ಕಂಡುಬರುತ್ತದೆ.  ಅನಂತಮೂರ್ತಿ ನಡೆ ಪ್ರಾರಂಭದಲ್ಲಿ ಧರ್ಮ, ಆಧ್ಯಾತ್ಮ, ಪರಂಪರೆ ಕುರಿತು ಅನೇಕ ವಿರೋಧಗಳ ನಡುವೆ ಆರಂಭವಾಗಿ ಕೊನೆಕೊನೆಗೆ ವಿನಮ್ರತೆ, ಉದಾರತೆಯ ಹೆಜ್ಜೆಯಾಗಿ ಪರಿವರ್ತನೆಗೊಂಡದ್ದನ್ನೂ ಗಮನಿಸಬಹುದು. ಸಾಂಸ್ಕೃತಿಕ ಇತಿಹಾಸ ಗೊತ್ತಿಲ್ಲದೇ ಇದ್ದರೆ ಅವರ  ದಾರಿಯ ಹೆಜ್ಜೆಗುರುತುಗಳು ಅರ್ಥವಾಗಲಿಕ್ಕಿಲ್ಲ.

“ ‘ಸಂಸ್ಕಾರ’ ಪ್ರಾಣೇಶಾಚಾರ್ಯರ ಮಾನಸಿಕ ಗೊಂದಲದಲ್ಲಿ ಕೊನೆಗೊಳ್ಳುತ್ತದೆ. ಕಾದಂಬರಿಯ ಕೊನೆಯಲ್ಲಿ ಅವರು ಊರಿಗೆ ಮರಳಲು ಎತ್ತಿನಗಾಡಿಯೇರುತ್ತಾರೆ. ಆದರೆ ಮುಂದೇನು ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ. ‘ಭಾರತೀಪುರ’ದಲ್ಲಿ ಕ್ರಾಂತಿ ಕೊನೆಗೊಳ್ಳುವುದು ದೇವರ ಮೂರ್ತಿ ಕಳುವಾಗುವ ಮೂಲಕ. ಇಲ್ಲಿಯೂ ಯಾವುದೇ ಕ್ರಿಯೆಯಿಲ್ಲ. ಮುಂದಾಗಬಹುದಾದ ಕ್ರಿಯೆಯ ಸೂಚನೆಯೂ ಇಲ್ಲ. ಆದರೆ ಮುಂದಿನ ಕೃತಿ ‘ಅವಸ್ಥೆ’ ಮಾತ್ರ ಅಂಥದೊಂದು ಸೂಚನೆಯನ್ನು ನೀಡುತ್ತದೆ. ಇನ್ನೂ ದಡ ದಾಟದವರು ಸಿಡಿದೇಳದೇ ಯಾವ ಕ್ರಾಂತಿಯೂ ಸಾಧ್ಯವಿಲ್ಲ, ಅಲ್ಲಿಯ ತನಕ ಯಾವ ರಾಜಕೀಯ ವ್ಯವಸ್ಥೆಗೂ ಅರ್ಥವಿಲ್ಲ ಎಂಬ ಕೃಷ್ಣಪ್ಪನ ವಿಚಾರದೊಂದಿಗೆ ಕಾದಂಬರಿ ಕೊನೆಗೊಳ್ಳುತ್ತದೆ. ಈ ಮೂರೂ ಕಾದಂಬರಿಗಳನ್ನು ಒಂದು ಟ್ರಿಲಜಿಯಾಗಿ ಕೆ.ವಿ.ಸುಬ್ಬಣ್ಣ ಗುರುತಿಸಿದ್ದಾರೆ. ಇವುಗಳ ಟ್ರಾಜೆಕ್ಟರಿ ಕೂಡ ಅನಂತಮೂರ್ತಿಯವರ ವೈಚಾರಿಕ ಬೆಳವಣಿಗೆಯ ಪ್ರತೀಕವೇ ಎಂದು ಗುರುತಿಸಬೇಕಾಗುತ್ತದೆ”, ಎಂದು ಕೆ.ವಿ.ತಿರುಮಲೇಶರು ಹೇಳುತ್ತಾರೆ.
ಅನಂತಮೂರ್ತಿಯವರೊಳಗಡೆಗೆ ಪೋಸ್ಟ್ ಮಾಡರ್ನಿಸಂ ವಿಚಾರ ತೀವ್ರವಾಗಿ ತಿಣುಕಾಡುತ್ತಿದ್ದ ಸಂದರ್ಭದಲ್ಲಿ ‘ಸಂಸ್ಕಾರ’ ಮೂಡಿಬಂದಿತೆನ್ನಬಹುದು. ಪಾಶ್ಚಾತ್ಯ  ಅನುಕರಣೆಗೆ ವಿರುದ್ಧವಾಗಿ ವಿಚಾರ ಮಾಡುತ್ತಿದ್ದ ಸಮಯವದು. ಕೇವಲ ಪಾಶ್ಚಾತ್ಯ ಸಾಹಿತ್ಯದ ಪ್ರಭಾವಮಾತ್ರದಿಂದಲೇ ಒಂದು ಕೃತಿ ಮೇಲ್ಮಟ್ಟದ್ದಾಗುತ್ತದೆ ಎಂಬುದನ್ನು ಅನಂತಮೂರ್ತಿ ಎಂದೂ ಒಪ್ಪಿದವರಲ್ಲ.”ಒಳ್ಳೆಯ ಸಾಹಿತ್ಯಕ್ಕೆ ಅನಿವಾರ್ಯವಾದ ಅನನ್ಯತೆಯೆಂದರೆ ಪಾಶ್ಚಾತ್ಯರ ಅನುಕರಣೀಯ ನವ್ಯಪ್ರವೃತ್ತಿಯಲ್ಲ. ಕನ್ನಡತನವೇ ಅದರ ಜೀವಸತ್ವ. ಅಡಿಗರ ಅನೇಕ ವಿಚಾರಗಳನ್ನು ನಾನು ಒಪ್ಪುವುದಿಲ್ಲವಾದರೂ, ಕನ್ನಡತನದ ಬಗ್ಗೆ ಇರುವ ಜರೂರು ಅಡಿಗರ ಬರವಣಿಗೆಯ ವೈಶಿಷ್ಟ್ಯ. ರಮ್ಯ ಕಾವ್ಯ ಮಾರ್ಗವನ್ನನುಸರಿಸಿದ ನಮ್ಮ ಹಿರಿಯ ಕವಿಗಳೂ ಕೂಡ ಪಾಶ್ಚಾತ್ಯರ ಅನುಕರಣೆಯಿಂದ ದೊಡ್ಡವರಾಗಲಿಲ್ಲ. ಕುವೆಂಪು, ಕಾರಂತ, ಮಾಸ್ತಿ, ಬೇಂದ್ರೆ- ಇವರ ಹಿರಿಮೆಗೆ ಅವರ ಕೃತಿಗಳ ಕನ್ನಡತನವೆ ಕಾರಣ. ಯಾವುದನ್ನು ಬರೆದರೂ ಅದು ಭಾಷೆಯಲ್ಲಿ ಅವತಾರವಾಗಬೇಕೆಂಬುದು ಅಡಿಗರ ಸಿದ್ಧಾಂತ.  ಸೂತ್ರವನ್ನನುಸರಿಸಿದ್ದರಿಂದಲೇ ‘ಸಂಸ್ಕಾರ’ದ ಸಾರ್ಥಕ್ಯ. ನನ್ನ ಮೇಲೆ ಅಡಿಗರ ಪ್ರಭಾವವಿಲ್ಲದಿದ್ದರೆ ಬಹುಶಃ ಈ ಕಾದಂಬರಿ ನೂರೈವತ್ತಕ್ಕಿಂತ ಕಡಿಮೆ ಪುಟಗಳಲ್ಲಿ ಇಷ್ಟೊಂದು ದಟ್ಟವಾಗಿ ಬರುತ್ತಿರಲಿಲ್ಲ. ಬಹುಶಃ ಇದು ನಾನೂರು ಐನೂರು ಪುಟಗಳಿಗೆ ಹಿಗ್ಗುತ್ತಿತ್ತು.

ನಮ್ಮ ಸಾಹಿತ್ಯ ದೊಡ್ಡದಾಗಬೇಕಾದರೆ ಪಾಶ್ಚಾತ್ಯ ಪ್ರಭಾವದಿಂದ ದೂರವಾದ ನಮ್ಮ ಸ್ವಂತ ಅನುಭವಗಳನ್ನೇ ಆರಿಸಿಕೊಳ್ಳಬೇಕು. ಆಗ ಮಾತ್ರವೇ ಕೃತಿಯಲ್ಲಿ ಪ್ರಾಮಾಣಿಕತೆ ಸಾಧ್ಯ. ಆದ್ದರಿಂದಲೇ ನಾನು ನನ್ನ ಬಾಲ್ಯದ ಅನುಭವವನ್ನೇ, ಅಂದಿನ ಪರಿಸರವನ್ನೇ, ಈ ಕಾದಂಬರಿಗೆ ವಸ್ತುವಾಗಿ ಆರಿಸಿಕೊಂಡೆ. ‘ಕಾನೂರು ಹೆಗ್ಗಡತಿ’ಯಲ್ಲಿ ಕುವೆಂಪುರವರೂ, ‘ಗ್ರಾಮಾಯಣ’ದಲ್ಲಿ ರಾವಬಹಾದ್ದೂರರೂ, ತಮ್ಮ ಅನೇಕ ಕಾದಂಬರಿಗಳಲ್ಲಿ ಶಿವರಾಮ ಕಾರಂತರೂ ಮಾಡಿದ್ದಾದರೂ ಇದನ್ನೇ” ಎಂದು ಅನಂತಮೂರ್ತಿಯವರೇ ಹೇಳಿಕೊಂಡಿದ್ದಾರೆ.
ಮಲೆನಾಡು...ಮೈಸೂರು...ಬರ್ಮಿಂಗ್ ಹ್ಯಾಮ್ ಸುತ್ತಾಡಿ, ಪೂರ್ವ-ಪಶ್ಚಿಮಗಳ ಕೊಂಡಿಯಾಗಿ ಎರಡು ಮಹಾಯುದ್ಧಗಳ ಕಾಲದ ಪಶ್ಚಿಮದ ಸಾಹಿತ್ಯವನ್ನು ಅಭ್ಯಸಿಸಿದ ಅನಂತಮೂರ್ತಿಯ ‘ಸಂಸ್ಕಾರ’ ಅನೇಕ ಪರಿಧಿಗಳ ಸಮ್ಮಿಳನ. ಅನೇಕ ವೈಚಾರಿಕ ಪೂರ್ಣಪ್ರಶ್ನೆಗಳ ಸಮನ್ವಯದ ಪ್ರಯತ್ನ. ಮಲೆನಾಡಿನ ಹಳ್ಳಿಯ ಬ್ರಾಹ್ಮಣ ಸಮಾಜವೊಂದರ ಚಿತ್ರಣವನ್ನು ಇಲ್ಲಿ ಕಾಣಬಹುದಾದರೂ ಇದು ಎಲ್ಲ ಜನಾಂಗಗಳಿಗೂ ಅನ್ವಯವಾಗುವ ಶಾಶ್ವತ ಪ್ರಶ್ನೆಯೊಂದನ್ನು ಎತ್ತುತ್ತದೆ. ‘ಸಂಸ್ಕಾರ’ ಚಲನಚಿತ್ರವನ್ನು ನೋಡಿದ ಶ್ರೀಮತಿ ರೂಬೆನ್ಸ್ ಎಂಬುವವರು ಬರೆಯುತ್ತಾರೆ, “ ಇದು ಕನ್ನಡದ ನೆಲಗಟ್ಟಿನ ಮೇಲೆ ನಿಲ್ಲಿಸಿದ ಸಾರ್ವತ್ರಿಕ ವಸ್ತು. ಇದು ಮಾಧ್ವ ಸಮುದಾಯಕ್ಕೆ ಮಾತ್ರವೇ ಅನ್ವಯಿಸುವ ಸಮಸ್ಯೆಯಲ್ಲ. ಯಾವ ಧರ್ಮಗ್ರಂಥವೇ ಆಗಲಿ, ಸಂದಿಗ್ಧ ಸಮಯದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲವೆಂಬುದು ಈ ಕೃತಿಯ ಅಂತಃಸೂತ್ರ. ಇಡಿಯ ಸಮಾಜವನ್ನೇ ಕೆಣಕುವ ಉತ್ಕಟ ಸಂದರ್ಭದಲ್ಲಿ ವ್ಯಕ್ತಿಗೆ ತನ್ನಿಂದ ಹೊರಗೆ ಸಮರ್ಪಕ ಉತ್ತರವೇನೂ ಸಿಗುವುದಿಲ್ಲ.” ಅನಂತಮೂರ್ತಿಯವರ ದೃಷ್ಟಿಯಲ್ಲಿ ಸ್ಥೂಲವಾಗಿ ಇದೇ ಸಂಸ್ಕಾರದಲ್ಲಿ ಕಾಣಬೇಕಾದ ವಿಚಾರ.

“ಸಂಸ್ಕಾರವನ್ನು ಬರೆಯುವ ವೇಳೆಗೆ ನನ್ನ ಮೇಲೆ ಅನೇಕರು ಪ್ರಭಾವ ಬೀರಿದ್ದರು. ಜೀನ್ ಪಾಲ್ ಸಾರ್ತ್ರೆ ಒಬ್ಬರು. ಇನ್ನೊಬ್ಬರು ನಮ್ಮವರೇ ಆದ ಜೆ.ಕೃಷ್ಣಮೂರ್ತಿ. ಪಾಶ್ಚಾತ್ಯ ತತ್ವಜ್ಞಾನಿಗಳಾದ ಹೆಗೆಲನೂ ಮಾರ್ಕ್ಸ್ ನೂ ಇನ್ನಿಬ್ಬರು. ಇವರೆಲ್ಲರ ವಿಚಾರ ಮಥನ ಮಾಡಿ, ಅವನ್ನು ಅನುಭವದ ಒರೆಗೆ ತಿಕ್ಕಿದಾಗ ಹುಟ್ಟಿದ್ದೇ ‘ಸಂಸ್ಕಾರ’ ಎಂದು ಅನಂತಮೂರ್ತಿಯವರೇ ಹೇಳಿಕೊಂಡಿದ್ದಾರೆ.

‘ಯದ್ಭಾವಂ ತದ್ಭವತಿ’ ಎನ್ನುವುದು ಸ್ಥೂಲವಾಗಿ ಸಾರ್ತ್ರೆಯ ವಿಚಾರ. ಆದರೆ ಕೇವಲ ಸಂಕಲ್ಪಬಲದಿಂದಲೇ ಯಾವುದೂ ಸಾಧ್ಯವಿಲ್ಲ ಎಂಬುದು ಕೃಷ್ಣಮೂರ್ತಿಯವರ ಆಲೋಚನೆಯ ಸಾರ. ಸಂಕಲ್ಪಶಕ್ತಿಯ ಆಚೆಗಿನ ಸಹಜಜೀವನಕ್ಕೆ ತುಡಿಯಬೇಕು ಎಂಬ ಡಿ.ಎಚ್.ಲಾರೆನ್ಸನ ವಾದಕ್ಕೆ ಇದು ಹತ್ತಿರ ಹತ್ತಿರವಾಗಿದೆ ಎನ್ನಬಹುದು. ಮಾನವನ ಜೀವಂತಿಕೆ ನಾಶವಾಗುತ್ತಿರುವ ಚಿತ್ರವನ್ನೇ ಸಾಮಾಜಿಕವಾಗಿ ಮಾರ್ಕ್ಸ್ ಕೂಡ ಕಂಡುಕೊಂಡ. ಬಂಡವಾಳ ವ್ಯವಸ್ಥೆಯ ಫಲವಾಗಿ ವ್ಯಕ್ತಿಗಳ ನಡುವಿನ ಸಂಬಂಧ ಅಪ್ರತ್ಯಕ್ಷವೂ ವಿಮುಖವೂ ಆಗುವುದೆಂಬುದಾಗಿ ಮಾರ್ಕ್ಸ್ ಹೇಳಿದ. ಯಾವುದನ್ನೂ ಅತಿಗೆ ಕೊಂಡೊಯ್ದಾಗ ಅದರ ಒಳಗಡೆಯೇ  ಅದನ್ನು ನಾಶಮಾಡುವ ಶಕ್ತಿ ಹುಟ್ಟಿ ಬೆಳೆಯುತ್ತದೆ ಎಂಬುದು ಹೆಗೆಲನ ತತ್ವ.  ಎಲ್ಲವನ್ನೂ ಕೈಯಾಡಿಸಿ ಪ್ರಮಾಣಿಸುವ ಪ್ರಯತ್ನವೇ ‘ಸಂಸ್ಕಾರ’.
ಇಲ್ಲಿ ಪ್ರಾಣೇಶಾಚಾರ್ಯನೂ, ನಾರಾಣಪ್ಪನೂ ಹೊರಗಣ್ಣುಗಳಿಗೆ ಪರಸ್ಪರ ಭಿನ್ನವಾಗಿ ಕಂಡರೂ ಆಂತರ್ಯದಲ್ಲಿ ಇಬ್ಬರೂ ಒಂದೇ! ಆದರ್ಶ ಜೀವನವನ್ನೇ ನಡೆಸುತ್ತೇನೆ ಎಂಬುದು ಪ್ರಾಣೇಶಾಚಾರ್ಯನ ಸಂಕಲ್ಪ. ಅದಕ್ಕಾಗಿಯೇ ಅವನು ಜೀವನಕ್ಕೆ ಬೆನ್ನುಹಾಕುವ ಪ್ರಯತ್ನ ಮಾಡಿ ಸೋತಂತ ಭಾವವನ್ನು ಅನುಭವಿಸುತ್ತಾನೆ. ಪ್ರಾಣೇಶಾಚಾರ್ಯನ ಧಾರ್ಮಿಕ ‘ಕೊಳ್ಳುಬಾಕತನ’ ವನ್ನು ಅಲ್ಲಗಳೆದು, ಅದನ್ನು ಸಾಧಿಸುವ ಸಲುವಾಗಿಯೇ ನಾರಣಪ್ಪನು ಆಚಾರ್ಯನಿಗೆ ವಿರೋಧವಾಗಿ ಸಂಪೂರ್ಣ ವಿರೋಧಿಯಾದ ಜೀವನವನ್ನು ಬದುಕುತ್ತಾನೆ. ಬಾಲ್ಯದಲ್ಲಿ ಕಾಶಿಯಲ್ಲಿ ಪ್ರಾಣೇಶಾಚಾರ್ಯನ ಒಡನಾಡಿಯಾಗಿದ್ದ ಮಹಾಬಲ, ಇದ್ದಕ್ಕಿದ್ದಂತೆಯೇ ದಾರಿಬಿಟ್ಟಿದ್ದನ್ನು, ಗುಡುಗುಡಿ ಸೇದುತ್ತ, ಹೆಣ್ಣಿನ ಹಿಂದೆ ನಡೆದದ್ದನ್ನೂ ಕಂಡಿದ್ದ ಪ್ರಾಣೇಶಾಚಾರ್ಯ, ಅದೇ ರೀತಿಯ ಅರಾಜಕ ನಡೆಯನ್ನು ನಡೆದ ನಾರಣಪ್ಪನಲ್ಲಿ ಮಹಾಬಲನನ್ನು ಕಂಡಿದ್ದರು. ಅವನನ್ನು ಪರಿವರ್ತಿಸುವ ಹಾದಿಯಲ್ಲಿ ತಾವು ಸೋತರು. ಪ್ರಾಣೇಶಾಚಾರ್ಯರ ಸಂಕಲ್ಪಕ್ಕೆ ವಿರುದ್ಧವಾದ ಹಠತೊಟ್ಟಿದ್ದ ನಾರಣಪ್ಪನೂ ಸೋತ. ಪ್ರಾಣೇಶಾಚಾರ್ಯ ಏನನ್ನು ದೃಢವಾಗಿ ನಂಬಿದ್ದನೋ, ಅದರಂತೆ ನಡೆದಿದ್ದನೋ, ಅದೇ ಧರ್ಮ ಅವನ ದ್ದೇಶಕ್ಕೆ ವಿರುದ್ಧವಾದ ಪರಿಣಾಮವನ್ನು ಉಂಟುಮಾಡಿದ್ದನ್ನರಿತಾಗ, ಪ್ರಾಣೇಶಾಚಾರ್ಯನ ಶ್ರೇಷ್ಠತೆಯ ವ್ಯಸನಕ್ಕೆ ಬಲವಾದ ಪೆಟ್ಟು ಬಿದ್ದಾಗ ಸತ್ಯದ ದರ್ಶನವಾಗುತ್ತದೆ. ಬದುಕನ್ನು ಇದ್ದ ಹಾಗೆ ಸ್ವೀಕರಿಸುವ ಮಾಲೇರ ಪುಟ್ಟನ ಮೂಲಕ ಪ್ರಾಣೇಶಾಚಾರ್ಯ ತನ್ನನ್ನು ಮರುರಚಿಸಿಕೊಳ್ಳುವತ್ತ ಚಿತ್ತೈಸುತ್ತಾನೆ. ಹೆಣ್ಣು, ಹೊನ್ನಿನ ಮಣ್ಣಿನ ಪದರವನ್ನು ಜಾಲಾಡಿಸಿದಾಗ ಬಾಳಸತ್ವ ಏನೆಂಬ ಗಟ್ಟಿಕಾಳು ಕಾಣುತ್ತದೆ. ಕಾದಂಬರಿಯಲ್ಲಿ ಹೆಣ್ಣುಗಂಡುಗಳು ಪರಸ್ಪರ ಮೈಥುನದಲ್ಲಿ ತೊಡಗಿರುವ ಸಂದರ್ಭಗಳಲ್ಲಿಯೂ ಈ ವಿಚಾರ ಸ್ಖಲಿಸುವುದನ್ನು ಕಾಣಬಹುದು!

ನಾರಾಣಪ್ಪನ ಶವಸಂಸ್ಕಾರದ ಕುರಿತಂತೆ ಪ್ರಾರಂಭವಾಗುವ ಕಾದಂಬರಿ ಕೊನೆಯಲ್ಲಿ ಪ್ರಾಣೇಶಾಚಾರ್ಯನಿಗೆ ಹೊಸ ಸಂಸ್ಕಾರದ ಹೊಳಹನ್ನು ನೀಡುವುದರ ಮೂಲಕ ಒಂದು ರೀತಿಯ ಟ್ರಾನ್ಸೆಂಡೆಂಟಲ್ ಟ್ರಾನ್ಸ್ಫಾರ್ಮೇಶನ್ನಿಗೆ ಒಳಗಾಗಿ ಬೆರಗು ಮೂಡಿಸುತ್ತದೆ. ಸಂಸ್ಕಾರವನ್ನು ಪಡೆಯಲಾರದೇ ಕೊಳೆತು ನಾರಹತ್ತಿದ ನಾರಾಣಪ್ಪನಿಗೆ ಒಂದು ರೀತಿಯಲ್ಲಿ ಪ್ರಾಣೇಶಾಚಾರ್ಯನಿಂದಲೇ ಸಂಸ್ಕಾರವಾಗುತ್ತದೆ. ಚಂದ್ರಿಯೊಡನೆ ಸಂಭವಿಸುವ ಸಂಭೋಗ ಅದಕ್ಕೆ ಮುನ್ನುಡಿಯಾಗುತ್ತದೆ. ಧರ್ಮಶಾಸ್ತ್ರ ಹೇಳದ, ತೋರದ ಸರಳ ಸತ್ಯ ಚಂದ್ರಿಯ ತುಂಬು ಮೈ, ಮೊಲೆಗಳ ಮೂಲಕ ತೆರೆದುಕೊಳ್ಳುತ್ತ ಸಾಗಿ ಬಿಗಿದು ಕಟ್ಟಿದ  ಕೌಪೀನದ ಕಟ್ಟಿನಿಂದ ರಭಸದಿಂಧ ಒಡೆದುಬಂದು ಚಿಮ್ಮಿದ ಪ್ರಾಣೇಶಾಚಾರ್ಯನ ವೀರ್ಯ ಹೊಸ ಧರ್ಮ ದರ್ಶನವನ್ನು ಪ್ರಾಣೇಶಾಚಾರ್ಯನಲ್ಲಿ ಸ್ಫುರಿಸುತ್ತದೆ. ಮಹಾಬಲ, ನಾರಾಣಪ್ಪ ಪರೋಕ್ಷವಾಗಿ ಈ ಮಾರ್ಗಕ್ಕೆ ಪ್ರಾಣೇಶಾಚಾರ್ಯನನ್ನು ಎಳೆಯುವ ಮೂಲಕ ಹೊಸ ಸಂಸ್ಕಾರವೊಂದರ ಬೀಜ ಬಲಿಯಲು ಕಾರಣರಾಗುತ್ತಾರೆ. ಪ್ರಾಣೇಶಾಚಾರ್ಯನಲ್ಲಿ ಅವರೂ ಲೀನರಾಗುತ್ತಾರೆ. ಇದೊಂದು ಅದ್ವೈತಾನುಭವ!

ಲೋಹಿಯಾ ವಿಚಾರಧಾರೆಯಿಂದಲೂ ಪ್ರಭಾವಿತರಾಗಿರುವ ಅನಂತಮೂರ್ತಿ ತಮ್ಮ ಸಂಸ್ಕಾರ ಕಾದಂಬರಿಯಲ್ಲಿ ಪುರಾಣ ಕಥೆಯೊಂದರ ವಿಚಿತ್ರ ಸಂಮಿಲನವನ್ನು ಹೆಣೆಯುತ್ತಾರೆ. ಪುರಾಣ ಪ್ರಸಿದ್ಧ ಪರಾಷರ ಮಹರ್ಷಿ ಮತ್ಸ್ಯಗಂಧಿಯನ್ನು ಕಂಡಾಗ ಆಸೆಗೊಳ್ಳುತ್ತಾನೆ. ಸಹಜವಾಗಿ ಅವಳೊಂದಿಗೆ ಸಂಭೋಗಸುಖವನ್ನು ಅನುಭವಿಸುತ್ತಾನೆ. ಉಂಡು ಕೈತೊಳೆದು ವರೆಸಿಕೊಂಡಷ್ಟು ಸಹಜವಾಗಿ ನಿರ್ಮೋಹಿಯಂತೆ ಹೊರಟುಹೋಗುತ್ತಾನೆ.ಪ್ರಾಣೇಶಾಚಾರ್ಯನಿಗೂ ಇದೇ ರೀತಿ ಅನುಭವವಾದರೂ ಪರಾಶರನಿಗೆ ಇಲ್ಲದ ಭಯ ಇಲ್ಲಿ ಕಾಡುತ್ತದೆ. ಈವರೆಗೂ ಕಟ್ಟಿಕೊಂಡ ಮುಖವಾಡ ಕಳಚಿಬಿದ್ದ ಭಯ! ಕೊನೆಗೆ ಕಾದಂಬರಿ ಮುಗಿಯುವ ಹೊತ್ತಿಗೆ ಆತ ಯಾವ ಭಯವೂ ಇಲ್ಲದ ಸ್ಥಿತಿ ತಲುಪುವವರೆಗೆ ಪ್ರಾಣೇಶಾಚಾರ್ಯನ ವಿಕಾಸವುಂಟಾಗುವುದು ಕಾದಂಬರಿಯಲ್ಲಿ ಸಂಭವಿಸುವ ಒ0ದು ದೊಡ್ಡ ನೆಗೆತ (ಲೀಪ್).
ವಸಂತ ಭಟ್, ಹಾಸಣಗಿ

(12 ಸೆಪ್ಟೆಂಬರ್ 2014, ಶುಕ್ರವಾರದಂದು ತುಮಕೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ ವಿಭಾಗದಲ್ಲಿ ಮಾಡಿದ ಉಪನ್ಯಾಸ)

Friday, August 22, 2014

ಮನಸ್ಸು ಭಾವುಕವಾಗಿದೆ. ಮೇಷ್ಟ್ರೇ...... ನೀವು ಹೋಗಿಬಿಟ್ಟಿರಿ....... ಅನಂತ... ಆಕಾಶಕ್ಕೆ!


ಅನಂತಮೂರ್ತಿ ಅವರು ತೀವ್ರ ಅಸ್ವಸ್ಥಸ್ಥಿತಿಯಲ್ಲಿದ್ದಾರೆ ಎಂಬ ಫೇಸ್ ಬುಕ್ ಸ್ಟೇಟಸ್ ತಿಳಿದು ಬಂದಿದ್ದು  ಹೊತ್ತು ನಡು ಮದ್ಯಾಹ್ನ. ಆಗಿನಿಂದಲೂ ಒಂದು ರೀತಿಯ ಅವ್ಯಕ್ತ ಕಸಿವಿಸಿ, ತಳಮಳ ನನ್ನನ್ನಾವರಿಸಿತ್ತು. ಅವರು ನನ್ನ ತಲೆಮಾರಿನ ಹುಡುಗರಿಗೆಲ್ಲ ಮೇಷ್ಟ್ರೇ! ಇಡೀ ಪರಂಪರೆಯ ಸಾಕ್ಷಿಪ್ರಜ್ಞೆಯಾಗಿ ಹಲವಾರು ವಿಧಗಳಲ್ಲಿ ನಮ್ಮಂತಹವರನ್ನು ಕಾಡಿದವರು, ಕಾಪಾಡಿದವರೂ ಕೂಡ! ಮೇಷ್ಟ್ರ ಏನೆಲ್ಲ ಗುಣದೋಷಗಳನಡುವೆಯೂ ಅವರೊಳಗಿನ ಮಗುಸಹಜ ಭಾವದ ಮೂಲಕ ನಮ್ಮನ್ನೆಲ್ಲ ನಿರಂತರವಾಗಿ ಕಾಪಿಡುವ  ತಾಯಿಯ  ಗುಣುದ ಕಾರಣಕ್ಕಾಗಿಯೇ ನನಗೆ ಅವರು ಬಹುಮುಖ್ಯರೆನಿಸುತ್ತಾರೆ. ಅವರ ನಿಧನವನ್ನು ನನಗಿನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ.

ಯು.ಆರ್.ಅನಂತಮೂರ್ತಿ ನನಗೆ ಪರಿಚಯವಾಗಿದ್ದು ಅವರ ಘಟಶ್ರಾದ್ಧ ಸಿನಿಮಾದ ಮೂಲಕ. ನಾನಾಗ ಪ್ರೈಮರಿ ಶಾಲೆಯ ನಾಲ್ಕೋ ಐದನೆಯ ತರಗತಿಯ ವಿದ್ಯಾರ್ಥಿ. ನಮ್ಮೂರಿನ ಹೈಸ್ಕೂಲಿನಲ್ಲಿ ನೀನಾಸಂ ಸಹಯೋಗದೊಂದಿಗೆ ಚಲನಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದರು. ಅದನ್ನು ಅರ್ಥ ಮಾಡಿಕೊಳ್ಳುವ ವಯಸ್ಸೇನೂ ಅಲ್ಲ ಅದು.ಆದರೂ ಆ ಸಿನಿಮಾ ನೋಡುತ್ತ  “ನಾಣೀ.... ಹಾವೂ....” ಎಂದು ಕೂಗಿದ್ದು ಮಾತ್ರ ಇನ್ನೂ ನೆನಪಿದೆ!   
ಆ ನಂತರದಲ್ಲಿ ಏಳು-ಎಂಟನೇ ತರಗತಿಯ ಸುಮಾರಿಗೆ ಜಿ.ಕೆ.ಮಾಸ್ತರರ ಪ್ರಭಾವದಿಂದಾಗಿ ಅವರ ಸಂಸ್ಕಾರ, ಭಾರತೀಪುರ, ಅವಸ್ಥೆ ಮುಂತಾದ ಕಾದಂಬರಿಗಳನ್ನು ಓದಿದ್ದರೂ ಅವರು ನನ್ನನ್ನು ಕಾಡತೊಡಗಿದ್ದು ಈಗೊಂದು ಐದಾರು ತಿಂಗಳ ಹಿಂದೆ ಮಾತ್ರ!  ಇಂಗ್ಲೀಷ್ ಎಂ.ಎ.ಓದುವಾಗ ಅನಂತಮೂರ್ತಿ ಅವರ ಸಮಗ್ರ ಸಾಹಿತ್ಯವನ್ನು ಹೊಸದಾಗಿ ಓದಿದಾಗ! ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಅವರ ಮಾತುಗಳನ್ನು ಕೇಳಿಸಿಕೊಂಡಾಗ! ಈ ಮನುಷ್ಯ ಜೀವಿತವಿದ್ದ ಕಾಲದಲ್ಲಿ ನಾವೂ ಇದ್ದೇವಲ್ಲ. ಅದರಲ್ಲೂ ಅವರನ್ನು ಹತ್ತಿರದಿಂದ ಬಲ್ಲವರಾಗಿದ್ದೇವಲ್ಲ ಎಂಬ ಪುಳಕ ಹೇಳಲು ಬರುವುದಿಲ್ಲ.
ಅನಂತಮೂರ್ತಿ ನಮಗೆ ಹತ್ತಿರವೆನಿಸುವಂತಾಗಿದ್ದು ಹೆಗ್ಗೋಡಿನ ಮೂಲಕ. ಮೊತ್ತಮೊದಲ ಸಲ ನಾನು ಅವರನ್ನು ನನ್ನ ಎಂಟನೆಯ ತರಗತಿಯಲ್ಲಿರುವಾಗ ಕಂಡಿದ್ದು ಹೆಗ್ಗೋಡಿನಲ್ಲಿ! ಒಂದು ರೀತಿಯ ಆರಾಧನೆ... ಒಂದು ರೀತಿಯ ಗೌರವದ ಭಾವವದು. ದೂರದಿಂದಲೇ ಅವರನ್ನು ಹೆಗ್ಗೋಡಿನ ಸಂಸ್ಕೃತಿ ಶಿಬಿರದಲ್ಲಿ ನಿರಂತರವಾಗಿ ಗಮನಿಸುತ್ತ ಅವರ ಸುತ್ತಮುತ್ತಲೇ ಸುಳಿದಾಡುತ್ತ ತುಸು ದೂರದಿಂದಲೇ ಗಮನಿಸುತ್ತಿದ್ದೆ.ಆದರೆ... ಮಾತನಾಡಿಸುವ ಧೈರ್ಯವಾಗಿರಲಿಲ್ಲ! ನಮ್ಮ ತಂದೆಯವರು ಅವರಿಗೆ ಸುಮಾರು ವರ್ಷಗಳಿಂದಲೂ ಆಪ್ತರು.  ತಂದೆಯವರ ಹೆಸರು ಹೇಳಿಕೊಂಡು ‘ಇಂತವರ ಸಂಬಂಧಿಕರು’ ಎಂದು ಪರಿಚಯಿಸಿಕೊಂಡು ಅವರ ಹತ್ತಿರ ಬಹಳೇ ಸಲುಗೆಯಿಂದ ಮಾತಾನಾಡುತ್ತಿರುವವರನ್ನು ಗಮನಿಸಿಯೂ, ನಾನೂ “ಇಂತವರ ಮಗ” ಎಂದು ಹೇಳಿಕೊಂಡು ಅವರನ್ನು ಮಾತನಾಡಬೇಕೆಂದು, ಹತ್ತಿರದಿಂದ ಒಡನಾಡಬೇಕೆಂದು  ಅನಿಸಿತ್ತಾದರೂ, ಏಕೋ ಏನೋ ಮುಜುಗರ ಪಟ್ಟುಕೊಂಡು ದೂರ ಸರಿದಿದ್ದೆ!
ಆದರೆ ಇತ್ತೀಚೆಗೆ ಆರು ತಿಂಗಳ ಹಿಂದೆ ಅವರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸುದೀರ್ಘವಾಗಿ ಮಾಡಿದ ಪನ್ಯಾಸವನ್ನು ಕೇಳಿದ ಮೇಲೆ, ತಡೆಯಲಾರದೆ ಓಡಿ ಹೋಗಿ ಅವರ ಕೈಯನ್ನು ಹಿಡಿದು “ಗುರುಗಳೇ, ಭೀಮಸೇನ ಜೋಶಿಯವರ ದರ್ಬಾರಿ ಕಾನಡಾ ಕೇಳಿದ ಹಾಗಾಯಿತು”, ಅಂತ ಹೇಳಿ ಬಂದಿದ್ದೆ! ತಿಪಟೂರಿನ ಸ್ನೇಹಿತ ಗಂಗಾಧರಯ್ಯ ನೀಡಿದ ಅವರ ದೂರವಾಣಿ ಸಂಖ್ಯೆಗೆ ಸುಮಾರು ಹದಿನೈದು ದಿನಗಳ ನಂತರ ಒಮ್ಮೆ ಮಾತನಾಡಿದಾಗ “ ಯಾರಯ್ಯಾ ನೀನು? ಇಷ್ಟು ಚೆನ್ನಾಗಿ ಮಾತನಾಡುತ್ತೀಯಾ? ಯಾವೂರು ನಿಂದು ಅಂತ ಕೇಳಿದ್ದರು! ಆಗ ನಾನು ಮಲೆನಾಡಿನವನು. ಇಂತವರ ಮಗ ಎಂದು ಹೇಳಿದಾಗ, “ಏನಯ್ಯಾ ಮೊದಲೇ ಹೇಳಬಾರದಿತ್ತೇನು? ನಿನ್ನಪ್ಪ ನನಗೆ ಬಹಳ ಆತ್ಮೀಯ. ನನ್ನ ಪ್ರೀತಿಯ ಗಾಯಕರಲ್ಲಿ ಒಬ್ಬ. ಅದ್ಭುತ ಪ್ರತಿಭಾವಂತ. ಒಂದೆರಡು ವರ್ಷಗಳ ಹಿಂದೆ ನಿಮ್ಮೂರು ಮಂಚೀಕೇರಿಯಲ್ಲಿ ನನಗಾಗಿ ಆತ ಹಾಡಿದ ತರಾನಾಗಳು ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿವೆ” ಎಂದೆಲ್ಲ ಆತ್ಮೀಯವಾಗಿ ಹರಟಿ ‘ಹೇಗಿದ್ದಾರೆ ನಿಮ್ಮಪ್ಪ? ಅವರಿಗೆ ನಾನು ಕೇಳಿದ್ದೇನೆ ಎಂದು ಹೇಳು. ನಿನ್ನ ಹೆಂಡತಿ  ಚೆನ್ನಾಗಿ ಬರೀತಾಳಪ್ಪ. ಇಬ್ಬರೂ ಮನೆಗೆ ಬನ್ನಿ” ಎಂದು ಹೇಳಿದಾಗ ನಾನು ಮೂಕವಿಸ್ಮಿತನಾಗಿದ್ದೆ.
ಇದಾದ ಒಂದು ತಿಂಗಳ ನಂತರ ಪ್ರಜಾವಾಣಿಯಲ್ಲಿ ಅವರದೊಂದು ಕಥೆ, ಸುಮಾರು ಐವತ್ತು ವರ್ಷಗಳ ಹಿಂದೆ ಬರೆದದ್ದು.... ಪ್ರಕಟವಾಗಿತ್ತು. ಓದಿದ ಕೂಡಲೇ ನನಗೆ ನೆನಪಾದದ್ದು ಜಾರ್ಜ್ ಹರ್ಬರ್ಟ್ ನ ‘ದ ಪುಲಿ’ ಕವನ.  ಕಥೆಯ ತುಂಬೆಲ್ಲ ಮೆಟಾಫಿಸಿಕಲ್ ಪೋಯೆಟ್ರಿಯ ಛಾಯೆ ಗಾಢವಾಗಿದೆ ಎನ್ನಿಸಿತ್ತು. ಅನಂತಮೂರ್ತಿಯವರಿಗೆ ಫೋನಾಯಿಸಿ ನನ್ನ ಅಭಿಪ್ರಾಯವನ್ನು ಹೇಳಿದಾಗ, “ಹೌದೇನಯ್ಯಾ ವಸಂತಾ!  ಇಂಟರೆಸ್ಟಿಂಗ್ ಒಬ್ಸರ್ವೇಶನ್. ನಾನೂ ಇದನ್ನು ಯೋಚಿಸಿಯೇ ಇರಲಿಲ್ಲ ನೋಡು! ನನಗೆ ಯಾರೂ ಇದನ್ನು ಹೇಳಿರಲೂ ಇಲ್ಲ! ಯೆಸ್.... ನಾನಾಗ  ಒಂಥರಾ ಮೆಟಾಫಿಸಿಕಲ್ ಸ್ಟ್ಐಲಿನ ಪ್ರಭಾವಕ್ಕೆ ಒಳಗಾಗಿದ್ದೆ ಅನ್ನಿಸತೊಡಗಿದೆ! ಥ್ಯಾಂಕ್ಸ್ ಕಣೊ. ಮನೆಗೆ ಬಾರೊ, ನಿಮ್ಮಂತ ಹುಡುಗರ ಕೂಡ ಮಾತನಾಡುವುದು ಖುಷಿಕೊಡುತ್ತೆ ಅಂತ ಅಂದಿದ್ದರು. ಅದಾದ ನಂತರವೂ ಒಂದೆರಡು ಸಲ ಫೋನಿನಲ್ಲಿಯೇ ಮಾತನಾಡಿದ್ದೆ. ಕೊನೆಗೂ ಅವರನ್ನು ಕಂಡು ಮಾತನಾಡಬೇಕೆಂಬ ಹಂಬಲ ಹಂಬಲವಾಗಿಯೇ ಉಳಿಯಿತು!
ಇವತ್ತು ಗಂಗಾಧರಯ್ಯ ಅವರಿಗೆ ಫೋನಾಯಿಸಿದೆ. ಹೋಗಿ ನೋಡಿಕೊಂಡು ಬರೋಣ ಅಂದರು. ಐದು ಗಂಟೆಯ ಸುಮಾರಿಗೆ ತುಮಕೂರಿಗೆ ಬಂದರು. ನಾನು, ಗಂಗಾಧರಯ್ಯ, ಹಾಗೂ ಇನ್ನೋರ್ವ ಸ್ನೇಹಿತ ಡಾ.ಸ್ವಾಮಿ ಕೂಡಿ ಹೊರಟೆವು. ಅರ್ಧ ದಾರಿಗೆ ಹೋಗುವಷ್ಟರಲ್ಲಿ ಮೇಷ್ಟ್ರು ತೀರಿಕೊಂಡರು ಎಂಬ ಸುದ್ದಿ. ನಿಜವಾಗಿಯೂ ಪ್ತವಾದದ್ದನ್ನು ಕಳೆದುಕೊಂಡ ಭಾವ. ಎಲ್ಲ ಖಾಲಿ... ಖಾಲಿ... ನೆನಪುಗಳು ಮಾತ್ರ! ಅಪ್ಪಟ ಮನುಷ್ಯನೊಬ್ಬನನ್ನು.... ಆತ್ಮೀಯ ಗೆಳೆಯನನ್ನು.... ಪ್ರೀತಿಯ ವ್ಯಕ್ತಿಯೊಬ್ಬನನ್ನು ಕಳೆದುಕೊಂಡ ಮಂಕು... ಮನಸ್ಸು ಭಾವುಕವಾಗಿದೆ. ಮೇಷ್ಟ್ರೇ ಮತ್ತೆ ಮತ್ತೆ ನಿಮ್ಮ ಸಾಂಗತ್ಯ ಬೇಕೆನಿಸುತ್ತಿದೆ! ನೀವು ಹೋಗಿಬಿಟ್ಟಿರಿ....... ಅನಂತ... ಆಕಾಶಕ್ಕೆ!  

ಇಂತಿ ನಮಸ್ಕಾರಗಳು

ವಸಂತ.

Sunday, June 29, 2014

ಬಯಲು ಬಲು ದೂರ

ಇವತ್ತು ಯುಜಿಸಿ ನೆಟ್ ಎಕ್ಸಾಂ ಬರ್ಯೋಕೆ ಅಂತಾ ಬೆಂಗಳೂರಿಗೆ ಹೋಗಿದ್ದೆ! ಮಧ್ಯಾಹ್ನದ ಪೇಪರ್ರು ಒಂದೇ ಗಂಟೆಯೊಳಗೆ ಬರೆದು ಮುಗಿದು ಹೋಗಿತ್ತು! ಕನಿಷ್ಠ 3 ಗಂಟೆಯವರೆಗಾದರೂ ಎಕ್ಸಾಂ ಹಾಲನ್ನು ಬಿಟ್ಟು ಬರುವ ಹಾಗಿರಲಿಲ್ಲ. ಹಾರ್ಡಾದ ಡೆಸ್ಕು ಬೆಂಚಿನ ಮೇಲೆ ಬೆಳಗಿನಿಂದಲೂ ಕುಳಿತಿದ್ದರಿಂದ ಸೊಂಟ, ಬೆನ್ನು, ಕುತ್ತಿಗೆ ಎಲ್ಲವೂ ಹಿಂಡತೊಡಗಿದ್ದವು! ಹಾಳಾದ ಬಿಸಿಗಾಳಿ..... ಸೆಖೆಯನ್ನು ಸಹಿಸಿಕೊಳ್ಳದೇ ವಿಧಿಯಿಲ್ಲ.  ಸೂಪರ್ ಆಗಿದ್ದ ಸೂಪರ್ ವೈಸರ್ ಸ್ಮೈಲ್ ಮಾಡುತ್ತಲೇ ಹೊರಗೆ ಹೋಗೋ ಹಾಗಿಲ್ಲ ಅಂದು ಬಿಟ್ಟರು! ಹಾಗಾಗಿ ಪ್ರಶ್ನೆ ಪತ್ರಿಕೆಯ ಬೆನ್ನಿನಲ್ಲಿ ‘ಬಯಲು ಬಲು ದೂರ’ ಬರೆಸಿಕೊಂಡಿತ್ತು!
ಬಯಲು ಬಲು ದೂರ
ಬೆನ್ನಹುರಿಯಾಳದಲಿ ಚುರುಚು
ರು ಚುಳುಕು ಹೆಗಲ ಬುಡದುದ್ದಕ್ಕೂ
ಹರಡಿ ತಲೆಯೆಲ್ಲ ಕರಡ!
ಎದೆಯ ಮೂಲೆಯಲ್ಲೆಲ್ಲೋ ಸರಿವ
ಸರ್ಪಗಂಧಿಯ ಸುಳಿ
ನೆತ್ತಿಯನ್ನೇರಿ ಸರ್ರನೆ
ಸಂದಿಗೊಂದಿಗಳಿಗಿಳಿದು
ಹುಬ್ಬಿನಂಚಲಿ ಮಿಂಚುವ
ಬೆವರಸಾಲೆ.

ಆಸೆಯಾಗುತ್ತಿದೆ, ಪಸೆಯಾರಿದ
ನಾಲಗೆಗೆ; ಗುಟುಕು ನೀರೂ ಸಿಗದ
ಬೆಂಗಾಡು, ನೀರೆ
ನಗುತ್ತಾಳೆ; ಕಾಲನೋಡಿ!
ಕಾಯಬೇಕಿದೆ ಇನ್ನೂ..... ತಾಸು-
ಗಳಿಗೆ, ಗುಂಯ್ ಗುಡುವ
ಗಿರಗಿಟ್ಟಿ, ಗಿರಿಗುಡುವ ತಲೆ
ಯೊಳಗೆ ಆಸೆ-ಬಯಕೆಗಳ
ನೆಲ್ಲ ರುಬ್ಬಿ ಬೀಸಿ ಒಗೆಯಲು
ಬಯಲು ಬಲುದೂರ......

-ವಸಂತ,
ಮಧ್ಯಾಹ್ನ 2-30 ರಿಂದ 3 ರವರೆಗೆ!
ಎಂಇಎಸ್, ಕಾಲೇಜು, ಕೊಠಡಿ ಸಂಖ್ಯೆ 42 (ಎ)
ಬೆಂಗಳೂರು.


Tuesday, April 8, 2014

ಸೃಷ್ಟಿಕ್ರಿಯೆ



ಕವಿತಾ ಕುಡಿನೋಟ ಬೀರುತ್ತಾಳೆ
ಬಿಳಿಯ ಕಾಗದದ ಮೇಲೆ
ಅಪರಿಚಿತ ಗಂಡಸು; ತನ್ನವನಲ್ಲ
ವೆಂಬಂತೆ ಮುಖತಿರುಗಿಸುತ್ತಾಳೆ.

ಆದರೆ, ಸುಕುಮಾರಿ ಉಪವಾಸವಿದ್ದಾಗ
ಕನಸಿನಂತಹ ರಾತ್ರಿಯಲಿ
ಪುರುಷಸ್ಪರ್ಷದ ನವಿರುಗನಸಿನಲ್ಲಿ
ತಕ್ಷಣವೆ ಮಿಡಿದು ಕಂಪಿಸುವ  ಅವಳ ದೇಹ.

ಕೆಲವೊಮ್ಮೆ, ಧಗೆಯಾರಿದ ಮೇಲೆ
ಉರಿದು ಎಚ್ಚರಗೊಳ್ಳುವ ಅವಳು
ನೇವರಿಸುತ್ತಾಳೆ ರವಿಕೆಯ
ಬಿಚ್ಚಿ ಬಿಸಾಕಿ ಬೊಗಸೆ
ತುಂಬಿದ ಬೆಳದಿಂಗಳ ಮೈ
ಮೇಲೆಲ್ಲ ಸೋಕಿಸಿ ನವಿರಾಗಿ
ಉಜ್ಜುತ್ತ ತಂಪೆರೆವ ಕೈ
ಗಳು ನೋವ ಕಳೆಯುವಂತೆ.

ದೇಹದ ಕತ್ತಲೆ ಚಾಚುತ್ತದೆ ಚಾಪೆಯಂತೆ
ಬೇಕಾಬಿಟ್ಟಿ ಚೆಲ್ಲಿದ ಮೈ-ಮನಸು
ಸಂದು ಸಂದಿನ ಕತ್ತಲೆಯಲ್ಲೂ ಆವರಿಸುವ
ಬೆಂಕಿಕಾವು, ಬಲಶಾಲಿ ಬಾಹುಗಳಲಿ
ಬಂಧಿಯಾಗಿ ಹುಡಿಗೊಳ್ಳುವ ತನಕ
ನೆಲೆಗೊಳ್ಳಲಿ ಕತ್ತಲೆಯ ಕಾಮ
ವೆಂದು ಕನವರಿಸುತ್ತಾಳೆ.

ದಿಗ್ಗನೆ ಕಾಣಿಸಿಕೊಳ್ಳುವ ಖಾಲಿ ಹಾಳೆ
ನಡುಗುವ ಕೈಗಳ ಸೋಂಕಿದಾಗ
ಸುಡುವ ದೇಹದ ಭಾಗ,
ಕರಗುವ ಯಾತನೆ, ಮೂಗಿಗಡರುವ
ವಿಚಿತ್ರ ವಾಸನೆ
ದೇಹದ ಉಬ್ಬುತಗ್ಗು ಸಾಲುಗಳ
ಓದುವ ಕೈ
ಅಪರಿಚಿತವಾಗಿ ಕಾಣಿಸುವ ತನ್ನದೇ
ದೇಹ, ಕೊರೆವ ತಣ್ಣನೆಯ ಬೆವರಸಾಲೆ
ಸಾವು ಬದುಕಿನ ವಾಸನೆಯಲ್ಲಿ ಅದ್ದಿ
ತೆಗೆದ ಉಸಿರು
 ಈ ಎಲ್ಲ ನವಿರು ಕಪ್ಪು ಗೆರೆಗಳು
ದನಿಯಿಲ್ಲದ ಚೀತ್ಕಾರದ ತುಣುಕುಗಳು
ಮೌನ, ಗೊಂದಲದಲ್ಲಿ ಸೋರಿ
ಹೋದ ಭಾವ
ಎದ್ದು ನಿಲ್ಲುವ ಅವಳ ನೋಟದಲ್ಲಿ;
ಅನ್ಯಾಯದ ಛಾಯೆ.
ತನ್ನದೇ ಪುಟ್ಟ ಭಾಗ ಸತ್ತುಹೋದಂತೆ,
ಸುಕುಮಾರಿ ಬಸಿರಾಗಿ ಮತ್ತೆ
ಗರ್ಭಪಾತವಾದಂತೆ.

                             ಮೂಲ- ಅಮೃತಾ ಪ್ರೀತಂ
                             ಕನ್ನಡಕ್ಕೆ – ವಸಂತ

                             8 ಎಪ್ರಿಲ್ 2014

Saturday, April 5, 2014

ಹುಚ್ ಮಂಗ್ಯಾ ಪಾಂಡೂ ತನ್ನಷ್ಟಕ್ಕ ತಾನ ಮಾತಾಡ್ಲಿಕ್ಹತ್ತಾನ!

ಇತ್ತ ಕಡಿ, ಟೈವಾಕ್ ಗುಡ್ಡದ್ ತುದೀಮ್ಯಾಲಿನ್ ಝೋಪಡೀ ಪಟ್ಟಿ ಬಾಜೂಕ್ ನಿಂತ ಹುಚ್ ಮಂಗ್ಯಾ ಪಾಂಡೂ ತನ್ನಷ್ಟಕ್ಕ ತಾನ ಮಾತಾಡ್ಲಿಕ್ಹತ್ತಾನ! ಹೇಮಾಮಾಲಿ ಬಾಜೂಕರ ಕುಂತ ಕೇಳಾಕ್ಹತ್ತಾಳ!
ಹಂಗ ಆಗ್ಲಿ...
ಇನ್ನೂ ಖರ್ಚೀಗ್ ಸಾಕಾಗಿ ಮಿಗೊವಷ್ಟು ಉಳ್ಕೊಂಡದ. ಬಾಯ್ ಬಿಟ್ ಕೇಳೂ ಪರಿಸ್ಥಿತಿ ಬರಾಂಗಿಲ್ಲಾ ಅಂದ್ಕೊಂಡೇನಿ. ಬ್ಯಾಲೆನ್ಸ್ ಕಾಲಿ ಆಗೂಗಂಟ ಮ್ಯಾಲ್ನಂವ್ವಾ ಕಳಿಸ್ತಿರ್ತಾನ! ಅಂವಾ ಭಾಳಾ ಇದ್ಹಾಂಗ! ಏನೂ ಇಲ್ದನ ಛಲೋ ಬಾಳುವೆ ಮಾಡೂದ ಹ್ಯಾಂಗ ಅನ್ನೂದನೂ ಒಮ್ಮೊಮ್ಮಿ ಹೇಳ್ತಿರ್ತಾನ! ಭಾಳಾತು ಅಂದ್ರ ಹ್ಯಾಂಗ್ ವಾಪಸ್ ತಗೋಬೇಕೂ ಅಂತಾನೂ ಅವಂಗ ಚೆನ್ನಾಗಿ ಗೊತ್ತದ. ಅಂಜಿಕಿ ಪಿಂಜಿಕಿ ಏನೂ ಇಲ್ದಾಂಗ ಬಾಳುವಿ ಮಾಡೂದ್ಹ್ಯಾಂಗ ಅನ್ನೋ ವಿಷ್ಯಾನೂ ಅಂವಾ ಬರೆ ಬಾಯ್ ಮಾತ್ನಾಗ ಹೇಳ್ತಿರ್ತಾನ ಹಗಲೆಲ್ಲಾ!ಹಂಗಾಗಿ ಬಾಯ್ ಬಾಯ್ ಅನ್ನೂದೂ ಒಮ್ಮೊಮ್ಮೆ ತುಟ್ಟಿ ಆಗ್ತದ! ಅದ್ಕ ನಾ ಅನ್ನಾಂಗಿಲ್ಲಾ!
******
ಸಣ್ಣಾವ್ರ ಮುಂದ ದೊಡ್ಡೊವ್ರಾಗೋರು.... ದೊಡ್ಡೋರಾದ್ಮ್ಯಾಲೆ ಸಣ್ಣಾ ಆಗೋವ್ರು! ನಾನೂ, ನೀನೂ, ಅವನೂ, ಅವಳೂ,ಎಲ್ಲಾರೂ ಹಾಂಗೇನೋ ತಮ್ಯಾ ಸಣ್ಣಾ ಅಂದ್ರೇನು ಸಾಮಾನ್ಯಾ ಅಂದ್ಕೋಂಡೀಯೇನೂ? ದೊಡ್ಡದೂ ಅಂದ್ರೆ ಮಹಾ ಘನಾ ಅಂದ್ಕೊಂಡೀಯೇನೂ? ಎರಡೂ ಸುಳ್ಳೇ ಅದಾವ! ಸಣ್ಣ ಅಂದ್ರೆ ಸಣ್ಣಲ್ಲ... ದೊಡ್ಡ ಅಂದ್ರೆ ದೊಡ್ಡಲ್ಲಾ.... ಸಣ್ಣದೊಡ್ಡ ಬ್ಯಾರೆಬ್ಯಾರೆ ಅಲ್ಲೋ ತಮ್ಯಾ ಎರ್ಡೂ ಒಂಥರಾ ಚರಿಗೀ ಇದ್ಹಾಂಗ! ಸ್ವಲ್ಪನ ಯಾಮಾರಿದ್ರೂ ಚರಿಗೀ ತಗೊಂಡ ಹೋಗೂದಾಗ್ತದ ಮತ್ತ! ಚರಿಗಿ ತಿರುಗಿದ್ರ ಗಿರಿಚ ಆಗಿ ಗಿರಿಗಿರಿ ಗಿರಗಿಟ್ಟಿ ತಿರ್ಗಿ ಗಿಲ್ಮಿಟ್ ಒಳಗಿನ ಮಿರ್ಚಿ ಕಣ್ಣಾಗ ನೀರ್ ತರ್ಸ್ತಾವೋ! ನೀರ ಕುಡಿದ್ರೂ ಮೂಗ್ನ್ಯಾಗಿನ ನೀರ ಆರಾಂಗಿಲ್ಲ... ಮುಕ್ಳ್ಯಾಗಿನ ಉರಿ ಬಿಡಾಂಗಿಲ್ಲ! ಹೋಗ್ಲಿ ಬಿಡು... ಅದು ಹಾಂಗ ಮುಗಿಯೂ ಕಥಿ ಅಲ್ಲ.
ಹೀಂಗ ಸಾಧನಕೇರಿಗಂಟಾನೂ ಹಾಸಿ ಹಾಲಗೇರಿ ಸುತ್ತಿ ಹಳೀ ಧಾರವಾಡ್ದಾಗಿನ ಮಂಗ್ಯಾನ್ ಮಹಲ್ ದಾಟಿ ಬಂದ್ರೂನೂ ಮತ್ತ ಕೂಗತಿರ್ತಾವ ಜೋಡ ಗೂಗಿ ಜೋಗೀ ಮಟ್ಟಿಯೊಳಗ! ಹಾಡೇ ಹಗಲೂ... ಮಟಾಮಟಾ ಮದ್ಯಾಹ್ನ.... ಕಟಾಕಟಿ ಕತ್ತಲದಾಗ.... ಮಾಮರಾ ತೂಗತದ ಬಾ ಬಾರೋ ಬಾರೋ ಭೋಗೀ.... ಬಂದಾನ ಭಲೇ ಜೋಗೀ!

ಸರಿ ಹಾಂಗಾದ್ರ... ಕಣ್ತುಂಬಾ ನಿದ್ದೀ ಮಾಡ್ರಿ... ನಂಗೂ ಒಂದ್ ನಾಕ್ ಅಕ್ಷರಾ ಏನಾರ ಓದ್ಕೋಂಡು ಹಾಸ್ಗಿ ಒದ್ಯೂ ಟೈಂ ಆಗೇದ!