Tuesday, March 9, 2010

ನಾದಸ್ಸಂಧಾನ

ಗರ್ಭಗಟ್ಟಲಿ ಒಳಗಣ ಪರಾ-
ಗ ಸ್ಪರ್ಷ ಮಧುಪರ್ಕ ಗಟ್ಟಿ
ಗೊಂಡು ತೆನೆ ಪಶ್ಯಂತಿಯಾಗಿ
ಬೆಳೆಯುತ್ತ ಕೆನೆಯುತ್ತ ಕಾಳು
ಕಟ್ಟಿ ಎತ್ತರದ ರಾಶಿ ರಾಶಿ.
ಮೂಲಾಧಾರ ಮ್ರದುವಾಗಿ ಇಡಿಕೆ
ಸಡಿಲಿಸಿ ಏರಲಿಬಿಡು ಮಧ್ಯಮವ
ಮೀರಿ ನಾದವಾಗಲಿ ಪ್ರಾಣ
ವಾಯು ಉಸಿರಿನಲಿ ಲಯವಾಗಿ
ಮನಬಿಚ್ಚಿ ಹಾಡಲಿ ಗುಬ್ಬಚ್ಚಿ!
ವೈಖರಿಯ ಜಿಹ್ವಾಮೂಲ ಗಾಂಧಾರಿ
ಕಣ್ಕಟ್ಟ ಬಿಚ್ಚಿ ತೆರೆಯಲಿ ಈಗ
ಕಾಲಕ್ಕೆ-ಮೂಲಕ್ಕೆ ಕೊಂಡಿಯಾಗಿ
ನರನಾಡಿ ಸಡಿಲಿಸಲಿ ಗಂಟಲ
ಪಸೆ ಕಳೆದು ಸ್ಫಟಿಕಸ್ಫುಟಗೊಳ್ಳಲಿ.
ನಾಭಿಮೂಲದ ಮೌನಸ್ಫೋಟಕ್ಕೆ
ಎಣೆಯಾಗಿ ಮತ್ತೇರಲಿ ಪದಾರ್ಥ
ಗೊಡವೆ ಮೀರಿ ಏಣಿಯಾಗಿ
ಆಕಾಶಕ್ಕೆ......ಅವಕಾಶದನಂತಕ್ಕೆ
ಗುಬ್ಬಚ್ಚಿ ಗೂಡುಕಟ್ಟಲಿ ಮತ್ತೆ
ಸಂಭ್ರಮಿಸಿ ಚಿಲಿಪಿಲಿಯ ನಾದಸ್ಸಂಧಾನಕ್ಕೆ.

Saturday, March 6, 2010

ಬೆಳಗು


ಅಮ್ಮ....ಅಮ್ಮ...ಅಮ್ಮಾ
ನನ್ನ ಮುದ್ದು ಅಮ್ಮ!
ಮೇಲೆನೋಡು ಚಂದಿರ
ಮುಗಿಲ ತಾರೆ ಸುಂದರ!
ಹಕ್ಕಿಯೇಕೆ ಹಾರುತಿಲ್ಲ?
ಸೂರ್ಯನೇಕೆ ಕಾಣುತಿಲ್ಲ?
ಕತ್ತಲೇಕೆ ಸುತ್ತಲೆಲ್ಲ?
ಹೇಳೆ ಮುದ್ದು ಅಮ್ಮ.
ಮೇಲೆ ಮುಗಿಲು ಕೆಳಗೆ ಭೂಮಿ
ಗಿರಗಿರ ಗಿರಗಿಟ್ಟಿ ಬುಗುರಿಯಂತೆ
ತಿರುಗಿ ತಿರುಗಿ ಹಗಲುರಾತ್ರಿ ಹುಟ್ಟಿ
ಹಗಲು ಸೂರ್ಯ ರಾತ್ರಿ ಚಂದ್ರ
ಪಾಳಿಯಲ್ಲಿ ಬರುವರು.
ಸೂರ್ಯ ರಶ್ಮಿ ಚಂದ್ರ ಕಾಂತಿಯಿತ್ತು
ನಮ್ಮ ಪೊರೆವರು.
ನನ್ನ ಪುಟ್ಟಕಂದ ಕೇಳು
ಹಿಂಡುಹಿಂಡು ಹಕ್ಕಿಹಿಂಡು
ಬೆಳಕು ಹರಿಯೆ ಬರುವವು
ಹರುಷವನ್ನೆ ತರುವವು.
ಮುಂದೆಮುಂದೆ ಕುರಿಯ ಮಂದೆ
ಹಿಂದೆಹಿಂದೆ ದನದ ದಂಡು
ಸೂರ್ಯಪೂರ್ವದಲ್ಲಿ ಬಂದು
ನಿನ್ನ ಕರೆದು ಹೇಳ್ವನು
ಏಳುಕಂದ ಏಳುಕಂದ
ಬೆಳಗು ಹರಿಯಿತೇಳು ಕಂದ
ಕಣ್ಣುತೆರೆದು ನೋಡು ಚೆಂದ!

Tuesday, March 2, 2010

ಅಪ್ಪಾ ನೀನು ಟೊಮ್!ಟೊಮ್ ಟೊಂ ತೋಂ!


ನನ್ನ ಮಗ ತೇಜಸ್ವಿ ಕಾರ್ಟೂನ್ ನೆಟ್ವರ್ಕ್ ಕಣ್ಬಿಟ್ಕಂಡ್ ನೋಡ್ತಾನೆ. ಅಲ್ಲಿ ಟೊಮ್ ಮತ್ತೆ ಜೆರ್ರಿ ಬರ್ತದಲ್ಲ ಅದನ್ ನೋಡ್ಕ್ಯಂಡು ಒಂದಿನ ಹೇಳ್ದಾ..... "ಅಪ್ಪಾ! ನೀನು ಟೊಮ್ ನಾನು ಜೆರ್ರಿ" ಎಂದು! ಅವನ ಕ್ರಿಯೆಟಿವಿಟಿಗೆ ಮಂತ್ರಮುಗ್ಧನಾದೆ! ಅದನ್ನು ಒಂದು ಪದ್ಯವಾಗಿಸಿದೆ !
ಅಪ್ಪಾ ನೀನು ಟೊಮ್!
ಟೊಮ್ ಟೊಂ ತೋಂ
ಟಬ್ಬಲಿ ಒಂದು ಬೊಬ್ಬಿಲಿ
ಹಿಡಿಯಲು ಬಂದರೆ ಹೆಬ್ಬುಲಿ
ಸಿಕ್ಕದು ಎಂದೂ ಚಿಕ್ಕಿಲಿ
ಚಿಕ್...ಚಿಕ್...ಚಿಕ್...ಚೆಂದಿಲಿ!
ನಾನೂ ಒಂದು ಜೆರ್ರಿಲಿ
ಬಿಟ್ಟರೆ ಸಿಕ್ಕಾ ಜಂಗಲಿ
ಸಿಕ್ಕರೆ ಪಕ್ಕಾ ಮಂಗಿಲಿ
ಬಾರೋ..ಬಾ...ಬಾ..ಸಂದಿಲಿ!
ಅಕ್ಕಾ-ಪಕ್ಕಾ, ಚಿಕ್ಕ-ಚೊಕ್ಕ
ಮನೆಯಲಿ ಯಾರೂ ಕೇಳೋರಿಲ್ಲ
ಸಿಕ್ಕದ್ದೆಲ್ಲ ನಂದೇ ಎಂದು
ಬಿಡದೇ ತಿಂದೆ ಎಲ್ಲಾ ಉಂಡೆ!
ನೀನು ಬಂದೆ...ಗಡಿಬಿಡಿ ಬಂಡೆ
ಬಾಯಿಂದ್ಬಿತ್ತು ಬೇಸಿನ್ ಉಂಡೆ
ತಡವರಿಸಿತ್ತು ಡಬ್ಬದ ಕುಂಡೆ
ಟೊಮ್...ಟೊಂ....ತೊಂ!
ಅಪ್ಪಾ ನೀನು ಟೊಮ್
ಟೊಮ್...ಟೊಂ....ತೊಂ!

Wednesday, February 17, 2010

ಮತ್ತೆ ವಸಂತ ಬಂದಿದ್ದಾನೆ! ಚಿಗುರ ತಂದಿದ್ದಾನೆ...ಒಪ್ಪಿಸಿಕೋ

ಓಹ್! ಹದಿಮೂರು ವರುಷಗಳು....!
ಹೇಗೆ ಕಳೆದವು ಗೆಳತಿ?
ವನವಾಸದ ಅವಧಿ ಮುಗಿಯಿತೆನ್ನೋಣವೇ! ಅಥವಾ ಒಂದು ತಪ ಪೂರೈಸಿ ಎರಡನೆಯ ತಪನೆಗೆ ಕಾಲಿಟ್ಟೆವು ಎನ್ನೋಣ್ವೇ? ಕಾಲ ಕಲ್ಪಿಸಿದ ಅವಕಾಶದಲ್ಲಿ ಕಾವುಕೊಟ್ಟು ಮೊಟ್ಟೆ ಮರಿಯಾಗಿವೆ! ಹದಿನೇಳು ವರ್ಷಗಳಹಿಂದೆ ಬಿರಿದ ಮೊಳಕೆ ಗಟ್ಟಿ ಮರವಾಗಿದೆ. ಬಿಸಿಯುಸಿರು ಕೂಡ ತಣ್ಣೆಳಲ ತಂಪಾಗಿ ಹಿತವಾಗಿದೆ. ಇಷ್ಟು ಕಾಲದ ನಂತರವೂ ವರುಷದಂತೆ ಮತ್ತೆ ನಿನ್ನ ವಸಂತ ಬಂದಿದ್ದಾನೆ. ವಗರಿನೊಂದಿಗಿನ ಚಿಗುರುತಂದಿದ್ದಾನೆ! ಆ ಖುಶಿಯಲ್ಲಿ ನೀನು ಪಟ್ಟಪಾಡುಗಳೆಲ್ಲ ಹಾಡಾಗಿ ಪಂಚಮದ ಇಂಚರದಲ್ಲಿ ಕುಹೂ-ಕುಹೂ ನಿನದಿಸುತ್ತಿರುವದು ನಿನ್ನ ಅನುಭವಕ್ಕೂ ಬಂದಿರಲು ಸಾಕು.

"ಹೊಸಿಲ ದಾಟೇ ದಾಟುತ್ತೇನೆ..ಬಯಲು ತುಂಬ ಬದುಕುತ್ತೇನೆ" ಎನ್ನುತ್ತಲೇ ಹೊಸಿಲಾಚೆ ಹೊಸಹೆಜ್ಜೆ ನೀನಿಟ್ಟಾಗ ಇನ್ನೂ ಹೀಚು. ಹಾಗೆಂತಲೇ ಮೋಡಕಟ್ಟಿದ ಆಕಾಶ ನೋಡುತ್ತ "ಅತ್ತುಬಿಡು ಮನಬಿಚ್ಚಿ ಸಿಗಬಹುದು ಶಾಂತಿ" ಎಂದು ಹಾಡಿ ಹಗುರಾಗುತ್ತಿದ್ದೆ. ನೆನಪಿದೆಯೆ ನಿನಗೆ? ಕ್ರಮೇಣ ಆಳಕ್ಕಿಳಿದ ಬೇರುಗಳು ಗಟ್ಟಿಗೊಳ್ಳುತ್ತಿದ್ದಂತೆ ತಾಂಝಾನಿಯಾದ ಕಪ್ಪು ಹುಡುಗಿ ಕ್ಲಾರಾ ಇರುಳಕತ್ತಲಲ್ಲಿ ನೋವಾಗಿ ತಟ್ಟಿ ಹಾಡಾಗಿ ಹುಟ್ಟಿದಳು."ಅಮ್ಮ .....ತಣ್ಣಗಿದ್ದಾಳೆ ನನ್ನೊಳಗಿನ ತಳಮಳ ಅರಿಯದ ಅಮ್ಮ....ಹೊಸಿಲಬಳಿ ದೀಪಹಚ್ಚುತ್ತ!" ಎಂದು ಕವಿತೆ ಕಟ್ಟುತ್ತ ಅಮ್ಮನನ್ನು ಅರ್ಥೈಸಿಕೊಳ್ಳಹೊರಟಿರುವಾಗಲೇ ಮನಬೆಸೆದೆ ಮನೆಯೊಡನೆ.....ಬಿಚ್ಚಿಕೊಂಡವು ಥಟ್ಟನೆ ಜೋಡಿಬಾಗಿಲು ವ್ಯಕ್ತದಿಂದ ಅವ್ಯಕ್ತಕ್ಕೆ.ಪಂಜರದ ಗಿಳಿಗಳ ಹಾರಿಬಿಟ್ಟು,ಶೋಕೇಸಿನ ಬೊಂಬೆಗಳಿಗೆ ಜೀವಕೊಟ್ಟು ಜೀವಂತವಾಗಿ ಬದುಕಬೇಕು ಎಂದುಕೊಳ್ಳುತ್ತಿದ್ದಾಗಲೇ ಗೆಳೆಯ...ಕಾಡುತ್ತಾನೆ ನಿನ್ನನ್ನ. ಕತ್ತಲ ಕ್ಯಾನ್ವಾಸ್ ಮೇಲೆ ಮೂಡದೇ ಕಾಡುವ ಚಿತ್ರ-ಚಿತ್ತಾರಗಳಿಗುತ್ತರಿಸುತ್ತ "ನಿನ್ನ ಪ್ರೀತಿಯ ರಂಗಿನಲಿ ಕರಗುವ ನಿರ್ವರ್ಣ ಚಿತ್ರವಾಗುತ್ತೇನೆ ಎಂದಿದ್ದು ಇನ್ನೂ ಹಸಿರಾಗಿಯೇ ಇದೆ. ಮನಸ ಹಕ್ಕಿ ಕನಸ ಹೆಣೆದು ಎದೆಯಗೂಡ ಶ್ರಂಗರಿಸುವುದ ಕಂಡಿರುವೆಯಾ ಒಮ್ಮೆಯಾದರೂ ....ನೀ ಬಲ್ಲೆಯೇನು... ಎಂದು ಅಂದದ್ದು, ವಸಂತ ಬರುತ್ತಾನೆಂದು ನಿರಿಕ್ಷೆಗಳ ತೋರಣಕಟ್ಟುತ್ತಲೇ,"ಚಿಗುರಿ ಚಿಗಿಯುತ್ತಿರುವಾಗಲೇ ನಿಲುಕದೇ ಹೊರಟೇ ಹೋಗುತ್ತಾನೆ", ಎನ್ನುತ್ತ ಪ್ರೀತಿ ಎಳೆಗಳ ಹುಡುಕಾಟಕ್ಕೆ ತೊಡಗುವ ನಿನ್ನ ಆ ತುಮುಲ....ನಮ್ಮ ನಡುವೆ ಇರುವ ಉಕ್ಕಿನಕೋಟೆಗಳ ಅರಿವೇ ನಿನಗಿಲ್ಲವೇ ಎಂದು ಕೇಳಿದ ಮುಗ್ಧ ಕಣ್ಣುಗಳು ಇನ್ನೂ ನನ್ನ ಮನದಲ್ಲಿ ಅಚ್ಚೊತ್ತಿವೆ ಗೆಳತೀ!

ಅದೊಂದುದಿನ ಆದರಾಗಲಿ ಪ್ರಳಯ ನಮ್ಮ ಕನಸುಗಳ ಬದುಕಿಸೋಣ ಎಂದು ಬಟಾಬಯಲಿನಲಿ ಕೈನೀಡಿ ಕರೆದಾಗ...."ಬಲು ತುಂಟಹುಡುಗ...ನನ್ನ ತಂಟೆ ಬೇಡವೆಂದರೆ ನಿರಾಳವಾಗಿ ನಗುತ್ತೀಯಲ್ಲ! ನಿನ್ನ ಬಾಹುಬೇಡಿಗಳಲಿ ಬಂಧಿಸಿ ಪ್ರೀತಿ ಪಹರೆಯಲಿಟ್ಟುಬಿಡುತ್ತೇನೆ ಜೋಕೆ!" ಅಂದಾಗಲೇ ನಾನು ಬಂಧಿಯಾಗಿಬಿಟ್ಟಿದ್ದೆನಲ್ಲೇ.

ಆದರೆ ಆ ಬಂಧ ನಮ್ಮಿಬ್ಬರನ್ನು ಬಂಧನವಾಗಿ ಎಂದೂ ಕಾಡಲಿಲ್ಲವಲ್ಲ ಎನ್ನುವದೇ ಒಂದು ಸೋಜಿಗ. ನಾನು ನನ್ನಂತಿದ್ದೂ... ನೀನು ನಿನ್ನಂತಿದ್ದೂ.....ಇಬ್ಬರೂ ಹೆಜ್ಜೆ ಹಾಕಿದೆವಲ್ಲ ತಾಳತಪ್ಪದಂತೆ!
"ಗೂಡಾಚೆ ಕಾದುವದು ಅನಿವಾರ್ಯ ನಮಗಿಂದು.
ಎದೆಗವಚಿಕೋಭದ್ರವಾಗಿ ಮರಿಕನಸುಗಳ....
ಜಡಿಮಳೆಗೆ ಜಡ್ಡುಗಟ್ಟಿಕೊಳ್ಳುವ
ಬಿರುಬಿಸಿಲಿಗೆ ಬಂಡೆಯಾಗುವ ನಾವು
ಆದರಾಗಲಿ ಪ್ರಳಯ
ನಮ್ಮ ಕನಸುಗಳ ಬದುಕಿಸೋಣ"
ಅಂದು ನೀ ಹೇಳಿದ ಬೀಜದ ಮಾತು ಕ್ರಮೇಣ ಬೆಳಕಿನ ಬೀಜವಾಗಿ ಮೊಳೆತು ಪರಿಮಳದ ಸಸಿಯಾಗಿ ಬೆಳೆದು ಇಂದು ಬೆಳಕಿನ ಮರವಾಗಿದೆ. ಹೊಸಿಲಾಚೆಯಿಟ್ಟ ಹೊಸಹೆಜ್ಜೆ ಹಂಬಲದ ಹಾದಿಯ ಸೇರಿದೆ. ಚೌಕಟ್ಟಿನಾಚೆಯ ದಿವ್ಯ ಅನಂತದಲಿ ಜೀವವಾಹಿನಿ ಹೊಳೆ ಹೊಳೆಯುತ್ತಿದೆ. ಸ್ರಷ್ಟಿಮುಗಿದ ನಿರಾಳತೆಯಲ್ಲಿ ಸುಮ್ಮನೆ ಧ್ಯಾನಿಸುತ್ತಿದೆ ತಂಬೂರಿ.ಕಾಣುವ ತಂತಿ,ಕಾಣದ ತಂತು, ಭಾವಗಳಜೋಡಿಸಿ ಜೀವ ಪಡೆದ ವಿನ್ಯಾಸದ ಬೆರಗು! ಜೀವಧ್ವನಿ.

ತಣ್ಣಗೆ ಬೆಳೆದೆ....ತಂಪಾಗಿ ಎರೆದೆ.....ಎಲ್ಲರನು ಪೊರೆದೆ.....ಈಗ ನಿನ್ನ ತೆಕ್ಕೆಯಲ್ಲಿ ನನ್ನಂತೆ ಇನ್ನೊಂದು ಪಾಪು! ದತ್ತಕ್ಕೆ ಬಂದಿದ್ದು! ಎದೆಗಾನಿಸಿಕೋ ಪಾಪ ಅದನ್ನೂ. ಬೆಳೆಯಲಿ ಅವಧೂತನಂತೆ.........ಇನ್ನೊಂದು ಬೆಳಕಿನ ಮರ!

ನನ್ನ ಪ್ರೀತಿಗೆಂದೂ ಅದು ತೊಡಕಾಗದಿರದು. ಮೊಗೆದಷ್ಟೂ ಬರುವ ಒರತೆಯದು ಎಂದೂ ಬತ್ತುವುದಿಲ್ಲ. ನಾನು ಕಾಯುತ್ತಿದ್ದೇನೆ........ಬಾ....ಹೀರು ಹೊಸ ಚಿಗುರ.....ಇನ್ನೊಂದು ಅಭೇದಕ್ಕೆ....ತಪಕ್ಕೆ ಹುರಿಗೊಳ್ಳೋಣ! ಬೆಳಕಿನ ಜಾಡಿನಲ್ಲಿ ಕೈಹಿಡಿದು ಹೊಸ ಹೆಜ್ಜೆಯಿಡೋಣ ಗಡಿಯಿರದ ಹೊಸಿಲೊಳಗೆ......ಬಯಲು ಆಲಯದಲ್ಲಿ.....ನಿನ್ನಿಷ್ಟದಂತೆ!
ಅಷ್ಟರಲ್ಲಿ.......
ಬೆಳಕಿನ ಸಸಿ ಪಿಸುಗುಡುತ್ತದೆ
ದೆವರ ಹೆಣಗೊಬ್ಬರದ ಕಸುವಾಗಿ
ಸಸಿ ಸಳಸಳೆ ಬೆಳೆದು
ಮಿದುಳಭಿತ್ತಿಯ ಸೀಳಿ
ಹೊರಹೊಮ್ಮುತ್ತದೆ.
ನಿನ್ನ
ವಸಂತ

( ಹದಿಮೂರು ವರ್ಷಗಳ ನಂತರ ನನ್ನ ಜೀವದ ಗೆಳತಿ ಗೀತಾಗೆ ಬರೆದ ಹೊಸ ಪ್ರೇಮಪತ್ರವಿದು. ಇದರಲ್ಲಿ ಅಲ್ಲಲ್ಲಿ ಬಳಸಿಕೊಂಡಿರುವುದೆಲ್ಲವೂ ಅವಳ ಕವನಗಳ ಸಾಲುಗಳು!)

Thursday, February 11, 2010

ಭೈರಪ್ಪ ಇನ್ನೂ ಕಿವಿಯಲ್ಲಿ ಗುನುಗುನಿಸುತ್ತಿದ್ದಾರೆ ದರಬಾರಿ ಕಾನಡಾ ರಾಗದಂತೆ!





ಹಿಂದುಸ್ತಾನಿ ಸಂಗೀತದಲ್ಲಿ ದರಬಾರಿ ಕಾನಡಾ ರಾಗ ತುಂಬ ಗಂಭೀರವಾದ ಭಾವಾಭಿವ್ಯಕ್ತಿಯನ್ನು ಅಪೇಕ್ಷಿಸುವ ಘನರಾಗ! ಹಾಗಾಗಿ ಎಲ್ಲ ಕಲಾವಿದರಿಗೂ ಅದು ಅಷ್ಟಾಗಿ ಒಗ್ಗಿಬರುವದಿಲ್ಲ. ಹಲವಾರು ವರ್ಷಗಳ ಪರಿಶ್ರಮ ಹಾಗೂ ಒಡನಾಟದಿಂದ ಮಾತ್ರ ಮಧ್ಯರಾತ್ರಿಯ ನೀರವದಲ್ಲಿ ಧ್ಯಾನಸ್ಥ ಸ್ಥಿತಿಗೆ ಕಲಾವಿದ-ಕೇಳುಗನನ್ನು ಏಕಕಾಲಕ್ಕೆ ಕೊಂಡೊಯ್ಯುವ ತಾಖತ್ತು ಈ ರಾಗಕ್ಕಿದೆ! ಅದಾದ ನಂತರವೂ ಹಲವಾರು ಗಂಟೆಗಳಕಾಲವೋ,ದಿನಗಳಕಾಲವೋ ಅದ್ಭುತ ಕಲಾವಿದನ ಕಂಠದಿಂದ ಕೇಳಲ್ಪಟ್ಟ.....ಸ್ರಷ್ಟಿಸಲ್ಪಟ್ಟ.....ದರಬಾರಿ ಒಂದುರೀತಿಯ ಗುಂಗು ಹಿಡಿಸಿಬಿಡುತ್ತದೆ. ಭಂಗಿ ತಿಂದವರಂತೆ!

ಆದೇ ರೀತಿಯ ಹ್ಯಾಂಗ್ ಓವರ್ ಅನ್ನು ನಾನು ಈಗಲೂ ಅನುಭವಿಸುತ್ತಿದ್ದೇನೆ. ಮೊನ್ನೆ ಹೇಳಿದೆನಲ್ಲ ಮೌನದ ನಂತರ ಬಿಚ್ಚಿಕೊಂಡ ಭೈರಪ್ಪನವರ ಅಂತರಂಗ....ಅದೊಂದು ಅದ್ಭುತ ದರಬಾರಿಯಂತೆ ನನ್ನನ್ನು ಈಗಲೂ ಕಾಡುತ್ತಿದೆ!

ಭೈರಪ್ಪ ಬಯಸುತ್ತಾರೆ "ಐನ್ ಸ್ಟೈನ್ ತರಹ ಶುದ್ಧ ವಿಜ್ನಾನಿಯಾಗಬೇಕು!" ಎಂದು! ಶುದ್ಧ ವಿಜ್ನಾನಿಗೆ ಮಾತ್ರ ಸತ್ಯವನ್ನು ಯಥಾಸ್ಥಿತಿಯಲ್ಲಿ ನೋಡುವ,ಗ್ರಹಿಸುವ,ಅರ್ಥೈಸಿಕೊಳ್ಳುವ ಧಾರ್ಷ್ಟ್ಯ ಸಾಧಿಸಿರುತ್ತದೆ ಎಂದು! ಯಾಕೆಂದರೆ ಸತ್ಯದೊಂದಿಗೆ ಮುಖಾಮುಖಿ ಅಷ್ಟು ಸರಳವಲ್ಲ! ಅದಕ್ಕೊಂದು ಧೈರ್ಯಬೇಕು....ಸಹನೆ ಬೇಕು...ಸಾಹಚರ್ಯಬೇಕು. ಅದು ಅಷ್ಟು ಸುಲಭಸಾಧ್ಯವೇನಲ್ಲ. ಆದರೆ ಅಸಾಧ್ಯವೂ ಅಲ್ಲ. ಎಂತಹ ಪಕ್ಕಡ್ ಅಲ್ಲಾ..... ದರಬಾರಿಯ "ಮ ಪ ಧ ಧ ನಿ ಪ" ದಂತೆ!

"ಭಾರತೀಯ ತತ್ವಶಾಸ್ತ್ರ ಪ್ರಾರಂಭವಾಗುವುದೇ ಮ್ರುತ್ಯುವಿನೊಂದಿಗಿನ ಮುಖಾಮುಖಿಯ ಮೂಲಕ. ಕಠೋಪನಿಷತ್ತಿನಲ್ಲಿ ಹೇಳಲಾದ ನಚಿಕೇತ ಯಮನೊಂದಿಗಿನ ಸಂಭಾಷಣೆಯ ಮೂಲಕ ಭಾರತೀಯ ಫಿಲೊಸಫಿಗೆ ಪ್ರವೇಶ! ಪೂರ್ವದ ಫಿಲೊಸೊಫಿ ಬದುಕಿನ ಸುತ್ತಮುತ್ತವೇ ತೆರೆದುಕೊಳ್ಳುತ್ತ ಹೋಗುತ್ತದೆ. ಭಾರತೀಯ ತತ್ವಶಾಸ್ತ್ರ ಮರ್ತ್ಯವನ್ನು ಮೀರಿ ಅಭೌತಿಕವಾಗುತ್ತ ನಡೆಯುತ್ತದೆ. ಮಿತಿಯನ್ನು ಮೀರುವ,ಮೇರೆಮೀರುತ್ತಲೇ ಹೊಸ ಹೊಳಹನ್ನು ತೋರುತ್ತ ಸತ್ಯದ ನವದರ್ಶನವನ್ನು ಮುಖಾಮುಖಿಯಾಗಿಸುತ್ತದೆ! ಅದರ ಅರ್ಥವನ್ನು ನಾವು ಹುಡುಕುವ ವ್ಯರ್ಥ ಪ್ರಯತ್ನದಲ್ಲಿ ದಕ್ಕುವದು ಶೂನ್ಯ ಸಂಪಾದನೆಯೇ. ಆ ಪರಮಾರ್ಥ ನಮಗೆ ಸ್ವಯಂ ದರ್ಶನಸಾಧ್ಯವಾಗಬೇಕು. ಅದಕ್ಕೆ ಮನಸ್ಸು ಅನುಭವದ ಮಿತಿಯನ್ನು ಮೀರಿ ಅನುಭಾವದೆಡೆಗೆ ಮುಖಮಾಡಬೇಕು. ಅದನ್ನೇ ಮುನಿಗಳು ಸಚ್ಚಿದಾನಂದ ಎಂದು ಕರೆದರು. ಸಮಾಧಿಸ್ಥಿತಿ ಎಂದರು". ಭೈರಪ್ಪ ಮಾತನಾಡತೊಡಗಿದ್ದು ಅದೇ ದರಭಾರಿಯಲ್ಲಿ ಭಿಮಸೇನ ಜೋಷಿ ಶಡ್ಜ ಹಚ್ಚಿದಂತಿತ್ತು! ಪಾತಾಳಗರಡಿಹಾಕಿ ಮೀಟಿ ಎಳೆದಂತೆ!

ನಾವು ಇಂದು ಏನೇನೋ ಇಸಂ ಗಳ ಹೆಸರಿನಲ್ಲಿ ಸತ್ಯಕ್ಕೆ ಮುಖಾಮುಖಿಯಾಗುವದನ್ನು ತಪ್ಪಿಸಿಕೊಳ್ಳುತ್ತಿದ್ದೇವೆ. ಭಾರತೀಯ ವೇದ-ಉಪನಿಶತ್ತುಗಳು ಜ್ನಾನದ ಭಂಡಾರ. ಅದನ್ನು ಸಾಹಿತ್ಯಾಭ್ಯಾಸಿಗಳೆಲ್ಲ ಪಾಠ ಮಾಡಿಸಿಕೊಳ್ಳಬೇಕು. ಸುಮ್ಮನೆ ಯಾವುದೋ ಒಂದು ಧರ್ಮದ ಹೆಸರಿನಲ್ಲಿ ಕೆಲವರು ಸೇರಿ ಸನಾತನವಾದಿಗಳೆಂಬ ಹಣೆಪಟ್ಟಿ ಹಚ್ಚುವಮೊದಲು ಜ್ನಾನಭಂಡಾರವನ್ನು ಶಾಶ್ವತವಾಗಿ ಮುಚ್ಚಿಹಾಕುವ ಮೂರ್ಖತನ ಮಾಡುವುದರಿಂದ ಇಡೀ ಜನಾಂಗ ಕತ್ತಲೆಯಲ್ಲೇ ಇರುವಂತಾಗುತ್ತದೆ. ಅದಕ್ಕೇ ನೋಡಿ ಬೇಂದ್ರೆಯಂತಹ ದಾರ್ಶನಿಕ ಕವಿ ನಮಗೆ ಇನ್ನೂ ಅರ್ಥವಾಗುತ್ತಿಲ್ಲ! ಬೇಂದ್ರೆ ಒಬ್ಬ ಅಪ್ಪಟ ತತ್ವಶಾಸ್ತ್ರಜ್ನ. ಅವರಿಗೆ ಟೆಕ್ನಿಕಲ್ ಫಿಲೊಸೊಫಿ ಗೊತ್ತಿತ್ತು. ಅವರು ಬರೆದದ್ದು ಅನೇಕಬಾರಿ ಶಬ್ದಗಳೊಂದಿಗೆ ಆಟ ಎಂದೆನ್ನುವ ಮಟ್ಟಿಗೆ ಮಾತ್ರ ಅರ್ಥೈಸಲ್ಪದುತ್ತದೆ. ಆದರೆ ಅವರಿಗೆ ಸಂಸ್ಕ್ರತದ ಆಳವಾದ ಜ್ನಾನವಿತ್ತು. ವೇದ-ಉಪನಿಷತ್ ಗಳ ತಳಸ್ಪರ್ಷೀ ಅಧ್ಯಯನದ ಹಿನ್ನೆಲೆಯಿತ್ತು. ಶಬ್ದವೊಂದರ ಬೇರನ್ನು ಜಾಲಾಡಿ ಅದನ್ನು ಯಥಾರ್ಥ ರೀತಿಯಲ್ಲಿ ಅಭಿವ್ಯಕ್ತಿಸುವ ಅಧ್ಬುತ ಶಕ್ತಿಯಿತ್ತು. ಅದರ ಆಳಕ್ಕಿಳಿಯದ ಬಹುತೇಕರಿಗೆ ಬೇಂದ್ರೆ ಇನ್ನೂ ಅರ್ಥವಾಗಿಲ್ಲ! ಆ ಅನುಸಂಧಾನ ಸಾಧ್ಯವಾಗದ ಹೊರತು ಅನುಭಾವ ಸಿಗಲಾರದು......ಒಂದೊಂದೇ ಸ್ವರಗಳನ್ನು ಹಿಂಜಿ ಹಿಂಜಿ ಮಂದ್ರ ಶಡ್ಜದಿಂದ ಮಧ್ಯ ಪಂಚಮದಲ್ಲಿ ಲೀನವಾದಾಗಿನ ಸ್ವರಸುಖ ಭೈರಪ್ಪನವರ ಮಾತುಗಳಲ್ಲಿ ಅನುಭವಿಸುವಂತಾಗಿತ್ತು!

ನಂತರ ಮಾತು ಹೊರಳಿದ್ದು ತಂತ್ರದ ಬಗ್ಗೆ! ಪಂಚಮಗಳನಡುವೆ ಸ್ವರಸಂಚಲನೆ! "ತಂತ್ರ ವೇಗವರ್ಧಕ! ಅನೇಕ ತಂತ್ರಗಳನ್ನು ನಾವು ದೈನಂದಿನ ಜೀವನದಲ್ಲಿ ಬಳಸುತ್ತೇವೆ. ಅದೊಂದು ಬೇರೆಯದೇ ಆದ ಭಾಷೆ. ಅಲ್ಲಮನ ವಚನಗಳನ್ನೇ ತೆಗೆದುಕೊಳ್ಳಿ.. ಆ ಭಾಷೆ ತಿಳಿಯದಿದ್ದರೆ ನಮಗೆ ಅದರ ರಸಾಸ್ವಾದ ಸಾಧ್ಯವಿಲ್ಲ. ನಮ್ಮ ಅನುಭವದ ಪರಿಮಿತಿಗೆ ಅದ್ಯಾವುದೂ ನಿಲುಕುವದೆ ಇಲ್ಲ! ಹಾಗೆಂದ ಮಾತ್ರಕ್ಕೆ ಅದು ಮಾಟವಲ್ಲ, ಕಣ್ಕಟ್ಟಲ್ಲ. ಅದಕ್ಕೇ ಸಾಹಿತ್ಯ ರಸವಿದ್ಯೆ! ಅದರ ಹಿಂದೆ ಹೋದವರ್ಯಾರಿಗೂ ಅದು ಪೂರ್ಣವಾಗಿ ದಕ್ಕಿದ್ದೇ ಇಲ್ಲ! ಅದು ಸಂಪೂರ್ಣ ಸಮರ್ಪಣೆಯನ್ನು ನಿರೀಕ್ಷಿಸುತ್ತದೆ." ದರಬಾರೀ ಧೈವತ ದ ಮೀಂಡಿನಂತೆ ಭೈರಪ್ಪನವರ ಖಚಿತ ಖಣ ಖಣ ಮಾತು!

ಮಾತುಹೊರಳಿದ್ದು ಮಂದ್ರದ ಕಡೆಗೆ! "ಜೋ ಚಾ ಹೇ ವೋ ದೇತ ಅಪನೆ ಪದಾರಥ...... ಅಂತ ಮೇ ದೇತ.....ಸುಖಧಾಮ!" ದರಬಾರಿ ರಾಗದ ಅಂತರಾ ಭಾಗದ ಪ್ರಸಿದ್ಧ ಚೀಸ್ ಇದು. ಮಂದ್ರ ಶಡ್ಜದಿಂದ ತಾರ ಪಂಚಮದ ವರೆಗೆ ರಾಗವಿಸ್ತಾರ ಮಾಡುತ್ತ ಮಧ್ಯ ಸಪ್ತಕದ ಶಡ್ಜದಲ್ಲಿ ಲೀನವಾಗುವ ಪರಿಯಿದೆಯಲ್ಲ ಅದೊಂದು ಅಪರಿಮಿತ ಶಡ್ಜಸುಖ......ಸಂಭೋಗದಂತೆ! ವಿವರಕ್ಕೆ ನಿಲುಕದ ಮಾತಿಗೆ ಎಟುಕದ ಸಮಾಧಿಸ್ಥಿತಿ! .....

" ಮಂದ್ರದ ಮೋಹನಲಾಲನಿಗೆ ನಾನು ಕಾಮವನ್ನು ತುಂಬಿದ್ದಲ್ಲ! ಅಥವಾ ಕೇವಲ ಸಂಗೀತಗಾರರೇ ಹಾಗೆ ಅಂತಲೂ ಅದರ ಅರ್ಥವಲ್ಲ. ಭರತನ ನಾಟ್ಯಶಾಸ್ತ್ರವನ್ನೇ ಅವಲೋಕಿಸಿದರೆ ನಟ ಅಥವಾ ಕಲಾವಿದರನ್ನು ವಿಟ ಎಂದೂ, ನಟಿಯನ್ನು ವೇಶ್ಯೆಯೆಂದೂ ಕರೆಯುವ ಪರಿಪಾಠವಿತ್ತು. ಕಾಲಿದಾಸನ ಮ್ರಛ್ಛಕಟಿಕ ನಾಟಕದಲ್ಲಿಯೂ ಇದನ್ನು ಗಮನಿಸಬಹುದು. ಮಂದ್ರ ಕಾದಂಬರಿಯ ಮೋಹನಲಾಲನ ಪಾತ್ರದಲ್ಲಿ ಯಾರೂ ಫಿಟ್ ಆಗಬಹುದು! ಸಾಹಿತಿ,ಚಿತ್ರಕಾರ,ಕಲಾವಿದ,ರಾಜಕಾರಣಿ ಅಥವಾ ಜನಸಾಮಾನ್ಯ! ನಾನು ಸಂಗೀತಗಾರನನ್ನು ನಾಯಕನಾಗಿ ಆಯ್ಕೆ ಮಾಡಿಕೊಂದಿದ್ದಕ್ಕೆ ಕಾರಣವೇನೆಂದರೆ ಅವರಿಗೆ ಹ್ರದಯದ ಭಾಷೆ ಕೆಲಸಮಾಡುವುದು ಹೆಚ್ಚು! ಹಾಗಾಗಿ ಭಾವಾಭಿವ್ಯಕ್ತಿಯೂ ಹೆಚ್ಚು. ಅದೇ ಒಬ್ಬ ಸಾಹಿತಿಯನ್ನು ಮಂದ್ರದ ನಾಯಕನಾಗಿ ಚಿತ್ರಿಸಿದ್ದಿದ್ದರೆ ಅಲ್ಲಿ ಬುದ್ಧಿಶಕ್ತಿಯ ಕಸರತ್ತು ಹೆಚ್ಚಾಗಿ ಭಾವಭಿವ್ಯಕ್ತಿ ತೀವ್ರವಾಗಿರುತ್ತಿರಲಿಲ್ಲ. ಹಾಗೆಂದಮಾತ್ರಕ್ಕೆ ಸಂಗೀತ ಕಲಾವಿದರನ್ನು ಅಗೌರವದಿಂದ ಕಾಣಲಾಗಿದೆ ಅಂತ ಅರ್ಥೈಸುವದರಲ್ಲಿ ಹುರುಳಿಲ್ಲ. ಮೋಹನಲಾಲನ ಗುರು ಎಂತಹ ಉನ್ನತ ವ್ಯಕ್ತಿತ್ವದವನಲ್ಲವೆ? ಇಲ್ಲಿ ಬರುವ ಪಾತ್ರಗಳ ಚಿತ್ರಣಕ್ಕಿಂತಲೂ ಅವು ಹೇಳಹೊರಟಿರುವ ಮೌಲ್ಯಗಳನ್ನು ಅವು ತಮ್ಮಷ್ಟಕ್ಕೆ ಮಾಡಿಕೊಳ್ಳುವ ವಿಮರ್ಶೆಗಳನ್ನು ಗಮನಿಸಿ ಸಾಹಿತ್ಯದ ಒಂದು ಕ್ರತಿಯಾಗಿಯಷ್ಟೆ ಈ ಕಾದಂಬರಿಯನ್ನು ಓದಿಕೊಳ್ಳಿ" ಈ ಮಾತೊಂದು ರಭಸದ.....ಸಂ ನಿಂದ ಸಂ ವರೆಗಿನ ಫಾಸ್ಟ್ ತಾನಿನಂತೆ ಮಿಂಚಿತ್ತು!

"ಕಿನ ಭೈರನ ಕಾನ ಭರೆ..ಮೋರೆ ಪಿಯಾ ಮೋಸೆ ಬೋಲತ ನಾಹಿ.
ಹ್ನೂ ತೋ ವಾಸಿ ಜನಮಕೀ ದಾಸೀ...ಚರಣನ ಶೀಸ ಧರೆ..."
ಯಾರೋ ಅವನ ಕಿವಿದುಂಬಿದ್ದಾರೆ...ನನ್ನಿನಿಯ ನನ್ನೊಡನೆ ಮಾತನಾಡುತ್ತಿಲ್ಲ.
ನಾನೋ ನಿನ್ನ ಜನುಮ ಜನುಮದ ದಾಸಿ.. ನಿನ್ನ ಪಾದವನ್ನು ನನ್ನ ತಲೆಯ ಮೇಲೆ ಹೊತ್ತವಳು".... ಇದು ದರಬಾರಿ ರಾಗದ ಧ್ರತ್ ತೀನ್ ತಾಲದಲ್ಲಿ ರಚಿತವಾದ ತುಂಬ ಪ್ರಸಿದ್ಧವಾದ ಬಂದಿಷ್.

ಭಕ್ತಿ ಮತ್ತು ಶ್ರಂಗಾರ ರಸಗಳು ಒಂದೇ ನಾಣ್ಯದ ಎರಡು ಮುಖಗಳು. ಶ್ರಂಗಾರದ ಅಂತಿಮ ಗುರಿ ಭಕ್ತಿಯೇ! ಅದು ಮೀರಾಬಾಯಿ, ಅಕ್ಕಮಹಾದೇವಿ ಅವರಲ್ಲಿ ಅಭಿವ್ಯಕ್ತಿಗೊಳ್ಳುವಂತಹ ರೀತಿಯದು. ಸಂಗೀತದ ಪರಮಗುರಿ ಭೇದವಳಿದು ಒಂದೇ ಆಗುವದು! ಅದು ಸ್ವರ-ಲಯ-ತಾಳ ವಿಷಯದಲ್ಲಿರಬಹುದು ಅಥವಾ ಭಾವಾಭಿವ್ಯಕ್ತಿಯ ವಿಷಯದಲ್ಲಿರಬಹುದು.ಎಂದು ನನ್ನ ಗುರುಗಳು ಹೇಳುತ್ತಿದ್ದದ್ದು ನೆನಪಿಗೆ ಬರುತ್ತಿದೆ.

ಹಾಗೆ ಒಂದು ಘಟ್ಟಕ್ಕೆ ಭೈರಪ್ಪನವರ ಮಾತಿನ ಝರಿ ದ್ರುತಗತಿಯಲ್ಲಿರುವಾಗ" ನಾಳೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡುತ್ತಿದೆಯಲ್ಲ....ಏನನಿಸುತ್ತಿದೆ ನಿಮಗೆ? ಎಂದು ಮೆಲ್ಲನೆ ಅನುಮಾನದಿಂದಲೇ ಕೇಳಿದಾಗ ಅವರು " ಪ್ರಶಸ್ತಿ,ಪುರಸ್ಕಾರ,ಸನ್ಮಾನ ಇವೆಲ್ಲ ಒಂದು ಹಂತಕ್ಕೆ ಪ್ರೋತ್ಸಾಹಕಾರಿ ಅಂಶಗಳು. ಆದರೆ ಒಬ್ಬ ನಿಜವಾದ ಬರಹಗಾರ ಅವನು ಸತ್ತ ನಂತರವೂ ಎಷ್ಟು ವರ್ಷಗಳಕಾಲ ಜನರ ಮನಸ್ಸಿನಲ್ಲಿರುತ್ತಾನೆ, ಅವನ ಸಾಹಿತ್ಯ ಎಷ್ಟುಕಾಲ ಜನರ ನಡುವೆ ಉಳಿದಿರುತ್ತದೆ ಎನ್ನುವದರ ಮೇಲೆ ನಿಜವಾದ ಗೌರವ ನಿರ್ಣಯವಾಗುತ್ತದೆ. ನಾನು ನಾಳೆ ಸ್ವೀಕರಿಸುತ್ತಿರುವದು ಕರ್ನಾಟಕ ವಿಶ್ವವಿದ್ಯಾಲಯ ನನ್ನ ಮೇಲಿಟ್ಟಿರುವ ಗೌರವಕ್ಕೆ ಸೌಜನ್ಯಸೂಚಕವಾಗಿ!" ಮತ್ತೆ ಫಿಲಾಸಫಿಕಲ್ ಆಗಿ ಮುಕ್ತಾಯ! ಶಡ್ಜದಿಂದಾರಂಭಿಸಿ ಶಡ್ಜದಲ್ಲಿ ಕೊನೆಗೊಳ್ಳುವ ಸಂಗೀತದಂತೆ! ಎರಡು ಗಂಟೆಗಳಿಗೂ ಅಧಿಕ ಹೊತ್ತು ಕಾಲವನ್ನೇ ಮರೆಸಿ....ಸ್ವರಗಳನ್ನು ನಾದಿ...ನಾದಿ....ನಾದಸುಖದ ಉತ್ತುಂಗಕ್ಕೊಯ್ದು ಅನುಭಾವದ ಮಟ್ಟಕ್ಕೇರಿಸಿದ ದರಬಾರಿ ಕಾನಡಾ ರಾಗದಂತೆ..... ಈಗಲೂ ಗುಂಯ್ ಗುಡುವ ಗುಂಗು! ಅದೇ ಖುಶಿಯಲ್ಲಿ ಗೆಳತಿ ಗೀತಿಸುತ್ತಿದ್ದಾಳೆ !

Sunday, February 7, 2010

ಮೌನದ ನಂತರ ತೆರೆದ ಅಂತರಂಗ!



ಇವತ್ತಿಡಿ ಖುಷಿಯ ದಿನ! ಭೈರಪ್ಪ ಧಾರವಾಡಕ್ಕೆ ಬರುತ್ತಾರೆ ಎಂದು ಗಡಬಡಿಸಿ ಊರಿಂದ ಬಂದೆ. ಕರ್ನಾಟಕ ವಿಶ್ವವಿದ್ಯಾಲಯ ನಾಳೆ ನಡೆಯುವ ಘಟಿಕೋತ್ಸವದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಿದೆ. ಆ ಸಂದರ್ಭದ ನೆಪದಲ್ಲಿ ಕವಿವಿ ಒಂದು ಸಾರ್ವಜನಿಕ ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು.
ಮಧ್ಯಾಹ್ನ ನಾಲ್ಕೂವರೆಯಿಂದ ಸುಮಾರು ಒಂದೂವರೆ ತಾಸು ಸಿನೆಟ್ ಹಾಲಿನಲ್ಲಿ ಭೈರಪ್ಪ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ಯಕ್ರಮದ ನಂತರ ಹೋಗಿ ನಮಸ್ಕಾರ ಎಂದೆ. ಮುಂದಿನ ಕಾರ್ಯಕ್ರಮವೇನು ಎಂದು ಕೇಳಿದೆ! ನನಗೇನೂ ಗೊತ್ತಿಲ್ಲ ಎಂದರು. ಸರಿ ಹಾಗಾದರೆ ನನ್ನ ಜೊತೆಗೆ ಬರುವಿರಾ ಎಂದು ಕೇಳಿದೆ! ನಡೆಹೋಗೋಣ ಎಂದರು! ಸರಿ ಎಂದವನೇ ಕಾರಲ್ಲಿ ಕುಳಿತುಕೊಳ್ಳಿ ಎಂದೆ! ಸಂಘಟಕರು ಕಕ್ಕಾಬಿಕ್ಕಿ! ಯಾರಿವನು ಅಪರಿಚಿತ ಹುಡುಗ! ಎಲ್ಲರನ್ನೂ ಬಿಟ್ಟು ಇವನೊಂದಿಗೆ ಹೊರಟರಲ್ಲ ಭೈರಪ್ಪ! ಎಂದುಕೊಳ್ಳುತ್ತಿದ್ದುದನ್ನು ಕೇಳಿಸಿಕೊಂಡು ಮನದಲ್ಲೇ ನಕ್ಕೆ!
ಸುಲ್ತಾನ್ ಖಾನರ ಸಾರಂಗಿಯಲ್ಲಿ ರಾಗೆಶ್ರಿ ರಾಗ ಹಿತವಾಗಿ ಕೇಳಿಬರುತ್ತಿತ್ತು. ಕಾರು ಹೊರಟಿದ್ದೆಲ್ಲಿಗೆ, ಏನು ಎಂತ... ಒಂದು ಮಾತೂ ಕೇಳದೆ ನಾದದಲ್ಲಿ ತಲ್ಲೀನರಾದರು ಭೈರಪ್ಪ. ನಾನೂ ಸುಮ್ಮನೆ ಡ್ರೈವ್ ಮಾಡುತ್ತಿದ್ದೆ. ಸಾಧನಕೇರಿಗೆ ಬಂದು ತಲುಪಿದೆವು. ಕರೆಯೇರಿಗುಂಟ ನಡೆಯುತ್ತಿದ್ದೆವು ಒಬ್ಬ ಓದುಗ ಅವರನ್ನು ಯುನಿವರ್ಸಿಟಿಯಿಂದಲೂ ಹಿಂಬಾಲಿಸುತ್ತಿದ್ದ! ನಮಸ್ಕಾರ ಸರ್, ನಾನು ನಿಮ್ಮ ಅಭಿಮಾನಿ ಎಂದ. ಅಲ್ಲಿಯವರೆಗೂ ಮೌನಿಯಾಗಿದ್ದ ಭೈರಪ್ಪ ಮುಖ ಸಡಿಲಿಸಿ ನಕ್ಕರು! ಸಾಹಿತ್ಯದಿಂದ ಸಮಾಜೋದ್ಧಾರ ಸಾಧ್ಯವಿಲ್ಲ ಎಂದು ಒಂದು ಪ್ರಶ್ನೆಗೆ ಉತ್ತರಿಸುತ್ತ ಹೇಳಿದ್ದು ನನಗೇಕೋ ಸರಿ ಎನಿಸಲಿಲ್ಲ. ನಿಮ್ಮ ಕಾದಂಬರಿಗಳನ್ನು ಓದಿಯೇ ನಾನು ಜೀವನದಲ್ಲಿ ಸುಧಾರಿಸಿದ್ದೇನೆ, ಬದಲಾಗಿದ್ದೇನೆ ಎಂದ! ಎಂದವನೇ ಕೈಮುಗಿದ... ಬರುತ್ತೇನೆ ಸರ್... ಎಂದು ಹಿಂತಿರುಗಿ ಹೋದ! ಮತ್ತೆ ಮೌನ ಆವರಿಸಿತು. ದಾರಿ ಸಾಗುತ್ತಿತ್ತು.
ಬಾಯಲ್ಲಿ ಗುನುಗುನಿಸುತ್ತಿದ್ದ ರಾಗದ ಛಾಯೆಯ ಗುರುತಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಬರಹಗಾರರಿಗೆ, ಕಲಾವಿದರಿಗೆ ಕಾರ್ಯಕ್ರಮದ ನಂತರ ಒಂದು ರೀತಿಯ ಏಕಾಂತ ಬೇಕಾಗುತ್ತದೆ,ಮೌನ ಬೇಕಾಗುತ್ತದೆ ಎಂದು ನನ್ನ ಗುರುಗಳು ಹೇಳುತ್ತಿದ್ದುದು ನನ್ನ ಅನುಭವದಿಂದ ಮನದಟ್ಟಾಗಿತ್ತು! ಹಾಗಾಗಿ ನಾನೂ ಅವರ ಸಾಂಗತ್ಯ -ಸಾಮೀಪ್ಯವನ್ನು ಆನಂದಿಸುತ್ತಾ ವಾಕಿಂಗಿನ ಲಯದ ಲೆಕ್ಕಾಚಾರದಲ್ಲಿ ಸಂ ಹುಡುಕುತ್ತಿದ್ದೆ! ಹುಸಿ ಹೋದದ್ದೇ ಗೊತ್ತಾಗಲಿಲ್ಲ!
'ಭಜ ಮನ ಕರುಣಾ ನಿಧಾನ ಸುಖಸಂಪದ ಏಕ ಧಾಮ' ಮಧ್ಯಾಲಯ ಏಕತಾಲದಲ್ಲಿ ಯಮನ್ ರಾಗ ಕೇಳಿಬರುತ್ತಿತ್ತು. ಆಗಾಗ್ಗೆ, ಹಾ ಎಂದು ತಲೆಯಾನಿಸುತ್ತಿದ್ದರು ಭೈರಪ್ಪ! ಕಾರು ಕೆಲಗೇರಿ ಕೆರೆಯ ಹತ್ತಿರ ಸಾಗಿತು! ದಂಡೆಗುಂಟ ಸುಮಾರು ಎರಡು ಕಿಲೋಮೀಟರ ದೂರ ಕ್ರಮಿಸಿದ ಮೇಲೆ ಸಾಕು ನಡೆ ಹೋಗೋಣ ಎಂದರು! ತಿರುಗಿ ಕಾರಿನಲ್ಲಿ ಯಮನ್ ಕೇಳುತ್ತಾ ನಿರ್ಮಲ ನಗರದ ನಮ್ಮ ಮನೆಯ ಹತ್ತಿರ ಬಂದೆವು. ಸಖಿ ಗೀತ ಕಾಯುತ್ತಿದ್ದಳು ಆತಂಕದಿಂದ! 'ಊರಿಂದ ಮಧ್ಯಾಹ್ನವಷ್ಟೇ ಬಂದಿದ್ದು. ಮನೆಯಲ್ಲಿ ಏನೇನೂ ತಯಾರಿ ಇಲ್ಲ. ಇವನ ಹುಚ್ಚಾಟ ಬೇರೆ.... ಭೈರಪ್ಪ ಬರುತ್ತಾರೆಂದರೆ ಊಟಕ್ಕೇನು ಮಾಡುವುದು?' ಕರಂಟ್ ಬೇರೆ ಇರ್ಲಿಲ್ಲ ಮನೆಯಲ್ಲಿ. ಮೂರ್ತಿ ತರಕಾರಿ ಮೊಸರು ಎಲ್ಲ ತಂದ! ಕಾರಲ್ಲಿಯೇ ಕುಂತು ಫೋನಲ್ಲಿಯೇ ಎಲ್ಲ ಪ್ಲಾನ್ ಮಾಡಿ ರಾತ್ರಿಯೂಟಕ್ಕೆ ಸಲಾಡ್,ರೋಟಿ, ಮೊಸರು ಸಿಂಪಲ್ ಊಟದ ಮೆನುಕೊಟ್ಟಿದ್ದೆ! ಅದೆಷ್ಟು ಬೈದುಕೊಂಡಳೋ!
ಸರ್ ಮನೇಲಿ ಕರೆಂಟಿಲ್ಲ! ಇನ್ನೊಂದು ಕಡೆಗೆ ಕರೆದುಕೊಂಡು ಹೋಗಲಾ? ಗುಡ್ಡದ ನೆತ್ತಿಯೇರಿ ಕತ್ತಲೆಯಲ್ಲಿ ಕಾರಿನ ಬಾಗಿಲು ತೆರೆದು ಸಂಗೀತ ಕೇಳೋಣವೆ? ಸರಿ ನಡೆ ಎಂದರು!ಟೈವಾಕ್ ಗುಡ್ಡದಮೇಲೆ ಕಗ್ಗತ್ತಲಲ್ಲಿ "ಮಾನೇನಾ ಜಿಯರಾ ತುಮ ಬಿನ" ಹಾಸಣಗಿ ಗಣಪತಿ ಭಟ್ಟರ ಇಂಪಾದ ದನಿಯಲ್ಲಿ ಭಾಗೆಶ್ರೀ ಬಹಾರ್ ರಾಗ ಕಳೆಕಟ್ಟಿ ರಂಗೇರಿತ್ತು. ಭೈರಪ್ಪ ಖುಷ್ ಆಗಿದ್ರು! ಅದಾಗಲೇ ಗಂಟೆ ರಾತ್ರಿ ಎಂಟು!
ಮನೆಗೆ ಹೋದೆವು. ಭೈರಪ್ಪ ಫ್ರೆಶ್ ಆಗಿದ್ದರು!ಮಾತಿಗೆ ತೊಡಗಿದರು ನೋಡಿ... ಫಿಲೊಸೊಫಿ.....ಭಾರತೀಯ ಸಾಹಿತ್ಯ ದರ್ಶನ.... ಅನುಭೂತಿ...ಅನುಭಾವ.... ನಿಜವಾಗಿಯೂ ರಸದೌತಣ! ರಾತ್ರಿ ಹತ್ತು ಹೊಡೆದರೂ ಪರಿವೆಯಿಲ್ಲ ಯಾರಿಗೂ! ಮೊದಲು ನನ್ನ ಹುಚ್ಚಾಟಕ್ಕೆ ಬೈದಿದ್ದ ಗೆಳತಿ ಈಗ ನನಗೊಂದು ಫ್ಲಾಯಿಂಗ್ ಕಿಸ್ ಕೊಟ್ಟು ಪಾತ್ರೆತೊಳೆಯಲು ಬಾರೋ ಎಂದು ಗೋಗರೆಯುತ್ತಿದ್ದಾಳೆ!

Thursday, February 4, 2010

ಯಕ್ಷಪ್ರಶ್ನೆ

ಸತ್ತ ನಿನ್ನೆಗಳಲ್ಲಿ ಹುಟ್ಟಿರದ
ನಾಳೆಗಳಲ್ಲಿ ಬದುಕು
ಅರಳುವ ಭ್ರಮೆಯಲ್ಲಿ
ನವಜಾತ ಇಂದು ಪಾಪ-
ದ ಕೂಸು; ಕಣ್ಣುತೆರೆಯುವ
ಮುನ್ನವೇ ಕಾಲ ತುಳಿತಕ್ಕೆ
ಸಿಕ್ಕು ನರಳುತ್ತದೆ ಚೀರುತ್ತದೆ
ಕೇಳುವವರಿಲ್ಲ.

ನಿನ್ನೆನಾಳೆಗಳ ಸಾವುಹುಟ್ಟುಗಳಲ್ಲಿ
ಇಂದು ಬದುಕುವುದೇ ಇಲ್ಲ
ಜೀವಜಲ ಸಿಕ್ಕದೇ
ಸಿಕ್ಕಿದ್ದೂ ದಕ್ಕದೇ
ನಿನ್ನೆ-ನಾಳೆಗಳ ಕೊಂಡಿ
ಯಾಗದೇ ಇಂದು
ಸಾಯುತ್ತದೆ ದಿನವೂ
ಸತ್ತು ಹುಟ್ಟುತ್ತದೆ.

ನಿತ್ಯ ಸಾಯೋ ಆಟ
ಹುಟ್ಟಿಸಾಯೂ ಆಟ
ಆಡಿ ಆಡಿ ದಣಿವ
ಇಂದು ಅರಳುವುದೇ?
ಇಲ್ಲ ನರಳಿ ಮರಳುವುದೇ?

* ಹೊಸ ಸುದ್ದಿ ಈಗ ತಾನೇ ಸಂಜೆ ಕರ್ನಾಟಕ ಎಂಬ ಪತ್ರಿಕೆ ಪ್ರಾರಂಭವಾಗಿದೆ. ಕವಿ ಚೆನ್ನವೀರ ಕಣವಿ ಸಂದರ್ಶನ ನಾಮಾಡಿದ್ದೇನೆ. ನೋಡಿ http://www.sanjekarnataka.com/Feb-5_sup.pdf







Sunday, January 31, 2010

ಕಾಣದ ಬೇಂದ್ರೆ ಮಾಸ್ತರ್ರಿಗೆ ನಮಸ್ಕಾರ! ಕಾಣುವ ಕಣವಿ ಅಜ್ಜಂಗೆ ಮನದುಂಬಿದ ಪ್ರೀತಿ!


ಸುಮಾರು ಅರವತ್ತು ವರುಷಗಳ ಹಿಂದೆ ಸೊಲ್ಲಾಪುರದಲ್ಲಿ ಬೇಂದ್ರೆ ಮಾಸ್ತರ್ ಹಾಗೂ ಸಿ ಎನ್ ರಾಮಚಂದ್ರನ್ ಮೊದಲಬಾರಿಗೆ ಮುಖಾಮುಖಿಯಾದ ಸಂದರ್ಭ. ಕವಿಸಮಯದ ಕುರಿತು ಹುಡುಗ ಸಿಎನ್ನಾರ್ ಬೇಂದ್ರೆಯವರನ್ನೇನೋ ಕೇಳಿದ್ದಾರೆ! ಸರಕ್ಕನೆ ಸಿಟ್ಟಿಗೆದ್ದ ಬೇಂದ್ರೆ," ಯಾಕೋ ತಮ್ಯಾ.. ಏನ್ ತಿಳೀತದ ನಿನ್ಗ? ನಾ ಬರಿಯೋ ಕವಿತಾ ನನಗ ಕಣ್ಣೀಗಿ ಕಾಣಿಸ್ತದೋ! ನಾ ಅದರ ಅನುಭವಿಸ್ತೇನಿ, ಮುಟ್ಟತೇನಿ, ಮುಂದ ಅದೇ ನನ್ನ ಮುನ್ನಡೆಸ್ತದ" ಎಂದುತ್ತರಿಸಿದ್ದು ತಲೆಯೊಳಅಗೆ ಹೋಗಿರಲಿಲ್ವಂತೆ ಸಿಎನ್ನಾರ್ ಸರ್ ಗೆ!
ಈಗ ಒಂದು ವರುಷದ ಹಿಂದೆ ಸಿಎನ್ನಾರ್ ರಾಮಾಯಣವನ್ನು ಆಳವಾಗಿ ಅಭ್ಯಾಸ ಮಾಡುತ್ತಿದ್ದಾಗ ಹೊಳೆದ ಸೆಳೆಮಿಂಚು ಬೇಂದ್ರೆಯನ್ನು ಅರ್ಥವಾಗುವಂತೆ ಮಾಡಿತಂತೆ! ಅಲ್ಲಿ ರಾಮಾಯಣದ ಆರಂಭದಲ್ಲಿ ಇಡೀ ರಾಮಾಯಣ, ಕೈಯಲ್ಲಿನ ನೆಲ್ಲೀಕಾಯಿಯಂತೆ ಕಣ್ಣಿಗೆ ಕಾಣಿಸುವ, ಫೀಲ್ ಆಗುವ, ಟಚ್ ಆಗುವ ವಿವರಣೆ ಬೇಂದ್ರೆ ದರುಶನವನ್ನು ಮಾಡಿಸಿತಂತೆ! ಹಾಗೆಂತ ಅವರೇ ಇಂದು ಸಾಧನಕೇರಿಯ ಬೇಂದ್ರೆ ಭವನದಲ್ಲಿ ಮಾತನಾಡುತ್ತ ಹೇಳಿದರು!

ಅದಕ್ಕೆಂದೇ ಬೇಂದ್ರೆಯವರನ್ನು ಯುಗದ ಕವಿ..ಜಗದ ಕವಿ....ವರಕವಿ ಎಂದೆಲ್ಲ ಕರೆಯುತ್ತಾರೇನೋ! ತಾಳ್ಯಾಕ..ತಂತ್ಯಾಕ...ರಾಗದ ಚಿಂತ್ಯಾಕ..ಕುಣಿಯೋಣು
ಬಾರಾ..ಕುಣಿಯೋಣು ಬಾ..ಎಂದು ಹಾಡುತ್ತ ಎಲ್ಲರನ್ನೂ ಕುಣಿಸಿದ ನಾಕುತಂತಿಯ ಮಾಂತ್ರಿಕನ ನೂರಾ ಹದಿನೈದನೇ ಜನ್ಮದಿನದ ಸುಸಂದರ್ಭ ಇಂದು, ಜನವರಿ೩೧, ೨೦೧೦.
ಕನ್ನಡ ಜಗತ್ತಿನ ಮೂಲಕ ವಿಶ್ವವ್ಯಾಪಿಯಾಗಿ ಬೆಳೆದ ದತ್ತ ಇತ್ತ ಕಾಣ್ಕೆ ಇಂದಿಗೂ ಗುಪ್ತಗಾಮಿನಿಯಾಗಿ ಹರಿದು ಕನ್ನಡ ಮನಸ್ಸುಗಳನ್ನು "ಇದು ಬರಿ ಬೆಳಗಲ್ಲೋ ಅಣ್ಣಾ" ಎಂದು ಎಚ್ಚರಿಸುತ್ತಲೇ "ಸರಸ ಜನನ ವಿರಸ ಮರಣ ಸಮರಸವೇ ಜೀವನ" ಎನ್ನುವ ಸರಳಸೂತ್ರದ ನೆರಳಿನಲ್ಲಿ ಸಾಗಲು ಪ್ರೆರೇಪಿಸುತ್ತಿದೆ. ನೈಸರ್ಗಿಕ ಅನುಭಾವವನ್ನು ತಾನು ಅನುಭವಿಸುತ್ತಲೇ ಕಲ್ಲುಸಕ್ಕರೆಯಂತೆ ಎಲ್ಲರಿಗೂ ಹಂಚುತ್ತ ಮರೆಯಾದ "ಜೋಗಿ" ನಮ್ಮ ಬೇಂದ್ರೆ ಮಾಸ್ತರ್! ಇನ್ನೂ ಸಾಧನಕೆರಿಯಲ್ಲೇ ಜೀವಂತ ಇದ್ದಾರೆ.... ಶ್ರಾವಣದ ಹಾಡನ್ನು ಉಲಿಯುತ್ತಲೇ... ಸಖೀಗೀತ ನುಡಿಯುತ್ತ ನಾದಲೀಲೆಯಾಡುತ್ತಿದ್ದಾರೆ! ಬಾರೋ ಸಾಧನಕೇರಿಗೆ....ಎಂದು ಕೈಬೀಸಿ ಕರೆಯುತ್ತಿದ್ದಾರೆ!

ಇವತ್ತು ಅದನ್ನು ಕಣ್ಣಾರೆ ಅನುಭವಿಸಿ ಇದನ್ನಿಲ್ಲಿ ಬರೆಯುತ್ತಿದ್ದೇನೆ. ಮುಂಜಾನೆಯಿಂದಲೂ ಕಾವ್ಯದ ಹುಗ್ಗಿಯನ್ನು ಹೀರಿದ ಮನಸ್ಸು ಹಿಗ್ಗಿನಿಂದ ಸುಗ್ಗಿಯ ಸಂಭ್ರಮದಲ್ಲಿ ನಲಿಯುತ್ತಿದೆ! ಚೆಂಬೆಳಕಿನ ಕವಿ ಕಣವಿ ನಾ ಕಾಣದ ಬೇಂದ್ರೆಯ ಪ್ರತಿರೂಪವಾಗಿ ನನ್ನೆದುರು ನಿಂತಂತಹ ಹಿಗ್ಗು! ನಿಜವಾದ ಅರ್ಥದಲ್ಲಿ ಬೇಂದ್ರೆಯವರ ವಾರಸುದಾರ! ಅರವತ್ತು ದಶಕಗಳಕಾಲ ನಿರಂತರವಾಗಿ ಕ್ರಿಯಾಶೀಲರಾಗಿ ಬರೆದು, ಎಂಭತ್ಮೂರರ ಪ್ರಾಯದಲ್ಲೂ ಸುಸ್ತಿಲ್ಲದೇ ಸರಸ್ವತಿಯ ಸೇವೆಯನ್ನು ತಪಸ್ಸಿನಂತೆ ನಡೆಸಿಕೊಂಡು ಬರುತ್ತಿರುವ, ಸಾತ್ವಿಕ ಶಕ್ತಿಯಿಂದಲೇ ಏನೆಲ್ಲವನ್ನು ಕಟ್ಟಬಹುದು ಎಂದು ತೋರಿಸಿಕೊಟ್ಟ ಧೀಮಂತ ಚೇತನ ಚೆನ್ನವೀರ ಕಣವಿಯವರಿಗೆ ಇಂದು ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಕೊಡಮಾಡುವ ಬೇಂದ್ರೆ ರಾಷ್ಟ್ರೀಯಪುರಸ್ಕಾರವನ್ನಿತ್ತು ಸನ್ಮಾನಿಸಲಾಯಿತು.

"ಕಣವಿಯವರ ಕಾವ್ಯಮನೋಧರ್ಮವನ್ನು "ರೊಮ್ಯಾಂಟಿಕ್"ಎಂದು ಗುರುತಿಸುವದು ವಾಡಿಕೆಯಾಗಿದೆ.ಆದರೆ ಅದು ಇದಕ್ಕಿಂತಲೂ ಹೆಚ್ಚು ಸಂಕೀರ್ಣವಾದ ಮನೋಧರ್ಮ.ಆದರ್ಶವಾದ,ನಿಸರ್ಗಪ್ರೇಮ,ಭಾವನಿಷ್ಟೆ ಇವು ಅವರ ರೊಮ್ಯಾಂಟಿಕ್ ಒಲವುಗಳತ್ತ ಬೊಟ್ಟುಮಾಡಿತೋರಿಸಿದರೆ,ಸಮದರ್ಶನ,ಸಮಭಾವ,ಸ್ವೀಕ್ರತಿಗಳಂಥಹ ಮೌಲ್ಯಗಳಲ್ಲಿರುವ ಅವರ ನಂಬುಗೆ ಭಾರತೀಯ ಸಂದರ್ಭದಲ್ಲಿ ಅಭಿಜಾತ ಒಲವುಗಳನ್ನೇ ಸೂಚಿಸುತ್ತದೆ.ಸ್ವತಹ ಕಣವಿಯವರಿಗೆ ಈ ಸಂಕೀರ್ಣತೆಯ ಅರಿವಿದೆ",ಎಂದು ಕಣವಿ ಸಮಗ್ರ ಕಾವ್ಯಕ್ಕೆ ಪ್ರಸ್ತಾವನೆ ಬರೆದ ಕನ್ನಡದ ಶ್ರೇಷ್ಟ ವಿಮರ್ಷಕ ಪ್ರೊ.ಜಿ.ಎಸ್.ಆಮೂರರು ಇವತ್ತು ಕಣವಿಯವರನ್ನು ಸನ್ಮಾನಿಸಿದ್ದು ಕಾರ್ಯಕ್ರಮದ ಮೆರಗನ್ನು ಇನ್ನೂ ಹೆಚ್ಚಿಸಿತ್ತು!

ದಿನವೂ ವಾಕಿಂಗ್ ಹೊರಡುವಾಗ ಕಾಣಸಿಗುವ ಕಣವಿ ಅಜ್ಜ! ಅವಾಗೀವಾಗ ಸಾಧನಕೇರಿಯ ಬೇಂದ್ರೆಭವನದಿಂದ ಕಲ್ಯಾಣನಗರದ ಚೆಂಬೆಳಕಿನವರೆಗೆ ಕಾರಲ್ಲಿ ಬಾಜೂಕ್ಕೇ ಕೂತು ಸ್ನಿಗ್ಧನಗುವಿನೊಂದಿಗೆ ಅಪ್ಯಾಯಮಾನವಾಗಿ ಹರಟುತ್ತ ಹ್ರದಯಕ್ಕೆ ಹತ್ತಿರವಾದವರು!ನನ್ನ ಚಿಕ್ಕ ಮಕ್ಕಳಿಗೆ ಪ್ರೀತಿಯ ಅಜ್ಜನಾಗಿರುವ ಕಣವಿಯವರು.......ನಮ್ಮ ಮನೆಯ ಹಿರಿಯರು! ಆ ಚೇತನ ನಮ್ಮೊಂದಿಗೆ ಬಹುಕಾಲದವರೆಗೂ ಇದ್ದು ದಾರಿದೀಪವಾಗಲಿ. ಚೆಂಬೆಳಕಿನ ತಂಪು ಯಾವಾಗಲೂ ನಮ್ಮನೆಲ್ಲ ಕಾಯಲಿ ಎನ್ನುತ್ತ....

ಕಾವ್ಯಾಸಕ್ತರಿಗೊಂದು ಕಣವಿ ಕಾವ್ಯದ ಝಲಕ್ ......
ಬಿಸಮಿಲ್ಲಾರ ಶಹನಾಯಿವಾದನಕೇಳಿ
ಒಂದೆ ಉಸಿರಿಗೆ ಹಸಿರ ಹೊಮ್ಮಿಸುವ;ನೂರುಬಗೆ
ಭಾವಕುಸುಮವನೆತ್ತಿ ಗಾಳಿಸುಳಿಯಲಿ ಹೀಗೆ
ನರುಗಂಪ ತೇಲಿಸುವ;ಹಂಬಲದ ಸವಿದನಿಗೆ
ತುಂಬಿ ಆಲಿಸುವ;ಮನಸಿನ ಮಧ್ಯಬಿಂದುವಿಗೆ
ಕನಸು-ಕಾಮನಬಿಲ್ಲು ವರ್ತುಳವ ರಚಿಸಿ,ನೆಲ-
ಮುಗಿಲನೊಂದು ಸಲ ಬಂಧಿಸಿ ಜೀವಸ್ಪಂದಿಸುವ;
ಮೋಡದೊಡಲಿಗೆ ಮಿಂಚು ಸಂಚರಿಸಿ ಹನಿಗರೆವ
ರಾಗ ಲಹರಿಯ ತೊರೆಗಳೋಡಿ ತಬ್ಬಿವೆ ಕಡಲ.
ಕೋಟಿಮೈಲಂತರದ ನೀಹಾರಿಕೆಯ ನಾಡಿ-
ಮಿಡಿತ ತಟ್ಟಿತು ಕಿವಿಗೆ; ನಾದದ ಕೂದಲೆಳೆಯಲಿ
ಪ್ರಥ್ವಿತೂಗಿರೆ, ಸೂರ್ಯಚಂದ್ರರಿಗು ಜೋಕಾಲಿ.
ಪಾತಾಳಗವಿಗೆ ತೆರೆದವು ನೂರು ಬೆಳಕಿಂಡಿ.
ಹೊಕ್ಕಳ ಹುರಿಯ ಕತ್ತರಿಸಿ ಮುಗಿಯೆ ಶಹನಾಯಿ
ಆಗಸದ ಚಿಪ್ಪೊಡೆದು ಜೀವತೆರೆಯಿತು ಬಾಯಿ.
-ಚೆನ್ನವೀರ ಕಣವಿ.

Thursday, January 28, 2010

ಮತ್ತೆ ಬಂದಿದ್ದೇನೆ....ಬಾಗಿಲು ತೆರೆಯೆ...

ಯಾಕೆ ಮಂಕಾಗಿದ್ದೀ ಹೇಳು? ಮರುಳು ನಿನಗೆ! ನಿನ್ನಷ್ಟಕ್ಕೇ ಮನಸಿನೊಳಗೆ ಮಂಡಿಗೆ ತಿನ್ನುವದನ್ನು ಬಿಟ್ಟುಬಿಡು ಎಂದು ಎಷ್ಟುಬಾರಿ ಹೇಳಿಲ್ಲ ನಿನಗೆ? ಸಕಾ ಸುಮ್ಮನೆ ತ್ರಾಸು ಮಾಡಿಕೊಳ್ಳುತ್ತೀ. ನೀನು ಹಾಗೆ ಇರುವುದನ್ನು ನನಗೆ ನೋಡಲಾಗದು.

ನನಗೆ ಗೊತ್ತು, ನಿನ್ನೊಳಗೊಂದು ಅದ್ಭುತ ಪ್ರಪಂಚವಿದೆ.ಅಲ್ಲೊಂದು ಪ್ರಶಾಂತ ಸರೋವರವುಂಟಲ್ಲ ಅದರೊಳಗೆಷ್ಟುಬಾರಿ ಮುಳುಗೆದ್ದು ಖುಶಿಪಟ್ಟಿದ್ದೆವಲ್ಲ ಇಬ್ಬರೂ! ಆ ಖುಶಿಯ ಹ್ಯಾಂಗ್ ಓವರಿನಲ್ಲೇ ಯಾವಾಗಲೂ ಇರಬಯಸುವ ನಿನ್ನ ಬಗ್ಗೆ ನನಗೇನೂ ಅಭ್ಯಂತರವಿಲ್ಲ.
ಆದರೆ....ಈ ಪ್ರಪಂಚವೊಂದಿದೆಯಲ್ಲಾ....ಹೊಟ್ಟೆ ಮತ್ತು ಅದರ ಸುತ್ತಮುತ್ತಲಿನದು! ಅದೊಂಥರಾ ಬೇರೆಯದೆ....ಅದೊಂದು ರೀತಿಯ ಅರಾಜಕ ಜಗತ್ತು! ಬಲವಂತರಿಗಷ್ಟೇ ಜಾಗ ದಕ್ಕುವುದಲ್ಲಿ! ಹಸಿವು....ನೀರಡಿಕೆ...ಅದು ಹಿಂಗಿದ ಬಳಿಕ ಬೆತ್ತಲೆ ಜಗತ್ತು! ಉಳಿದುದೆಲ್ಲಾ ಬರಿಗಣ್ಣಿಗೆ ಕಾಣುವ ಒಣ ಬಣ್ಣಗಳು! ಹಾಗಾಗಿಯೆ ಚಿಟ್ಟೆಗಳೂ ಕಾಣೆಯಾಗುತ್ತಿವೆ! ಗುಬ್ಬಚ್ಚಿ ಗೂಡುಕಟ್ಟುತ್ತಿಲ್ಲ. ಪ್ಲಾಸ್ಟಿಕ್ ಹೂವುಗಳೆಡೆಗೆ ಭ್ರಮರವೂ ಹಾಯುವುದಿಲ್ಲ......ಸಕ್ಕರೆಪಾಕ ಬೆರೆಸಿದ ಕಲಬೆರಕೆ ಜೇನುತುಪ್ಪವೂ ತುಟಿತುಂಬುವದಿಲ್ಲ!
ಈವೆಲ್ಲ ನಿನಗೆ ಚೆನ್ನಾಗಿ ಗೊತ್ತು!
ನೀನೇನೋ ಸಮಯ ಸಿಕ್ಕಾಗಲೆಲ್ಲ ನಿನ್ನ ಒಳಗಿನ ಭಾವಕೋಶದೊಳಗೆ ತೂರಿಕೊಳ್ಳುತ್ತ ಇರುವ ಮರೆಯುತ್ತೀ. ಭ್ರಮರವಾಗಿ ಜಾಜಿ,ಸುರಗಿ,ಪಾರಿಜಾತ,ಸಂಪಿಗೆ.......ದಾಸವಾಳವನ್ನೂ ಬಿಡದೇ ಹೀರುತ್ತಿ. ಒಡಲಲ್ಲಿ ಜೇನ್ಗಡಲನ್ನೇ ತುಂಬಿಕೊಂಡು ತುಟಿಗೆರೆಯಲು ಅವಸರಿಸುತ್ತೀ! ನನಗೆ ಅಸೂಯೆಯಾಗುತ್ತದೆ ಒಮ್ಮೊಮ್ಮೆ!
ನಾನಾದರೂ ಏನು ಮಾಡಲಿ ಹೇಳು? ಕಾಲದ ಕೈಗೊಂಬೆ! ಒಂದರೆಗಳಿಗೆ ನಿಂತರೂ ಬಾರಿಸುತ್ತದೆ,ಭಾದಿಸುತ್ತದೆ ಪುರುಸೊತ್ತಿಲ್ಲದ ಓಟ! ಎಲ್ಲಿಗೆ.....ಯಾಕೆ.......ಕೇಳಬೇಡ. ಅದು ಕಾಲನ ನಿಯಮ. ಕಾಲ್ತುಳಿತಕ್ಕೆ ಸಿಕ್ಕು ಸುಕ್ಕಾಗುವುದು ನೆಲವೊಂದೇ ಅಲ್ಲ. ನೆರಳೂ ಕೂಡ! ಅರವತ್ತರ ಮೊದಲೇ ಅರಳು ಮರಳು. ಅದಕ್ಕೆಂದೇ ಇರದುದರೆಡೆಗೆ ಸದಾ ಸೆಳೆತ, ತುಡಿತ. ಅದು ಸಿಗಲೊಲ್ಲದು ಇದು ಬಿಡಲೊಲ್ಲದು.
ಒಂದಾನೊಂದು ಕಾಲದಲ್ಲಿ ಎರಡಳಿದು ಒಂದಾಗಲು ಕನಸಿದ್ದ ಮನಸು ಒಂದಾದರೂ, ಮರುಹುಟ್ಟು ಆಗಿದ್ದು ಎರಡೇ! ಮತ್ತೆ ಬೇರೆಬೇರೆ ಮೇರೆ! ಇರಲಿ ಬಿಡು... ಢಿಕ್ಕಿಯಾಗದಂತೆ ಕಾಪಿಡುವ. ಬೇಲಿಯ ಎಲ್ಲೆ ಮೀರಿ ಬೆಳೆಯಲಿ ನಮ್ಮೆದುರಿಗೇ.
ಸುಮ್ಮನಿದ್ದು ಕೊಲ್ಲಬೇಡ. ಮನಸಲ್ಲೇ ಕೊರಗಬೇಡ. ನನ್ನ ಬೇರು ಇನ್ನೂ ನಿನ್ನಲ್ಲಿಯೇ ಭದ್ರವಾಗಿದೆ ಧರಿತ್ರಿ!
ನೀನು ಫಲವತ್ತಾದ ನೆಲ.
ಎಂದೆಂದೂ ಬರಡಾಗದ ಭಾವಸಾರ.
ಬತ್ತಗೊಡದಿರು ಒತ್ತಡದಿ
ಭಾವಸೆಲೆಯ
ಉಕ್ಕಿಹರಿಯಲು ಬಿಡು
ಕೊಚ್ಚಿಹೋಗಲಿ ಎಲ್ಲ
ಕೊಚ್ಚೆ !
ಇಗೋ ಈಗ ಮತ್ತೆ ಬಂದಿದ್ದೇನೆ.... ನನ್ನೊಲವಿನ ನಿನ್ನ ಜಗತ್ತಿಗೆ....ಬಾಗಿಲು ತೆರೆಯೇ!

Monday, January 25, 2010

ಒಪ್ಪಿಸಿಕೋ! ಮನದಾಳದ ಒಂದು ಸಲಾಂ! ....ಎತ್ತರೆತ್ತರ ಏರು ಸೊಲ್ಲೆತ್ತದಿರಲಿ ಎಂದಿಗೂ ಸೋಲು!

ನಮ್ಮ ಎತ್ತರದ ಹುಡುಗ ಏರಿದೆತ್ತರವ ಕಂಡು ಎಷ್ಟೊಂದು ಖುಶಿಯಾಗುತ್ತಿದೆಯೆಂದರೆ....ಉಹೂಂ...ಹೇಳಲು ಬರುತ್ತಿಲ್ಲ!
ನಾನು ಆಗ ತಾನೇ ಮಾಸ್ತರಿಕೆಗೆ ಸೇರಿದ ಹೊಸದು! ಮೊದಲದಿನವೇ ಎತ್ತರದ ಹುಡುಗ ಗಮನಸೆಳೆದಿದ್ದ! ಸಂವಹನದ ಕ್ಲಾಸಿನಲ್ಲಿ ಕೊನೆಯ ಬೆಂಚಿನಲ್ಲಿ ಚೂಪಿಕೆ ಕುಳಿತು, ಮೌನವಾಗಿಯೇ ಕಣ್ಣುಗಳಲ್ಲಿ ಕಮ್ಯುನಿಕೇಟ್ ಮಾಡಿದ್ದ! ಕೆಲವೇ ದಿನಗಳಲ್ಲಿ ಆ ಕ್ಲಾಸಿಗೆ ಕ್ಲಾಸು ನನಗೆ ಪ್ರಿಯವಾಗಲು ಕಾರಣ ಆ ಎಲ್ಲ ಹುಡುಗ-ಹುಡುಗಿಯರ ಉತ್ಸಾಹ,ಕ್ರಿಯೇಟಿವಿಟಿ! ಆ ಒಂದು ವರ್ಷ ನನ್ನನ್ನು ಕ್ರಿಯಾತ್ಮಕವಾಗಿ ಬೆಳೆಸಿದ ಎಲ್ಲ ಹುಡುಗ-ಹುಡುಗಿಯರ ಕುರಿತು ಇವತ್ತಿಗೂ ನನ್ನಲ್ಲಿ ಆದರಣೀಯ ಭಾವವಿದೆ. ಅದಿಂದು ನೆನಪಾದದ್ದು ಅದೇ ಎತ್ತರದ ಹುಡುಗನ ನೆಪದಿಂದ!
ಎತ್ತರದವರಿಗೆ ಎದೆಗಾರಿಕೆ ಹೆಚ್ಚು! ಆತ ಕೂಡ ಹಾಗೆಯೇ....ಉತ್ತುತ್ಸಾಹಿ,ಸಾಹಸೀ ಮನೋಭಾವ,ಕೆಚ್ಚಿನ ಕನಸುಗಳು! ಎಂದೋ ಒಮ್ಮೆ ಸೈನ್ಯಸೇರುವ ಆಸೆಯನ್ನು ಹೇಳಿದ ನೆನಪು. ಅದಾಗಿ ಇಂದಿಗೆ ಸರಿಯಾಗಿ ಒಂದು ದಶಕ ಕಾಲ ಸಂದಾಯಿತು. ಈ ನಡುವೆ ನಾನು ಬದುಕಿನ ಹುಡುಕಾಟದಲ್ಲಿ ಕಳೆದುಹೋಗಿದ್ದೆ!
ಹೀಗಿರಲು ಒಂದುದಿನ ಒರ್ಕುಟ್ ಪ್ರಪಂಚದಲ್ಲಿ ಎತ್ತರದ ಹುಡುಗ ಕಂಡ! ಅಸಿಸ್ಟೆಂಟ್ ಕಮಾಂಡರ್ ಮಹೇಂದ್ರ! ನಕ್ಸಲರ ವಿರುದ್ಧ ಕಾರ್ಯಾಚರಣೆಯಲ್ಲಿ ನಿರತವಾಗಿರುವ ಸಿ.ಆರ್.ಪಿ.ಎಫ್ ನಲ್ಲಿ ಅಧಿಕಾರಿಯಾಗಿ ಓರಿಸ್ಸಾ ರಾಜ್ಯದ ಸಂಬಲ್ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವದಾಗಿ ಹೇಳಿದಾಗಲೇ ಹೆಮ್ಮೆ ಪಟ್ಟಿದ್ದೆ.
ಈ ಹೊತ್ತು ಬೆಳಿಗ್ಗೆ ದೂರದರ್ಶನದಲ್ಲಿ ದ್ವಜಾರೋಹಣ ಕವಾಯಿತನ್ನು ನೋಡುತ್ತಿರುವಾಗ ಸಿ.ಆರ್.ಪಿ.ಎಫ್ ತುಕಡಿಯ ಮುಂದಾಳಾಗಿದ್ದ ಮಹೇಂದ್ರನನ್ನು ಕಂಡು ಮತ್ತೊಮ್ಮೆ ಖುಷಿಯಾಯಿತು.
ಇಲ್ಲಿ ನಾವೆಲ್ಲ ನಮ್ಮ-ನಮ್ಮ ಮನೆಗಳಲ್ಲಿ ಬೆಚ್ಚಗಿರುವಾಗ ಅಲ್ಲಿ ಹಗಲಿರುಳೆನ್ನದೇ ಎಚ್ಚರಿದ್ದು ಕಾಯುವ ಕಾಯಕದಲ್ಲಿ ನಿರತನಾಗಿರುವ ಮಹೇಂದ್ರ ನಿನಗೊಂದು ಖರೇ ನಮಸ್ಕಾರ! ಇನ್ನೂ ಎತ್ತರದವನಾಗು. ಏರಿದೆತ್ತರವೆಂದೂ ನಿನ್ನ ತತ್ತರಿಸದಿರಲಿ.....

Sunday, January 24, 2010

ಹೀಗೆ.....ನಮ್ಮೊಳಗೊಬ್ಬ ಪಾಂಡು.......ಪ್ರತಿಬಿಂಬಿಕ್ಕೆ ಪರಿವಿಡಿ ಬರೆದಾತ!

“ಏಯ್... ಪಾಂಡೂ... ಯಾಕ.....ಬಾ...... ಇಲ್ಲೆ.....”, ಎದುರಿನ ಮನೆ ಸುಮಾ ಆಂಟೀಗೆ ಜನಾ ಬೇಕು.ಯಾರರೇ ಆಗ್ಲಿ ಅವರ ಜಗಲಿ ತುಂಬಿರಬೇಕು. ಕಟ್ಟೆಪುರಾಣ ನಿರಂತರ ನಡೀತಿರಬೇಕು! ಹಾಗಾಗಿಯೇ ಅವ್ರು ಸದಾ ಖುರ್ಚಿಹಾಕ್ಕೊಂಡು ಅಲ್ಲೇ ಕುಂತಿರ್ತಾರೆ. ಕೈ-ಕಾಲು ಒತ್ತಿಸಿಕೊಳ್ಳುವದೂ,ಮಂಡೆಬಾಚಿಸಿಕೊಳ್ಳುವುದೂ, ಎಲ್ಲದರಲ್ಲಿಯೂ ಹಳೆಯ ಕಾಲದ್ ಗತ್ತು-ಗೈರತ್ತನ್ನು ರೂಢಿಸಿಕೊಂಡೇ ಯಜಮಾನಿಯಾಗಿ ಮೆರೆವ ಆಕೆಗೆ ಶ್ರೀಮಂತಿಕೆ ಪ್ರದರ್ಶನ ಮಾಡಲು ಆ ಜಾಗವೊಂದು ಬಯಲುರಂಗಮಂದಿರ!

ಆಲ್ಲಿಯೇ ಮೊದಲು ನನಗೆ ಪಾಂಡುವಿನ ದರ್ಶನವಾದದ್ದು.ನಮ್ಮನೆ ಎದುರಿಗೇ ಇರುವ ಸುಮಾ ಆಂಟೀ ಮನೆಯ ಜಗಲಿಮೇಲೆ ಬೇಡವೆಂದರೂ ಕಣ್ಣು ಹೋಗುತ್ತಲೇ ಇರುತ್ತದೆ....ಸಿಗುವ ಪುಕ್ಕಟೆ ಮನರಂಜನೆಗಾಗಿ......ತರಹೇವಾರಿ ಆಕಾರದ.....ಗಾತ್ರದ ಮಹಿಳಾಮಣಿಗಳು.....ಅವರ ಪಟ್ಟಾಂಗ.......ಅದೂ ಏರಿದ ದನಿಯಲ್ಲಿ!.....ಮೈಕಿಲ್ಲದೇ! ಅಕ್ಕ-ಪಕ್ಕದ ಮನೆಯ ಮಕ್ಕಳ ಚಿಲಿಪಿಲಿ ಕಲರವ......ಕೆಲಸದಾಳುಗಳ ಕಿರಿಕಿರಿ.......ಪಿರಿಪಿರಿ......ಹೀಗೆ ವಿವಿಧ ವಿನೋದಾವಳಿ ಅಲ್ಲಿ ದಿನವೂ ನೋಡಲಿಕ್ಕೆ ಸಿಗುವುದುಂಟು!

ಅಂತಹ ಒಂದು ದಿನ "ಏಯ್ ಪಾಂಡೂ....", ಎಂಬ ಕಂಚಿನ ಕಂಠದ ಕರೆಗೆ ನನ್ನ ಕಣ್ಣುಗಳು ಪ್ರತಿಕ್ರಿಯಿಸಿದಾಗ ಕಂಡದ್ದು ಹರಿಕೀರ್ತನೆ ದಾಸರಂತೆ ಊದ್ದ ಕೂದಲುಗಳುಳ್ಳ......ಕರಿಯ ದೊಗಲೆ ಪ್ಯಾಂಟು ಧರಿಸಿ ಮೇಲೊಂದು ಖಾದಿ ಜುಬ್ಬಾ ಏರಿಸಿ,ಬಗಲಲ್ಲೊಂದು ಹರಕು ಜೋಳಿಗೆ ಇಳಿಬಿಟ್ಟು ಅದರೊಳಗೊಂದು ಹವಾಯಿ ಚಪ್ಪಲಿ......ಒಂದಿಷ್ಟು ಪ್ಲಾಸ್ಟಿಕ್....ಹರಿದ ಕಾಗದದ ಚಿಂದಿಗಳು......ಜತೆಗೊಂದು ಖಾಲೀ ತಟ್ಟೆ-ಬಟ್ಟಲು........"ಹಾಂ.......ಆಯೀ....."ಎನ್ನುತ್ತ ವಿನೀತನಾಗಿ ಕೈಕಟ್ಟಿಕೊಂಡು ಗೇಟಲ್ಲಿ ಪ್ರತ್ಯಕ್ಶನಾದ ಹೊಳಪುಕಂಗಳ ವಾಮನಮೂರ್ತಿ!

ಜನರ ಕಣ್ಣಲ್ಲಿ ಆತನೊಬ್ಬ ಹುಚ್ಚ. ಕಲ್ಯಾಣನಗರ.......ನಿರ್ಮಲನಗರ..... ಆತನ ಸಾಮ್ರಾಜ್ಯ. ಆ ಭಾಗದ ಜನರೆಲ್ಲರಿಗೂ ಪಾಂಡು ಚಿರಪರಿಚಿತ.ರಸ್ತೆಗುಂಟ ಹೊರಟಅನೆಂದರೆ ಆಚೀಚೆಯೆಲ್ಲೂ ನೋಡುವುದಿಲ್ಲ! ತನ್ನಷ್ಟಕ್ಕೆ ತಾನೇ ಅದೇನೇನೋ ತಿಳಿಯದ ಭಾಷೆಯಲ್ಲಿ ಮಾತನಾಡುತ್ತಾನೆ.ನಗುತ್ತಾನೆ.....ಲೈಟಿನ ಕಂಬದೊಂದಿಗೆ ತಾಸುಗಟ್ಟಲೆ ಉಭಯಕುಶಲೋಪರಿ ನಡೆಸುತ್ತಾನೆ! ಮನುಷ್ಯರೊಂದಿಗೆ ಮಾತ್ರ ಎರಡು ನಿಮಿಷಕ್ಕಿಂತ ಹೆಚ್ಚಿಗೆ ಮಾತನಾಡಲಾರ! ತೀರಾ ಅಸ್ವಸ್ಥನಾದಾಗ......ಕೋಪಗೊಂಡಾಗ.....ದಾರಿಬದಿಯ ಕಲ್ಲು ತೂರಿ......ಇನ್ನೊಂದು ಕಲ್ಲಿನ ಮೇಲೆ ಸಿಟ್ಟು ತೀರಿಸಿಕೊಳ್ಳುತ್ತಾನೆ. ಹೆಣ್ಣು ದೇವರನ್ನು ಬಾಯಿಗೆಬಂದಂತೆ ಬಯ್ಯುತ್ತಾನೆ.....ಮರುಕ್ಶಣ ಗೋಳೋ ಎಂದು ಅಳುತ್ತಾನೆ.
ಹೀಗೊಂದುದಿನ ರಸ್ತೆಯಮೇಲೆ ನಮ್ಮನಿಮ್ಮೆಲ್ಲರಂತೆ ಆತ ಹೋಗುತ್ತಿರುವಾಗ ಸಿಕ್ಕ......ನಕ್ಕ! ಆ ಆಪ್ತ ನಗುವೇ ನಮ್ಮಿಬ್ಬರ ಸಂವಹನಕ್ಕೆ ಸಾಧ್ಯತೆ ಮಾಡಿಕೂಟ್ಟದ್ದು.ಮುಂದೆ ಪಾಂಡು ಎರಡು ದಿನಕ್ಕೊಮ್ಮೆಯಾದರೂ ಸಿಕ್ಕು,"ಸಾಬ್, ಚಾಯ್ ಕೆ ಲಿಯೆ ದೋ ರುಪಾಯ್" ಎನ್ನುವಷ್ಟು ಸಲಿಗೆ ಸಾಧ್ಯವಾದದ್ದು. ನನಗೆ ಕುತೂಹಲ. ನಿಧಾನವಾಗಿ," ಏನೋ ಪಾಂಡು... ಚಾ ಕುಡ್ದಿಯೇನೋ",ಎನ್ನುವ ಮಟ್ಟಿಗೆ ಆಪ್ತತೆ ಆವರಿಸಿ ಆತನೆಡೆಗೊಂದು ಕುತೂಹಲ ಶುರುವಾದದ್ದು.
ಒಂದಿನ್ ಪಾಂಡೂಗೆ ಆವೇಶ ಬಂದಿತ್ತು! ಬೆಳ್ಳಂಬೆಳಿಗ್ಗೆ ರಸ್ತೆ ಬದಿಯ ಕಸದ ತೊಟ್ಟಿಯಮೇಲೆ ರೌದ್ರಾವೇಶದ ಪ್ರಹಾರ ನಡೆಸಿದ್ದ. ಅವನಿಗೆ ಬೇರಾವ ಪರಿವೆಯೂ ಇರಲಿಲ್ಲ.ಕೋಪವೆಲ್ಲ ಖಾಲಿಯಾದಮೇಲೆ ಅಲ್ಲೇ ಇರುವ ಮರದ ಬುಡಕೆ ಕುಳಿತು ಮುಖಮುಚ್ಚಿಕೊಂಡಿದ್ದ! "ಯಾಕೋ ಪಾಂಡು....ಏನಾಯ್ತೋ", ಎಂದರೆ........."ನಯಿ ಸಾಬ್, ಕುಛ್ ನಹೀ....ಚಾಯ್ ಕೇಲಿಯೆ ದೋ ರುಪಾಯ್...."ಎಂದು ಎಷ್ಟು ಸೌಮ್ಯವಾಗಿ ವಿನೀತನಾಗಿ ಹೇಳಿದ್ದನೆಂದರೆ ಕೆಲಕ್ಶಣದ ಹಿಂದಿನ ಪಾಂಡುವೇ ಅಲ್ಲವೆಂಬಷ್ಟು!
ಯಾವಾಗಲೂ ಶುಚಿಯಾಗಿರುತ್ತಿದ್ದ ಪಾಂಡು ಎಂದೂ ಹರಕು ವಸ್ತ್ರ ತೊಟ್ಟವನಲ್ಲ. ಅಂದೇಕೋ ಬಟ್ಟೆ ಹರಿದಿತ್ತು.ನನ್ನದೊಂದು ಅಂಗಿ-ಪ್ಯಾಂಟು ಕೊಡಹೋದರೆ,"ನಯಿ ಸಾಬ್.....ಅಚ್ಛಾ ಹೈ......ನಹಿ ಚಾಹಿಯೆ..." ಎಂದು ನಯವಾಗಿ ತಿರಸ್ಕರಿಸಿದ್ದ! "ಚಾಯ್ ಕೇಲಿಯೆ ದೋ ರುಪಾಯ್" ಎಂದಷ್ಟೇ ಹೇಳಿ ನಕ್ಕಿದ್ದ! ಐದು ರುಪಾಯಿ ಕೊಟ್ಟರೆ ಒಲ್ಲೆನೆಂಬ ಪಾಂಡುವಿಗೆ ಎರಡು ರೂಪಾಯಿಯನ್ನೇ ಕೊಡಬೇಕಾಗುತ್ತಿತ್ತು. ಎಂಟಾಣೆ ಜಾಸ್ತಿ ಕೊಟ್ಟರೂ ಒಲ್ಲೆನೆನುತ್ತಿದ್ದ.

ನನಗಂತೂ ದಿನದಿಂದ ದಿನಕ್ಕೆ ಪಾಂಡುವಿನ ಮೇಲೆ ಕುತೂಹಲ ಜಾಸ್ತಿಯಾಗತೊಡಗಿತು. ಆತ ಎಲ್ಲಿಯವನು....ಎಲ್ಲಿರುತ್ತಾನೆ...ಎಂದೆಲ್ಲ ಕೆದಕಿ ಕೇಳಬೇಕೆಂದುಕೊಂಡರೂ," ಸಾಬ್ ಚಾಯ್ ಕೇಲಿಯೆ ದೋ ರುಪಾಯ್" ಎಂದಷ್ಟೇ ಹೇಳಿ ಮರುಕ್ಶಣ ಓಟಕೀಳುತ್ತಿದ್ದ.ಯಾರಿಗೂ ತೊಂದರೆಕೊಡದ ಆತ ಚಿಕ್ಕಮಕ್ಕಳನ್ನೂ ಎಂದಿಗೂ ಹೆದರಿಸಿದವನಲ್ಲ! ಹೆಂಗಸರ ಕಂಡರೆ ವಿಪರೀತ ಗೌರವ.

ಹೀಗೊಂದು ದಿನ ಪಾಂಡು ತುಂಬಾ ಭಾವುಕನಾಗಿದ್ದ! ಎದುರಿಗೆ ಸೊಂಪಾಗಿ ಬಿಟ್ಟಿತಿಂದು ಎರಡೂ ಕಾಲು ಮುಂದೆಚಾಚಿ ಮಲಗಿರುವ ಬೀದಿನಾಯಿ ಪಕ್ಕಿ ತಲೆಯಲ್ಲಾಡಿಸುತ್ತ ಪಾಂಡುವಿನ ಸಂಭಾಷಣೆಗೆ ಸಾಥಿಯಾಗಿತ್ತು!ಎಷ್ಟೊಂದು ಅಕ್ಕರೆಯಿಂದ ಯಾವುದೋ ವಿಚಿತ್ರ ಭಾಷೆಯಲ್ಲಿ ಆ ಬೀದಿನಾಯಿಯೊಂದಿಗೆ ಸಂಭಾಷಣೆಯಲ್ಲಿ ಮಗ್ನನಾಗಿದ್ದನೆಂದರೆ.......ಈ ಜಗದ ಪರಿವೆಯೇ ಇರಲಿಲ್ಲ ಅವನಿಗೆ.," ಸಾಬ್ ಚಾಯ್ ಕೇಲಿಯೆ ದೋ ರುಪಾಯ್" ಕೂಡ ಮರೆತಂತಿತ್ತು.

ಹೀಗೆ ವರ್ಷಗಟ್ಟಲೆ ಸಾಗಿದ ಬದುಕಿನಲ್ಲಿ ಪಾಂಡುವೂ ಒಂದು ಭಾಗವಾಗಿ ಹೋಗಿದ್ದ. ಕೆಲವೊಮ್ಮೆ ಸಂತನಂತೆ....ಒಮ್ಮೆ ಭಿಕಾರಿಯಂತೆ......ಮುಗದೊಮ್ಮೆ ಭಾವಸಮ್ರುದ್ಧ ಮನುಷ್ಯನಂತೆ......ಒಮ್ಮೊಮ್ಮೆ ಶಾಂತಮೊಗದ ಜ್ನಾನಿಯಂತೆ.....ಬದುಕಿನ ಸಕಲವನ್ನೂ ಅರೆದುಕುಡಿದು ನಿರ್ಮೋಹಿಯೂ,ನಿರಹಂಕಾರಿಯೂ ಆದ ಬುದ್ಧನಂತೆ.........ಮರುಕ್ಶಣಕ್ಕೆ ಮುಗ್ಧ ಮಗುವಿನಂತೆ......ಹೀಗೆ ವಿವಿಧ ರೂಪಕಗಳಲ್ಲಿ ನನ್ನನ್ನು......ನನ್ನೊಳಗನ್ನು ತಳಮಳಿಸುತ್ತಿದ್ದ ಪಾಂಡು ಇರುತ್ತಿದ್ದದ್ದು ಮಾತ್ರ ಭೈರವನಂತೆ! ಸ್ಮಶಾನದಲ್ಲಿ........ಅದೂ ಅಲ್ಲಿ ಕಾರ್ಪೋರೇಶನ್ನಿನವರು ಬಿಸಾಕಿದ ದೊಡ್ಡ ಗಾತ್ರದ ಮೋರಿಯ ಸಿಮೆಂಟ್ ಪೈಪಿನಲ್ಲಿ ಎಂದು ಒಂದಿನ ಅಕಸ್ಮಾತ್ತಾಗಿ ಗೊತ್ತಾದಾಗ ನನ್ನ ಕುತೂಹಲ ಇನ್ನಷ್ಟು ಜಾಸ್ತಿಯಾಗಿತ್ತು!ಬಿಡುವಿನ ವೇಳೆಯಲ್ಲಿ ಅಧ್ಯಯನಕ್ಕೊಂದು ವಸ್ತು ಸಿಕ್ಕಂತಾಯ್ತು! ಎಂದುಕೊಂಡೆ.

ಇತ್ತೀಚೆಗೆನೋ ಕಳಕೊಂಡ ಕಳವಳ. ನನ್ನೊಳಗೇ ಒಂಥರಾ ಕಿರಿಕಿರಿ.....ದೈನಂದಿನ ಯಾಂತ್ರಿಕ ಬದುಕಿನಲ್ಲಿ ಕಳೆದು ಹೋದ ನನಗೆ ಇದ್ದಕ್ಕಿದ್ದಂತೆ ಯಾಕೋ ಪಾಂಡೂನ ಕಾಣೋ ಹಂಬಲ. ನನ್ನ ಪಾಲಿಗೆ ಆತನೊಬ್ಬ ದಾರ್ಶನಿಕ. ಬದುಕನ್ನು ಕನ್ನಡಿ ಹಿಡಿದು ಕಾಣಿಸಿದಾತ." ಸಾಬ್ ಚಾಯ್ ಕೇಲಿಯೆ ದೋ ರುಪಾಯ್" ಎಂಬ ಸಾಲುಗಳ ಮೂಲಕವೇ ಎಷ್ಟೊಂದು ದೊಡ್ಡ ಪಾಠ ಹೇಳಿಕೊಟ್ಟ ಸಂತ! ಅನೇಕ ದಿನಗಳಿಂದ ಆತನನ್ನು ಕಂಡಿಲ್ಲವಲ್ಲ ಎಂದು ಎದುರಿನ ಕಿರಾಣಿ ಅಂಗಡಿಯವನನ್ನು ಕೇಳಿದೆ. "ಹೌದು ಭಾಳ ದಿನಾ ಆತೂ...ನಾನೂ ಕಂಡಿಲ್ಲರಿ.....ಪಾಪ.... ಸರ", ಸ್ಟ್ಯಾನ್ಲಿಯನ್ನು ಕೇಳಿದೆ, ಶಾಹಿದಾಳನ್ನು ಕೇಳಿದೆ.....ಒಂದೇ ಉತ್ತರ..."ನಾನೂ ಕಂಡಿಲ್ಲರೀ...." ಸುಮಾ ಆಂಟಿಯನ್ನು ಕೇಳೋಣ್ವೆಂದರೆ ಅವರ ಮನೆಯ ಜಗಲಿಯೂ ಖಾಲಿ......ಖಾಲಿ... ಅವರಾಗಲೇ ಆ ಭಾಡಿಗೆ ಮನೆಯಿಂದ ಇನ್ನೆಲ್ಲಿಗೋ ದೂರ ಹೋಗಿಯಾಗಿತ್ತು. ಅಂತೂ ಕೊನೆಗೆ ಪಾಂಡುಗೆ ಎರಡು ರೂಪಾಯಿಗೆ ಚಾ ಕೊಡುತ್ತಿದ್ದ ಶೆಟ್ಟರ ಅಂಗಡಿಗೆ ಹೋಗಿ ಕೇಳಲಾಗಿ............

"ಪಾಂಡೂ ಇಲ್ರಿ.... ಅಂವಾ ಇನ್ನ ಬರಾಂಗಿಲ್ಲರಿ.....ನಂಗೂ ಭಾಳ ಕೆಟ್ಟನಿಸ್ತು.....ಮೊನ್ನೆ ಇಲ್ಲೇ ಬಾರಾಕೊಟ್ರಿ ಹಂತ್ಯಾಕ್ಕ ರೇಲ್ವೆ ಹಳಿಮ್ಯಾಲ ನಡೆದು ಹೊಂಟಿದ್ನಂತ್ರಿ....ಅವಂದ್ ಜಗತ್ತೇ ಬೇರೆ ನೋಡ್ರೀ....ಟ್ರೇನ್ ಗೆ ಸಿಕ್ಕು ಸತ್ತಾನ ನೋಡ್ರಿ.....ಪಾಪ!".ದಿನಪತ್ರಿಕೆಯಲ್ಲಿ "ಅಪರಿಚಿತ ವ್ಯಕ್ತಿ ರೈಲಿನಡಿಗೆ ಸಿಕ್ಕು ಸಾವು"....ಸುದ್ದಿ ಓದುತ್ತಿದ್ದಂತೆ ಪಾಂಡು ಕಾಡತೊಡಗಿದ್ದ. ಗೊತ್ತು ಗುರಿಯಿಲ್ಲದೇ ಬದುಕಿ..... ಅವೆಷ್ಟೋ ಎರಡು ರೂಪಾಯಿಗಳ ಚಾ ಕುಡಿದು ಅದ್ಭುತ ಬದುಕಿನ ದರ್ಶನಮಾಡಿಸಿದ ಪಾಂಡು ಗುರಿಯಿಲ್ಲದ-ಗುರುತಿಲ್ಲದ ಹಳಿಗಳ ನಡುವೆ ಹರಿದು ಛಿಂದಿಯಾಗಿ ಸಾವಿನಲ್ಲೂ ಬದುಕಿಗೆ ಕನ್ನಡಿ ಹಿಡಿದೇ ಪ್ರತಿಬಿಂಬವಾಗಿ ರೂಪಕವಾಗಿಬಿಟ್ಟಿದ್ದಾನೆ.

Monday, January 18, 2010

Bhupali..... I Love You...! Ab Maanale Peetam ki Batiya

Yes..... It is!

I go back a decade. Recollect the moment when I was introduced to you.... I was too young to digset you. Totally unknown.... But felt like some what wavelength matches at the very first sight!

You were so serious and not even ready to smile. Do you remember those days.....I was struggeling to open my mouth..... Whenever I tried to establish a communication you avoided in one or the other way. But never rejected! Many a times, at that point of time I was more influenced by others saying that your were not at my reach.

But I was after you. Even now!Ggradually you also opened up! Did you feel the excitement that I had when first time you smiled at me? It was a great moment for me. I regained my confidence. Time is the best solution for everything. Day by day as started revisiting to you.... you became soft and started responding to my notes.

Pancham, who was little close to me from the beginning helped me to establish a strong bond with your first note! Dhaivat gave me a chance to express my strong willingness towards you. At last you opened the door! The vibration started....

Slowly you started responding. Today after ten years of our friendship you sent me a signal of acceptance! I cant keep quite know. I must openly announce before Shadja,Rishab, Gandhar,Pancham and Dhaivat that I love you.....I want to get lost in you....

Bhupali.... You are great! Through you I could convince my mentor that this poor chap deserves some attention and guidance to go forward!
"Dharata hnooo Dhyan....
Tero hi...
Araj Suno Mori
Sur.. Taala... Rasaki.."



Sunday, January 17, 2010

ಬೇರುಹುಳು

ಆಗಷ್ಟೇ ಬೇರು ಬಿಟ್ಟು
ನೆಲಸೀಳಿ ತಳಸೇರುವ ತವಕ
ಮುಗಿಲೆಡೆಗೆ ನೆಟ್ಟ ನೇರ ನೋಟ
ಮೈಚಾಚಿ ಗಿಣ್ಣೊಡೆದು ತೊಡೆ
ಸಡಿಲಿಸಿ; ಸಿಂಗಾರವೊಡೆದು ಸಾವಿರ
ಬೀಜ ಫಲ ಬರ್ಜರೀ
ಫಸಲು ಸುಗ್ಗಿಯ ಕಾಲಕ್ಕೆ
ಜೋಗುಳದ ತಾಳಕ್ಕೆ ಗೆಜ್ಜೆಹೆಜ್ಜೆ;
ಗುಟ್ಟಾಗಿ ಕಂದನ ಕೂಡ
ಪಿಸುಮಾತು.......
ಚುಕ್ಕಿ ಚಂದಾಮ ಬಲುದೂರ ಚಿನ್ನಾ
ಬೇರುಬಿಡು ಆಳಕ್ಕೆ
ಗಟ್ಟಿಗೊಳ್ಳಲಿ ನೆಲದೊಡಲು
ತಾಯಿಬೇರು.

ಸಂತಸದ ನೋವೆಂದೆ ಎಣಿಸಿದ್ದೆ
ಮೊದಮೊದಲು
ಮೈಯೆಲ್ಲಾ ಸುಸ್ತು, ಬಾಡುತ್ತಿದೆ
ಹೆಂಗರುಳು,ರುಚಿಯಿಲ್ಲ ನಾಲಗೆಗೆ
ಎಸರೂ ಬತ್ತುತ್ತಿದೆ
ಬಸಿರು ಮೊದಲಿನಂತಿಲ್ಲ
ಬೇರುಸಡಿಲಾದಮ್ತೆ, ಅಕಾಶವೇ
ತಲೆಮೇಲೆ ಬಿದ್ದಂತೆ ಅಪಶಕುನ

ಕೊರೆಯುತ್ತಿದೆ ಹುಳು
ನನ್ನೆಲ್ಲ ಕಸುಹೀರಿ ಹಿಂಡಿ ಹಿಪ್ಪೆ
ಕುಸಿಯುತ್ತಿದ್ದೇನೆ
ಇಂದಿಗೂ ಗೆಲವು ನಿನ್ನದೇ
ನಾನು ಸೋತುಗೆದ್ದಿದ್ದೇನೆ!

Saturday, January 16, 2010

ಅಂತರ್ಜಾಲವ್ನ್ನೆಲ್ಲಾ ಜಾಲಾಡಿದರೂ ಸಿಗದ ಸುದ್ದಿ samaachaara

ಮೊನ್ನೆ ಊರಿಗೆ ಹೋಗಿದ್ದೆ. ಬೆಳ ಬೆಳಿಗ್ಗೆ ಇನ್ನೂ ಸ್ಲೀಪಿಂಗ್ ಮೊಡಲ್ಲಿಯೇ ಇದ್ದೆ. ಪರಗೋಲದ ಸೂರೆನ್ನೇ ದಿಟ್ಟಿಸುತ್ತ ಕೂತಿದ್ದೆ. ಗೇಟಿನ ಸದ್ದಾದದ್ದೇ ಏನೋ ವಿಶೇಷ ಸುದ್ದಿ ಉಂಟು ಎಂಬುದು ಖಾತ್ರಿಯಾಗಿತ್ತು!
" ಮತ್ತೆನ್ರೋ ಹುಬ್ಬಳ್ಳಿ ಭಟ್ರು.... ಯಾವಾಗ ಬರೋಣಾತು? ಮತ್ತೆಲ್ಲಾ ಆರಾಮ? ನಿನ್ನೆ ರಾತ್ರೆನೆ ಬಂದ್ಯನೋ ಮಾರಾಯ. ಒಂದ್ಮಾತು ಹೇಳೋದಲ್ಲಾ? ನಿನ್ನೂ ಕರ್ಕಂಡು ಹೋಗ್ತಿದ್ವಲೋ ಮಾರಾಯ", ಹೀಗೆ ನಿರರ್ಗಳವಾಗಿ ರೇಡಿಯೋ ಮಿರ್ಚಿಯ ಪ್ರದೇಶ ಸಮಾಚಾರ ಪ್ರಸಾರ ಆಗಲೇ ಶುರುವಾಗಿಬಿಟ್ಟಿತ್ತು. ಊರು ಅಂದ್ರೆ ಹಾಗೇನೆ...... ಅದೊಂದು ತರಹಾ ಆಕಾಶವಾಣಿಯ ವಿವಿಧ ಭಾರತಿ ಸ್ಟೇಶನ್ ಇದ್ದಂಗೆ! ಬೇಕಾಗಿರಲಿ ಬೇಡಾಗಿರಲಿ ಎಲ್ಲವೂ ಕಣ್ಣಿಗೆ ಕಟ್ಟುವಂತೆ ಕಿವಿಮೇಲೆ ಬೀಳುತ್ತಿರುತ್ತವೆ. ತುಂಡಿಲ್ಲದ ಆರದ್ರೆ ಮಳೆಯ haage!
'ನಿನ್ನೆ ರಾತ್ರೆ ಹನ್ನೆರಡಾತ್ ನೋಡು. ಪಡಿಗ್ ಪಡೇನೆ ಅಲ್ಲಿಗೆ ಹೋಗಿದ್ಯ. ಅವ್ವು ಎಂತಾ ಮಾತಾಡ್ತ್ವ? ದಿನಾ ಇಲ್ಲಿಪ್ಪವ್ವು ಯಂಗ. ರಸ್ತೆ ಬೇಕಾದ್ದು ಯಂಗಕ್ಕಲ್ದನ.... ಹೊಯ್..... ಎಂತಾ ಹೇಳ್ತೆ ನೀನು.... ಇದೊಳ್ಳೆ ಕತೆಯಾಗೊತಲ ಮಾರಾಯ......', ಹೀಗೆ ಯಕ್ಷಗಾನ ತಾಳಮದ್ದಲೆಯಲ್ಲಿನ ವಿದೂಷಕನ ಪಾತ್ರದಂತೆ ನಿರೂಪಣೆ ಸಾಗಿತ್ತು. ದೇವರಾಣೆ ಮಾಡಿ ಹೇಳ್ತೇನೆ ನನಗೊಂದೂ ತಲೆಬುಡ ಅರ್ಥ ಆಗ್ಲಿಲ್ಲ. ನಾನೂ ಒಂದು ಕವಳ ಹಾಕಿ ಅಡಿಕೆ ಸೊಕ್ಕು ಹತ್ತಿ ಬೆವರಿಳಿಯ ಹತ್ತಿದಮೆಲೆಯೇ ತಿಳಿದದ್ದು ಇದು ಹೊಸದಾಗಿ ನಿರ್ಮಾಣವಾದ ರಸ್ತೆಯ ಸುದ್ದಿ ಎಂದು!
ಊರೆಂದರೆ ಊರು ಅದು! ರೈಲು ಬೋಗಿಯಂತಿರುವ ಸಾಲು ಸಾಲು ಮನೆಗಳು. ಊರಮುಂದಿನಿಂದೊಂದು ಗಾಡಿರಸ್ತೆ! ಯಾರ ಮನೆಗೆ ಯಾರು ಬರುವದಿದ್ದರೂ ಅದೊಂದೇ ಹೆದ್ದಾರಿ! ಮಧ್ಯಾಹ್ನ ಜಗಲಿಕಟ್ಟೆಯ ಹೇಡಿಗೆಯ ಮೇಲೆ ಕುಳಿತರೆ ಮುಸ್ಸಂಜೆgE ಏಳುತ್ತಿದ್ದ ವಯಸ್ಸಾದ ಹೆಂಗಸರ ಕುರಿತು ನಾವು ಚಿಕ್ಕವರಿದ್ದಾಗ ತಮಾಷೆ ಮಾಡಿ ನಗುತ್ತಿದ್ದದ್ದುಂಟು. ಅದೊಂದು ತರಹದ ಚೆಕ್ ಪೋಸ್ಟ್ ಇದ್ದಹಾಗಿತ್ತು!
"ಎಸ್ತ್ದೂರ್ ಹೋಗಿದ್ಯ.....ಅವ್ರಮನೆ ಸುಜಾತ ಇನ್ನೂ ಮುಟ್ಟೇ ಅಯ್ದಿಲ್ಯ ಎಂತದೆ......ಹಿಂಡಿಚೀಲ ಎಂಥ ನೀ ಹತ್ಗಂದ್ ಹೋಗ್ತ್ಯ....... ಆಳಗ ಇಲ್ಲ್ಯನಾ.... ಯಂಗಂತೂ ಈ ಸಲ ಚೌತಿ ಹಬ್ಬಕ್ಕೆ ಮುತ್ತ ಅಪ್ಪೋ ದಿವ್ಸ ಮಾರಾಯ್ತಿ.....ದೆರ್ಪೂಜೆ ಬಾರೀನೂ ಬಿಂದು..... ಎಂತಾ ಮಾಡೋ ತಿಲಿತಿಲ್ಲೇ....... ಮುಟ್ ಮುಂದೊಪ್ ಗುಳಿಗೆ ಅದರೂ ತಂದ್ಕೊಡಿ ಹೇಳಿ ಯಮ್ಮನೆ ಅವರತ್ರ ಹೇಳಿದ್ದೆ.........ಹೀಗೆ ತೀರಾ ಖಾಸಗಿ ಸಂಗತಿಗಳಿಂದ ಮೊದಲಾಗಿ ಏನೆಲ್ಲಾ ವಸ್ತು ವೈವಿಧ್ಯಗಳುಧಾರವಾಡ ಆಕಾಶವಾಣಿಯ ಅಕ್ಕನ ಬಳಗ ಕಾರ್ಯಕ್ರಮದಂತೆ ಬಿತ್ತರಗೊಳ್ಳುತ್ತಿದ್ದದ್ದು ನಮ್ಮಂತ ಪಡ್ಡೆಗಳಿಗೆ ವಿನೋದದ ಸಂಗತಿಯಾಗಿತ್ತು!
ನನಗಿನ್ನೂ ನೆನಪಿದೆ...... ಕೊಟ್ಟಿಗೆ ಚಾಕರಿಗೆಂದು ಕಿಲೋಮೀಟರ್ ಉದ್ದ ಹಿಂದಿತಾತು,ಹಾಲಿನ ಕ್ಯಾನು ಹಿಡಿದು ಹೋಗಿ ಹಾಲು ಕರೆದುಕೊಂಡು ಬರುತ್ತಿದ್ದುದು! ಬತ್ತವಿರಲಿ, ಅಡಿಕೆ ಇರಲಿ ತಲೆಯಮೆಲೆಯೇ ಹೊತ್ತುಕೊಂಡು ಮನೆತಳುಪಿಸಬೇಕಾದರೆ ಏಳು-ಹನ್ನೊಂದು ಆಗ್ತಿತ್ತು!
ಒಂದೆರಡು ತಲೆಮಾರು ಹೀಗೆಯೇ ಕಳೆದಿರಬೇಕು. ಈಗೀಗ ಬೆಳೆಯುತ್ತಿರುವ ಹುಡುಗರಿಗೆ ಊರ ಹಿಂಬಾಗದಿಂದಲೂ ಒಂದು ರಸ್ತೆಯಿದ್ದರೆ ಎಲ್ಲರಿಗೂ ಅನುಕೂಲ ಎಂಬುದು ಜ್ಞಾನೋದಯವಾಗಿ ತಿಂಗಳಾನುಗಟ್ಟಲೆ ಜಗಲಿ ಪುರಾಣದಲ್ಲಿ ಚರ್ವಿತ ಚರ್ವನವಾಗುವದರಲ್ಲಿ ಅದಾಗಲೇ ಆ ರಸ್ತೆಬರುವ ಜಾಗವನ್ನು ಅತಿಕ್ರಮಿಸಿದ ಭೂಪನೊಬ್ಬ ಅಲ್ಲಿ ಬೇಲಿ ಹಾಕಿ ತಕರಾರು ತೆಗೆಯಲು ಪ್ರಾರಂಭಿಸಿದ್ದೆ ಸರಣಿ ತಾಳಮದ್ದಳೆಗೆ ಅವಕಾಶವಾಯಿತು. ರಥಬೀದಿ ಪರ್ವ, ಸುಂದರಕಾಂಡ, ಸರೋಜರಾಸಂಧ, ಸುಮಕೊಮಲೋಪಾಖ್ಯಾನ ಹೀಗೆ ತಿಂಗಳುಗಳ ಕಾಲ ನಡೆದ ಜಗಲಿಕಟ್ಟೆ ತಾಳಮದ್ದಳೆಗೆ ರಂಗು ಏರಿದ್ದು ಗಧಾಯುದ್ದ ಪ್ರಸಂಗದಿಂದ. ಈಗ ತಾನೇ ಸುಂಬಳ ಗತ್ತಿಗೊಲ್ಲುತ್ತಿರುವ ಎಲೆಪೋರಂದಿರು ಸೆಡ್ಡು ಹೊಡೆದಾಗಲೇ ಅದಕ್ಕೊಂದು ಹುರುಪು ಬಂದಿದ್ದು. ಪಡೆಗೆ ಪಡೆಯೇ ಸಲಿಕೆ ಪಿಕಾಸುಗಲಾದಿಯಾಗಿ ಸಕಲ ಹತ್ಯಾರಗಳೊಂದಿಗೆ ಬೆಲಿಮುರಿ, ಧರೆ ಅಗೆದರು ರಸ್ತೆ ನಿರ್ಮಾಣ ಆಗಿಯೇ ಹೋಯಿತು.
ಅಲ್ಲಿಂದ ಸುರುವಾಯಿತು ನೋಡಿ ಪೋನಾಯನ. ರಸ್ತೆ ಬಳಸುವವರಬಿತ್ತು ಊರ-ಪರವೂರ ಹೆಗಡೆ-ಭಟ್ಟರಾದಿಯಾಗಿ ಎಲ್ಲರಿಗೂ ಕರೆ -ಕರೆ, ಜತೆಗೆ ಲೋಕಲ್ ರಾಜಕೀಯದ ಘಾಟು! ರಾಮ-ಕೃಷ್ಣಾ, ಹನುಮ- ಭೀಮ ಎಲ್ಲರೂ ಬಂದರೋ ಬಂದರು..... ಬರಪರಿಹಾರ ಸಮೀಕ್ಷೆಗೆ ದಿಲ್ಲಿ ನಾಯಕರು ಹೀಗೆ ಬಂದು ಹಾಗೆ hodante! " ಅಲ್ಲಿಂದ ಸುರುವಾಯಿತು ನೋಡಿ ಸಾಯಂಕಾಲದೊಳಗೆ ಪಡೆ ಪಡೆಯೇ ಜಮಾಯಿಸಿ ಊರ ಪಂಚಾತಿಗೆ ಬಂದ ದೊಡ್ಡವರ ಮನೆಗೆ ಹೋಗಿ ನಮ್ಮೂರ ರಸ್ತೆಗೆ ನಿಮ್ಮದೇನು ಯಜಮಾನಿಕೆ... ನಮ್ಮೊಳಗನ್ನು ನಾವು ಬಲ್ಲೆವು ..... ಬರುವದಾದರೆ ಬನ್ನಿ ಊರ ಕೊಳಕೆಲ್ಲ ಸುಧಾರಿಸಿ....ಒಂದುಕನ್ನಿಗೆಬೆಣ್ಣೆ ಇನ್ನೊಂದಕ್ಕೆ ಸುಣ್ಣ ಇದಾವ ನ್ಯಾಯ?....... ಮಾತಲ್ಲೇ ಕಟ್ಟಿಹಾಕಿ..... ತಂತ್ರಕ್ಕೆ ಪ್ರತಿ ತಂತ್ರ ಹೂಡಿ ಅಂತೂ ಮನಿಗೆ ಬರಲ್ಲೇ ಹನ್ನೆರಡು ಗಂಟೆ ರಾತ್ರೆ ಮಾರಾಯ!" ಈಗ ಮತ್ತೊಮ್ಮೆ ಮುಖ್ಯಾಂಶಗಳು .....ತೆಳತ್ತ ಇಲ್ಲಯ ತಮ......ನಿನ್ಗಕ್ಕೆನ್ತಾ ಗೊತ್ತಾಗ್ತು..... ಸಾಕೋ ಸಾಕು ಮಾರಾಯ...... ಈ ನರಜನ್ಮ. ಸುಬ್ಬಾ ಭಟ್ರು ಮೊನ್ನೆ ಅತ್ತಾ ಹತ್ತಲ್ಲೇ ಹೋಗಿ ಬಿದ್ ಪೆತ್ತಾಗೊಯ್ದದ. ನಿನ್ ಕಾರ್ ತೇಗಿ ನೋಡನ ಅವ್ರನ್ನೊಂದಿಸ್ತು ನೋಡ್ಕ್ಯನ್ದಾರುವ ಬಪ್ಪನಾ....."
ಇಂತಾ ಮನರಂಜನೆ, ಇಡೀ ಪ್ರಾದೇಶಿಕ, ಬೌಗೋಳಿಕ ವರ್ತಮಾನ ಅಂತರಜಾಲದಲ್ಲಿ ಜಾಲಾಡಿದರೂ ಸಿಕ್ಕೀತಾ?
ವಾವ್ ಕುಂತಲ್ಲೇ ಎಷ್ಟೊಂದ್ ಮಾಹಿತಿ.... ಅದೇನು ರಸವತ್ತಾದ ವರ್ಣನೆ........ಗ್ರೇಟ್! ಹ್ಯಾಟ್ಸ್ ಆಪ್ಹ್ .....

Possibility of creating new Realm of Happiness

It is human tendency to look back in the past and create a comfort zone! "Gone are the golden days, Now everything is so easily available and affordable.This generation do not have patience....",Bla...Bla....Bla... comment passed by most of us in one or the other occassion,Isn't it?

Always past is pleasent present is tensed and the unknown future is fearful! Still life is running.......days after days.....week after weeks.......year after year......Golden words keep repeating!

I was just rewinding my memories...... Wow what a wonderful experience! looking back..... It's just a moment to forget the tensed present. Next moment the comfort zone broke down as my naughty son started screeming to his amma to tell stories! Really she is a story factory. She produces(not creates!)stories according to his demand! Great!..... escape for me..... I can't tailor the stories according to the demand! But many a times a subject for amma's stories.

It's the moment a new ray of thought lightened in me. We always live in the past and think of future! But never try to complete the present! If I can start the same process exactly oppsite way; life would be more comfortable! Living in future by creating pastresent!(As my wife does in her stories to our little .....no...no...no... great master!) It could give a complete vision of the past!

Thus today's my learning from my son is I should complete my past. Never carry baggage on my back.Future should be always like new canvas. We can do wonders with plain white new canvas making the present colourful and meaningful. It's a possibility of creating new realm of happiness!