Thursday, August 2, 2012

George Orwell


 
 Eric Arthur Blair (George Orwell)
 25 June 1903 – 21 January 1950

£Á£ÉÃPÉ §gÉAiÀÄÄvÉÛãÉ?  
eÁeïð DªÉð¯ï
C£ÀÄ: ªÀ¸ÀAತ

(ಈ ಪ್ರಬಂಧವನ್ನು ಜಾರ್ಜ್  ಆರ್ವೆಲ್ ಬರೆದದ್ದು 1946 ರಲ್ಲಿ. ಬಿಹಾರ ರಾಜ್ಯದ ಮೋತಿಹಾರಿಯಲ್ಲಿ ಜನಿಸಿದ  ಇವರು ಮುಂದೆ ಇಂಗ್ಲೀಷ್ ಕಾದಂಬರಿಕಾರ ಹಾಗೂ ಪತ್ರಕರ್ತರಾಗಿ ಬರವಣಿಗೆಯಲ್ಲಿನ ಸ್ಪಷ್ಟತೆ, ಬೌದ್ಧಿಕತೆ, ಹಾಸ್ಯ, ಸಾಮಾಜಿಕ ನ್ಯಾಯದ ಕುರಿತ ತಿಳುವಳಿಕೆ, ಸರ್ವಾಧಿಕಾರದ ವಿರೋಧ ಹಾಗೂ ಸಮಾಜವಾದೀ ಪ್ರಜಾಪ್ರಭುತ್ವದ ಮೇಲಿನ ನಂಬಕೆಗಳ ಮೂಲಕ ಹೆಸರುವಾಸಿಯಾದರು. 20ನೇ ಶತಮಾನದಲ್ಲಿ ಇಂಗ್ಲೀಷ್ ಸಂಸ್ಕೃತಿಯ  ಅತ್ಯುತ್ತಮ  ಇತಿಹಾಸಕಾರರೆಂದೇ ಗುರುತಿಸಲ್ಪಟ್ಟಿರುವ  ಜಾರ್ಜ್ ಆರ್ವೆಲ್, ಸಾಹಿತ್ಯಕ ವಿಮರ್ಶೆ, ಕವನಗಳು, ಕಥೆಗಳು, ಕಾದಂಬರಿಗಳು ಹಾಗೂ ಚರ್ಚಾಸ್ಪದ ಪತ್ರಿಕೋದ್ಯಮ ಬರಹಗಳ ಮೂಲಕ ವಿಶೇಷವಾಗಿ ಗುರುತಿಸಲ್ಪಡುತ್ತಾರೆ.)

ತುಂಬಾ ಚಿಕ್ಕ ವಯಸ್ಸಿನಿಂದಲೇ, ಪ್ರಾಯಶಃ ಐದು ಅಥವಾ ಆರನೇ ವಯಸ್ಸಿನಲ್ಲಿರಬೇಕು, ಬೆಳೆದು ದೊಡ್ಡವನಾದ ಮೇಲೆ ನಾನೊಬ್ಬ ಬರಹಗಾರನಾಗಬೇಕು ಎಂಬುದು ನನಗೆ ಅರಿವಾಗಿತ್ತು. ಹದಿನೇಳರಿಂದ ಇಪ್ಪತ್ನಾಲ್ಕರ ವಯಸ್ಸಿನ ನಡುವೆ ಈ ವಿಚಾರವನ್ನು ಬಿಟ್ಟುಬಿಡಲು ನಾನು ಪ್ರಯತ್ನಿಸಿದೆ. ಎಷ್ಟು ಪ್ರಜ್ಞಾಪೂರ್ವಕವಾಗಿ ನಾನು ಅದನ್ನು ಮಾಡಿದ್ದೆನೆಂದರೆ, ಬಲು ಬೇಗನೆ ಬದುಕಿನಲ್ಲಿ ತಳವೂರುವ ಕುರಿತು ಮೊದಲು ಗಮನ ಹರಿಸಿ ನಂತರ ಪುಸ್ತಕಗಳನ್ನು ಬರೆಯುವದಾಗಿ ನನ್ನ ನೈಜ ಸ್ವಭಾವಕ್ಕೆ ತಡಯೊಡ್ಡುವಂತೆ ವಿಚಾರ ಮಾಡಿದ್ದೆ.

ನಮ್ಮ ತಂದೆ-ತಾಯಿಗಳ ಮೂವರು ಮಕ್ಕಳಲ್ಲಿ ನಾನು ನಡುವಿನವನು. ಆದರೆ ಅಲ್ಲಿ ಎರಡೂ ಕಡೆಯಿಂದಲೂ ಐದುವರ್ಷಗಳ ಅಂತರವಿತ್ತು. ಎಂಟು ವರ್ಷಗಳಾಗುವವರೆಗೂ ನಾನು ನನ್ನ ಅಪ್ಪನನ್ನು ಕಂಡಿದ್ದೇ ಬಲು ಅಪರೂಪಕ್ಕೊಮ್ಮೆ.  ಈ ಹಾಗೂ ಇನ್ನಿತರ ಕಾರಣಗಳಿಗಾಗಿ ನಾನು ಒಂಥರಾ ಒಂಟಿಯಾಗಿದ್ದೆ. ನನ್ನ ಶಾಲಾದಿನಗಳುದ್ದಕ್ಕೂ ನನ್ನನ್ನು ಕುಪ್ರಸಿದ್ಧನಾಗಿ ಗುರುತಿಸಲು ಕಾರಣವಾದ ಸರ್ವಸಮ್ಮತವಲ್ಲದ ನಡುವಳಿಕೆಗಳನ್ನು  ಬಲುಬೇಗನೇ ಬೆಳೆಸಿಕೊಂಡಿದ್ದೆ. ಸಾಮಾನ್ಯವಾಗಿ ಇತರ ಒಂಟಿ ಮಕ್ಕಳು ಮಾಡುವಂತೆ ನನ್ನಷ್ಟಕ್ಕೇ ಕತೆಗಳನ್ನು ಹೆಣೆಯುವ, ಕಾಲ್ಪನಿಕ ವ್ಯಕ್ತಿತ್ವಗಳೊಂದಿಗೆ ಸಂಭಾಷಣಾನಿರತನಾಗಿರುವ ಹವ್ಯಾಸವನ್ನು ಹೊಂದಿದ್ದೆ. ಪ್ರಾರಂಭದ ನನ್ನ ಸಾಹಿತ್ಯಕ ಮಹಾತ್ವಾಕಾಂಕ್ಷೆಗಳು ಒಂಟಿತನ ಹಾಗೂ ಕಡೆಗಣಿಸಲ್ಪಟ್ಟ ಭಾವನೆಗಳ ಸಮ್ಮಿಶ್ರಣವಾಗಿದ್ದವು. ಶಬ್ದಗಳ ಒಡನಾಟ ಹಾಗೂ ಅಪ್ರಿಯ ಸಂಗತಿಗಳನ್ನು ಎದುರಿಸುವ ಶಕ್ತಿ ನನ್ನಲ್ಲಿತ್ತು ಎಂಬುದು ನನಗೆ ತಿಳಿದಿತ್ತು. ಇದು ನನ್ನೊಳಗೆ ಒಂದು ರೀತಿಯ ಖಾಸಗೀ ಜಗತ್ತನ್ನು ನಿರ್ಮಾಣ ಮಾಡಿ, ನನ್ನ ದೈನಂದಿನ ಜೀವನದಲ್ಲಿನ ಸೋಲುಗಳಿಗೆ ನಾನೇ ಜವಾಬ್ದಾರನಾಗುವಂತೆ  ಮಾಡಿತ್ತು ಎಂದು ನನಗನಿಸಿತ್ತು. ಅದೇನೇ ಇರಲಿ, ನನ್ನ ಬಾಲ್ಯದಲ್ಲಿ ಹಾಗೂ ಹುಡುಗತನದಲ್ಲಿ ಬರೆದ ಗಂಭೀರವಾದ ಅಂದರೆ, ಗಂಭೀರವಾಗಿ ಬರೆಯಲು ಉದ್ದೇಶಿಸಿದ ಬರವಣಿಗೆ ಅರ್ಧ ಡಜನ್ನಿಗೂ ಮಿಕ್ಕಿಲ್ಲ. ನಾಲ್ಕು ಅಥವಾ ಐದನೆಯ ವಯಸ್ಸಿನಲ್ಲಿ ನಾನು ನನ್ನ ಮೊದಲ ಕವನವನ್ನು ಬರೆದೆ. ನನ್ನ ತಾಯಿ ಅದನ್ನು ನಾನು ಹೇಳಿದಂತೆ ಕಾಗದದಲ್ಲಿ ಬರೆದಿದ್ದಳು. ಅದು ಹುಲಿಯ ಕುರಿತಾಗಿತ್ತು ಹಾಗೂ ಹುಲಿ ಖುರ್ಚಿಯಂತಹ ಹಲ್ಲುಗಳನ್ನು ಹೊಂದಿತ್ತು- ಎನ್ನುವ ಒಳ್ಳೆಯ ಪದಗುಚ್ಛವನ್ನು ಹೊಂದಿತ್ತು, ಅದೂ ಕೂಡ ಬ್ಲೇಕ್‌ನ ಟೈಗರ್ ಟೈಗರ್ಪದ್ಯದ ಕೃತಿಚೌರ್ಯವಾಗಿತ್ತು ಎಂಬುದಷ್ಟೇ ನೆಪಿದೆಯೇ ವಿನಃ ಮತ್ತೇನೂ ಇಲ್ಲ. ಹನ್ನೊಂದನೇ ವಯಸ್ಸಿಗೆ, ೧೯೧೪-೧೮ರ ಯುದ್ಧವು ನಡೆಯುತ್ತಿದ್ದಾಗ, ನಾನೊಂದು ದೇಶಭಕ್ತಿ ಕವನವನ್ನು ಬರೆದೆ. ಅದು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಂತೆಯೇ ಇನ್ನೊಂದು ಕವನ, ಎರಡು ವರ್ಷಗಳ ನಂತರ, ಕಿಚ್ನರ್‌ನ ಸಾವನ್ನು ಕುರಿತು ಬರೆದದ್ದು. ಕಾಲಕಾಲಕ್ಕೆ, ನಾನು ಸ್ವಲ್ಪ ದೊಡ್ಡವನಾದ ಮೇಲೆ, ಕೆಟ್ಟದಾದ ಹಾಗೂ ಸಾಮಾನ್ಯವಾಗಿ ಕೊನೆಗೊಳ್ಳದ ನಿಸರ್ಗ ಕವನಗಳನ್ನು ಜಾರ್ಜಿಯನ್ ಶೈಲಿಯಲ್ಲಿ ಬರೆದೆ. ಹಾಗೆಯೇ ನಾನು, ಎರಡು ಸಾರೆ, ಕತೆಯನ್ನು ಬರೆಯಲೂ ಪ್ರಯತ್ನಿಸಿದೆ, ಆದರೆ ಇದು ಭಯಾನಕ ಸೋಲಾಗಿತ್ತು. ಈ ವರ್ಷಗಳಲ್ಲಿ ನಾನು ನಿಜವಾಗಿ ಕುಳಿತು ಕಾಗದದ ಮೇಲಿಳಿಸಿದ ಈ ಎಲ್ಲ, ಒಟ್ಟು ಸೇರಿ ಭಾವೀ-ಗಂಭೀರ ಲೇಖನಗಳಾಗಿದ್ದವು.

ಅದೇನೇ ಇರಲಿ, ಈ ಕಾಲದುದ್ದಕ್ಕೂ ನಾನು ಒಂದು ರೀತಿಯಲ್ಲಿ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೆ. ಪ್ರಾರಂಭದಲ್ಲಿ ನಾನು ಬಲು ಬೇಗನೇ, ಸುಲಭವಾಗಿ ಹಾಗೂ ನನ್ನೊಳಗೇ ಅಂತಹ ಸಂತೋಷನ್ನು ಉಂಟುಮಾಡದ ಬರೆಯಲೇಬೇಕೆಂದು ಹಟಹಿಡಿದು ಬರೆದ ಬರವಣಿಗೆಗಳನ್ನು ಮಾಡಿದೆ. ಶಾಲಾ ಕೆಲಸಗಳ ಹೊರತಾಗಿ, ಈಗ ತಿರುಗಿ ನೋಡಿದರೆ, ನನಗೇ ಆಶ್ಚರ್ಯವೆನಿಸುವ ವೇಗದಲ್ಲಿ ದ ಒಕೇಶನ್, ಎನ್ನುವ ಅರೆ-ಹಾಸ್ಯಭರಿತ ಪದ್ಯಗಳನ್ನು ಬರೆದೆ. ಹದಿನಾಲ್ಕನೇ ವಯಸ್ಸಿಗೆ ಒಂದೇ ವಾರದಲ್ಲಿ ಅರಿಸ್ಟೋಫನ್ ಶೈಲಿಯನ್ನನುಕರಿಸಿ ಒಂದಿಡೀ ಪ್ರಾಸ ನಾಟಕವನ್ನು ಬರೆದೆ. ಹಾಗೆಯೇ ಮುದ್ರಣವಾಗುತ್ತಿದ್ದ ಹಾಗೂ ಕೈಬರಹ ರೂಪದ ಎರಡೂ ರೀತಿಯ ಶಾಲಾ ಮ್ಯಾಗಜಿನ್‌ಗಳನ್ನು ಸಂಪಾದನೆ ಮಾಡುವಲ್ಲಿ ಸಹಾಯ ಮಾಡಿದೆ. ಈ ಮ್ಯಾಗಜಿನ್ನುಗಳು ನೀವು ಊಹಿಸಿಕೊಳ್ಳಬಲ್ಲ ಕಾರುಣ್ಯ ಪೂರಿತ ವಿಡಂಬನಾತ್ಮಕ ವಿಷಯಗಳನ್ನು ಒಳಗೊಂಡಿದ್ದವು. ನಾನು ಈಗಿನ ತೀರಾ ಲಘುವಾದ ಪತ್ರಿಕೋದ್ಯಮದಲ್ಲಿ ಮಾಡುತ್ತಿರುವುದಕ್ಕಿಂತಲೂ ತುಂಬ ಸುಲಭವಾಗಿ ಈ ಕೆಲಸವನ್ನು ನಿರ್ವಹಿಸಿದ್ದೆ. ಆದರೆ, ಈ ಎಲ್ಲವುಗಳೊಟ್ಟಿಗೇ, ಹದಿನೈದು ವರ್ಷಗಳಿಗೂ ಅಥವಾ ಅದಕ್ಕಿಂತಲೂ ಹೆಚ್ಚು ಕಾಲ, ನಾನು ಬೇರೆಯದೇ ರೀತಿಯ ಸಾಹಿತ್ಯಕ ಅಭ್ಯಾಸಕ್ರಮಗಳನ್ನು ಅಳವಡಿಸಿಕೊಂಡಿದ್ದೆ. ಇದು ನನ್ನನ್ನು ರೂಪಿಸಿಕೊಳ್ಳುವಲ್ಲಿ, ಒಂದು ರೀತಿಯ ಡೈರಿ ಸ್ವರೂಪದ, ಆದರೆ ಕೇವಲ ತಲೆಯಲ್ಲಿಯಷ್ಟೇ ಉಳಿದುಕೊಂಡ ನನ್ನ ಬಗ್ಗಿನ ನಿರಂತರವಾದ ಕತೆ. ಇದು ಮಕ್ಕಳು ಹಾಗೂ ಹದಿವಯಸ್ಸಿನವರಲ್ಲಿ ಸಾಮಾನ್ಯವಾಗಿರುವ ಹವ್ಯಾಸವೆಂದೇ ನಾನು ತಿಳಿಯುತ್ತೇನೆ. ಚಿಕ್ಕ ಮಗುವಾಗಿ ನನ್ನನ್ನು ನಾನು, ರೋಮಾಂಚಕ ಅನುಭವಗಳ ಹೀರೋ ಆದ ರಾಬಿನ್ ಹುಡ್ ಥರಾ ಎಂದು ಕಲ್ಪಿಸಿಕೊಳ್ಳುತ್ತಿದ್ದೆ. ಆದರೇ ಅಷ್ಟೇ ಬೇಗನೆ ನನ್ನ ಕತೆಯು ಹಸಿಹಸಿಯಾದ ಆತ್ಮರತಿಯಲ್ಲಿ ಕೊನೆಗೊಂಡು ನಾನು ಮಾಡುತ್ತಿರುವ ಹಾಗೂ ನೋಡುತ್ತಿರುವ ವಸ್ತು-ವಿಷಯಗಳ ಅತಿಯಾದ ವಿವರಣೆಯನ್ನು ಮಾತ್ರ ಒಳಗೊಂಡಿರುತ್ತಿತ್ತು. ನಿಮಿಷಗಳಕಾಲ ಈ ರೀತಿಯ ವಿಚಾರಗಳು ನನ್ನ ತಲೆಯಲ್ಲಿ ಸುತ್ತುತ್ತಿರುತ್ತಿದ್ದವು: ಅವನು ಬಾಗಿಲನ್ನು ದೂಡಿ ತೆರೆದನು ಹಾಗೂ ಕೋಣೆಯನ್ನು ಪ್ರವೇಶಿಸಿದನು. ಸೂರ್ಯನ ಹಳದಿ ಕಿರಣವು ಮಸ್ಲಿನ್‌ಬಟ್ಟೆಯ ಪರದೆಯನ್ನು ತೂರಿಕೊಂಡು, ಇಂಕ್ ಪಾಟಿನ ಬದಿಯಲ್ಲಿಟ್ಟ ಅರೆತೆರೆದ ಕಡ್ಡಿ ಪೆಟ್ಟಿಗೆ ಇಡಲಾದ ಟೇಬಲ್ಲಿನ ಮೇಲೆ ಬೀಳುತ್ತಿತ್ತು. ಬಲಗೈಯನ್ನು ಕಿಸೆಯಲ್ಲಿ ತೂರಿಕೊಂಡ ಅವನು ಕಿಟಕಿಯ ಕಡೆಗೆ ಚಲಿಸಿದನು. ಕೆಳಗೆ ಬೀದಿಯಲ್ಲಿ ಆಮೆಚಿಪ್ಪಿನ ಬೆಕ್ಕೊಂದು ಸತ್ತ ಎಲೆಯನ್ನು ಬೆನ್ನೆತ್ತಿತ್ತು,ಇತ್ಯಾದಿ.. ಇತ್ಯಾದಿ.. ನನಗೆ ಇಪ್ಪತ್ತೈದು ವರ್ಷಗಳಾಗುವವರೆಗೂ, ನನ್ನ ಅ-ಸಾಹಿತ್ಯಿಕ ವರ್ಷಗಳವರೆಗೂ ಇದು ಮುಂದುವರೆದಿತ್ತು. ಆದಾಗ್ಯೂ ನಾನು ಸರಿಯಾದ ಶಬ್ದಗಳಿಗಾಗಿ ಹುಡುಕಬೇಕಾಗುತ್ತಿತ್ತು, ಹುಡುಕಾಡುತ್ತಿದ್ದೆ ಕೂಡಾ. ನನ್ನ ಮನಸ್ಸಿಗೆ ಬಹುತೇಕ ವಿರುದ್ಧವಾಗಿ, ಹೊರಗಡೆಯ ಒಂದು ರೀತಿಯ ಒತ್ತಾಯಕ್ಕೆ ನಾನು ಈ ವಿವರಣಾತ್ಮಕ ಪ್ರಯತ್ನವನ್ನು ಮಾಡುತ್ತಿರುವಂತೆ ತೋರುತ್ತಿತ್ತು. ಕತೆ, ನನಗನಿಸುವಂತೆ ನಾನು ವಿವಿಧ ವಯಸ್ಸಿನಲ್ಲಿ  ಇಷ್ಟಪಟ್ಟ ಹಲವಾರು ಸಾಹಿತಿಗಳ ಶೈಲಿಯನ್ನು ಪ್ರತಿಬಿಂಬಿಸಿತ್ತು. ಆದರೆ, ನನಗೆ ನೆನಪಿರುವಂತೆ ಅದು ಯಾವಾಗಲೂ ಅದೇ ಅತಿಸೂಕ್ಷ್ಮದ ವಿವರಣಾತ್ಮಕ ಗುಣವನ್ನು ಹೊಂದಿತ್ತು.

ಸುಮಾರು ಹದಿನಾರು ವರ್ಷದವನಿದ್ದಾಗ, ಹಠಾತ್ತಾಗಿ ಕೇವಲ ಶಬ್ದಗಳಲ್ಲಿನ ಆನಂದವನ್ನು, ಅಂದರೆ ಧ್ವನಿ ಹಾಗೂ ಶಬ್ದಗಳ ಸಹಯೋಗವನ್ನು ನಾನು ಕಂಡುಕೊಂಡೆ. ಪ್ಯಾರಾಡೈಸ್ ಲೊಸ್ಟ್ ಪದ್ಯದ ಸಾಲುಗಳು

So hee with difficulty and labour hard
Moved on: with difficulty and labour hee,

ಈಗ ಅಷ್ಟೇನೂ ಆಶ್ಚರ್ಯವಾಗಿ ಕಾಣಲಾರದ್ದು ಆಗ ತುಂಬ ಆಕರ್ಷಣೀಯವಾಗಿತ್ತು, ನನ್ನ ಬೆನ್ನುಹುರಿಯಲ್ಲಿ ಚುಳುಕನ್ನು ಮೂಡಿಸಿತ್ತು, ಅದರಲ್ಲಿಯೂ ಹಿ ಶಬ್ದಕ್ಕೆ ಬದಲಾಗಿ ಹೀ ಯನ್ನು ಉಪಯೋಗಿಸಿದ್ದು ಆನಂದಕ್ಕೆ ಇನ್ನಷ್ಟು ಪುಳಕವನ್ನು ನೀಡಿತ್ತು. ವಿಷಯಗಳನ್ನು ವಿವರಿಸಬೇಕಾದ ಅವಶ್ಯಕತೆಯಿದ್ದಾಗ, ಅದರ ಬಗ್ಗೆ ನನಗಾಗಲೇ ಸಂಪೂರ್ಣ ತಿಳಿವಳಿಕೆ ಇತ್ತು. ಆಕಾಲದಲ್ಲಿ ನಾನು ಬರೆಯಲು ಇಚ್ಛಿಸಿದ ಪುಸ್ತಕಗಳ ಕುರಿತು ಈವರೆಗೂ ಹೇಳಿದುದರಲ್ಲಿ ಅದು ನಿಚ್ಚಳವಾಗಿದೆ. ನಾನು ಅಸಮಾಧಾನದಿಂದ ಕೊನೆಗೊಳ್ಳುವ, ಪೂರ್ಣ ವಿವರಣೆಗಳಿಂದ ಹಾಗೂ ಉಪಮೆಗಳಿಂದ ಭರಿತವಾದ, ಶಬ್ದಗಳನ್ನು ಆಂಶಿಕವಾಗಿ ಅವುಗಳ ಧ್ವನಿಗಳಿಗಾಗಿ ಉಪಯೋಗಿಸುವ ಪರ್ಪಲ್ ಪ್ಯಾಸೇಜುಗಳಿಂದ ಕೂಡಿದ  ಬ್ರಹತ್ತಾದ ನಿಸರ್ಗವಾದಿ ಕಾದಂಬರಿಗಳನ್ನು ಬರೆಯಲು ಇಚ್ಛಿಸಿದ್ದೆ. ವಾಸ್ತವಿಕವಾಗಿ, ನನ್ನ ಮೂವತ್ತನೆಯ ವಯಸ್ಸಿನಲ್ಲಿ ಬರೆದ, ಆದರೆ ಅದಕ್ಕಿಂತಲೂ ಹಿಂದೆಯೇ ಬರೆದದ್ದೆಂದು ಹೇಳಲಾದ ನನ್ನ ಮೊದಲ ಪೂರ್ಣಪ್ರಮಾಣದ ಕಾದಂಬರಿ, ಬರ್ಮಿಸ್ ಡೇಸ್, ಅದಕ್ಕಿಂತ ಹೆಚ್ಚಾಗಿ ಆ ರೀತಿಯ ಪುಸ್ತಕ.

ಈ ಎಲ್ಲ ಪೂರ್ವ ಪೀಠಿಕಾ ಮಾಹಿತಿಗಳನ್ನು ನಾನು ನೀಡುತ್ತಿರುವುದು ಯಾಕೆಂದರೆ, ಸಾಹಿತಿಯೊಬ್ಬನ ಎಳವೆಯ ಪ್ರಗತಿಯನ್ನು ಅರಿಯದೇ ಅವನ ಪ್ರೇರಣೆಗಳನ್ನು ಗುರುತಿಸುವುದು ಸಾಧ್ಯವಿಲ್ಲ ಎಂದು ನಾನು ಭಾವಿಸಿರುವುದರಿಂದ. ಅವನ ವಸ್ತು-ವಿಷಯಗಳು-ಸಾಧಾರಣವಾಗಿ, ನಮ್ಮದೇ ಆದ ಪ್ರಕ್ಷುಬ್ದ, ಕ್ರಾಂತಿಕಾರಕ ಯುಗದಂತೆ, ಅವನು ವಾಸಿಸುವ ಕಾಲಮಾನದ ಆಧಾರದಮೇಲೆ ನಿರ್ಧಾರಿತವಾಗಬಹುದು. ಆದರೆ, ಬರೆಯಲಾರಂಭಿಸುವುದಕ್ಕೂ ಮೊದಲು, ಅವನು ಎಂದೂ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲಾಗದ ಭಾವನಾತ್ಮಕ ನಡೆನುಡಿಯನ್ನು ಸಾಧಿಸಿಕೊಂಡಿರುತ್ತಾನೆ. ತನ್ನ ಮನೋಧರ್ಮಗಳನ್ನು ಶಿಸ್ತಿಗೊಳಪಡಿಸಿಕೊಳ್ಳುವುದು ಹಾಗೂ ಅಪಕ್ವವಾದ ಹಂತದಲ್ಲಿ ಸಿಲುಕಿಕೊಳ್ಳುವುದನ್ನು ಅಥವಾ ಕೆಲವು ಹಠಮಾರಿ ಸ್ಥಿತಿಗಳನ್ನು ತಪ್ಪಿಸುವುದು ಅವನ ಕೆಲಸ, ಅದರಲ್ಲಿ ಸಂಶಯವೇ ಇಲ್ಲ: ಆದರೆ, ತನ್ನ ಆದಿ ಪ್ರಭಾವಗಳಿಂದ ಅವನು ತಪ್ಪಿಸಿಕೊಂಡರೆ, ಅವನು ಬರವಣಿಗೆಗೆ ಬೇಕಾದ ತನ್ನ ಅಂತಃಪ್ರೇರಣೆಯನ್ನು ಕೊಂದುಕೊಳ್ಳುತ್ತಾನೆ. ಜೀವನ ನಿರ್ವಹಣೆಗೆ ಬೇಕಾದ ಆದಾಯಗಳಿಸುವ ಅವಶ್ಯಕತೆಯ ಹೊರತಾಗಿ, ಯಾವುದೇ ರೀತಿಯ ಗದ್ಯವನ್ನು ಬರೆಯಲು ನಾಲ್ಕು ಉನ್ನತ ಪ್ರಚೋದನೆಗಳು ಇರುತ್ತವೆ ಎಂದು ನಾನಂದುಕೊಂಡಿದ್ದೇನೆ. ಪ್ರತಿಯೊಬ್ಬ ಬರಹಗಾರನಲ್ಲಿಯೂ ಅವು ವಿವಿಧ ಪ್ರಮಾಣದಲ್ಲಿರುತ್ತವೆ ಹಾಗೂ ಯಾವುದೋ ಒಬ್ಬ ಬರಹಗಾರನಲ್ಲಿ ಪ್ರಮಾಣಗಳು ಅವನು ವಾಸಿಸುವ ಪರಿಸರಕ್ಕನುಗುಣವಾಗಿ ಕಾಲಕಾಲಕ್ಕೆ ವ್ಯತ್ಯಾಸ ಕಾಣುತ್ತಿರುತ್ತವೆ.  ಅವುಗಳೆಂದರೆ:
೧.      ಶುದ್ಧಾಂಗವಾದ ಅಹಂಭಾವ. ಬುದ್ಧಿವಂತನಂತೆ ತೋರಗೊಡುವ, ನಾಲ್ಕು ಜನ ತನ್ನನ್ನು ಕುರಿತು ಮಾತನಾಡಬೇಕು ಎನ್ನುವ, ಸಾವಿನ ನಂತರವೂ ಜನ ತನ್ನನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂಬ, ಬಾಲ್ಯದಲ್ಲಿ ತನ್ನನ್ನು ಅಸಡ್ಡೆ ಮಾಡಿದ ಹಿರಿಯರ ಮೇಲೆ ಮುಯ್ಯಿ ತೀರಿಸಿಕೊಳ್ಳುವ ಅಭಿಲಾಷೆ ಇತ್ಯಾದಿ.. ಇತ್ಯಾದಿ.. ಇದು ಪ್ರೇರಣೆ ಹಾಗೂ ಬಲವಾದ ಪ್ರೇರಣೆ ಅಲ್ಲ ಎಂದು ಸೋಗು ಹಾಕುವುದು ಕಪಟತನ. ಬರಹಗಾರರು  ಈ ಗುಣಲಕ್ಷಣವನ್ನು ವಿಜ್ಞಾನಿಗಳು, ಕಲಾವಿದರು, ರಾಜಕಾರಣಿಗಳು, ವಕೀಲರು, ಸೈನಿಕರು, ಯಶಸ್ವೀ ಉದ್ದಿಮೆದಾರರು- ಚಿಕ್ಕದಾಗಿ ಹೇಳಬೇಕೆಂದರೆ, ಉತ್ತುಂಗದಲ್ಲಿರುವ ಇಡೀ ಮನುಕುಲದ ಕೆನೆಪದರದೊಂದಿಗೆ ಹಂಚಿಕೊಂಡಿರುತ್ತಾರೆ. ಇಡಿಯಾದ ಮನುಷ್ಯ ಸಮೂಹ ಯಾವಾಗಲೂ ನಿಜವಾದ ಸ್ವಾರ್ಥಿಯಾಗಿರುವುದಿಲ್ಲ. ಮೂವತ್ತರ ವಯಸ್ಸಿನ ನಂತರ ಅವರು ವೈಯಕ್ತಿಕ ಮಹಾತ್ವಾಕಾಂಕ್ಷೆಯನ್ನು ಬಿಟ್ಟುಬಿಡುತ್ತಾರೆ- ಅನೇಕ ಸಂಗತಿಗಳಲ್ಲಿ, ವಾಸ್ತವವಾಗಿಯೂ, ಅವರು ಬಹುತೇಕವಾಗಿ ತಾವೊಬ್ಬ ವ್ಯಕ್ತಿಯೆಂಬ ಸಂಗತಿಯನ್ನೇ ಮರೆತು ಬಿಟ್ಟಿರುತ್ತಾರೆ- ಹಾಗೂ ಮುಖ್ಯವಾಗಿ ಇತರರಿಗೋಸ್ಕರ ಬದುಕುತ್ತಾರೆ ಅಥವಾ ಕತ್ತೆಚಾಕರಿ ಮಾಡುತ್ತ ಹಾಯಾಗಿರುತ್ತಾರೆ. ಆದರೆ ಅಲ್ಲಿಯೂ ಪಡೆದುಕೊಂಡು ಬಂದಿರುವ, ಕೊನೆಯವರೆಗೂ ತಮಗೆ ಬೇಕಾದಂತೆ ತಮ್ಮ ಬದುಕನ್ನು ಬದುಕುವ ಚಿಕ್ಕದೊಂದು ಅಲ್ಪಸಂಖ್ಯಾತರ ಗುಂಪಿರುತ್ತದೆ. ಬರಹಗಾರರು ಈ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಗಂಭೀರವಾದ ಬರಹಗಾರರು, ನಾನು ಹೇಳಲೇ ಬೇಕು, ಹಣದ ವಿಷಯದಲ್ಲಿ ಕಡಿಮೆ ಆಸಕ್ತಿಯನ್ನು ಹೊಂದಿದವರಾಗಿದ್ದರೂ ಇಡಿಯಾಗಿ ಸ್ವಭಾವದಲ್ಲಿ ಪತ್ರಕರ್ತರಿಗಿಂತಲೂ ಸ್ವಾರ್ಥಿಗಳಾಗಿರುತ್ತಾರೆ.
೨.      ಕಲಾತ್ಮಕತೆಯ ಕುತೂಹಲ. ಹೊರಜಗತ್ತಿನ ಸೌಂದರ್ಯದ ಕಲ್ಪನೆ ಅಥವಾ ಇನ್ನೊಂದು ದೃಷ್ಟಿಯಲ್ಲಿ, ಶಬ್ದಗಳು ಮತ್ತು ಅವುಗಳ ಸರಿಯಾದ ಜೋಡಣೆಯಲ್ಲಿ. ಒಂದು ಉತ್ತಮ ಗದ್ಯದ ನಿರ್ವಿಕಾರತ್ವದಲ್ಲಿ ಅಥವಾ ಒಂದು ಒಳ್ಳೆಯ ಕತೆಯ ಲಯದಲ್ಲಿ ಮತ್ತೊಂದರ ಮೇಲೆ ಒಂದು ಧ್ವನಿಯ ಪರಿಣಾಮದಿಂದುಂಟಾಗುವ ಆನಂದ. ಓರ್ವನು ಮೌಲ್ಯಯುತವಾದದ್ದೆಂದು ಭಾವಿಸುವ ಹಾಗೂ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲವೆಂದೆನಿಸುವ ಅನುಭವವನ್ನು ಹಂಚಿಕೊಳ್ಳುವ ಅಭಿಲಾಷೆ. ಹಲವಾರು ಬರಹಗಾರರಲ್ಲಿ ಕಲಾತ್ಮಕತೆಯ ಪ್ರೇರಣೆಯು ತುಂಬ ನಿತ್ರಾಣವಾಗಿರುತ್ತದೆ, ಆದರೆ ಒಬ್ಬ ಚಿಕ್ಕ ಬರಹಗಾರ ಅಥವಾ ಪಠ್ಯಪುಸ್ತಕಗಳನ್ನು ಬರೆಯುವವ ಕೂಡ ಅವಕಾಶವಾದಿಯಲ್ಲದ ಕಾರಣಗಳಿಗಾಗಿ ತನಗೆ ಪ್ರಿಯವಾದ ಶಬ್ದಗಳನ್ನು ಹಾಗೂ ನುಡಿಗಟ್ಟುಗಳನ್ನು ಹೊಂದಿರುತ್ತಾನೆ; ಅಥವಾ ಮುದ್ರಣ ಶೈಲಿ, ಮಾರ್ಜಿನ್ನುಗಳ ಅಗಲ ಇತ್ಯಾದಿಗಳ ಕುರಿತು ನಿಖರವಾದ ಭಾವನೆಗಳನ್ನು ಹೊಂದಿರಬಹುದು. ರೇಲ್ವೆ ಗೈಡಿನ ಮಟ್ಟಕ್ಕಿಂತಲೂ ಹೆಚ್ಚಿನದಾಗಿ, ಯಾವ ಪುಸ್ತಕವೂ ಕೂಡ ಕಲಾತ್ಮಕ ಪರಿಗಣನೆಗಳಿಂದ ತೀರ ಹೊರತಾಗಿಲ್ಲ.
೩.      ಐತಿಹಾಸಿಕ ಅಂತಃಪ್ರೇರಣೆ. ವಸ್ತುಗಳನ್ನು ಅವು ಇದ್ದಂತೆಯೇ ಕಾಣುವ, ನಿಜದ ಅಂಶಗಳನ್ನು ಕಂಡುಕೊಳ್ಳುವ ಹಾಗೂ ಅವುಗಳನ್ನು ಪ್ರಗತಿಯ ಉಪಯೋಗಕ್ಕಾಗಿ ಶೇಖರಿಸಿಡುವ ಅಭಿಲಾಷೆ.
೪.      ರಾಜಕೀಯ ಉದ್ದೇಶಗಳು- ರಾಜಕೀಯಈ ಶಬ್ದವನ್ನು ಅತ್ಯಂತ ವಿಶಾಲ ಕ್ಯಾನ್ವಾಸಿನ ಹಿನ್ನೆಲೆಯಲ್ಲಿ ಉಪಯೋಗಿಸುವ ದೃಷ್ಟಿಯಿಂದ. ಜಗತ್ತನ್ನು ಕೆಲ ನಿರ್ದಿಷ್ಟ ದಿಕ್ಕಿನಲ್ಲಿ ದೂಡುವ, ಜನ ಹಾತೊರೆಯುವ ಸಮಾಜದ ರೀತಿಯ ಕುರಿತು ಅವರ ವಿಚಾರಗಳನ್ನು ಬದಲುಮಾಡುವ ಅಭಿಲಾಷೆ. ಮತ್ತೊಮ್ಮೆ ಪುನರುಚ್ಚರಿಸಬೇಕೆಂದರೆ, ಯಾವ ಗ್ರಂಥವೂ ಕೂಡ ನೈಜವಾದ ರಾಜಕೀಯ ಪೂರ್ವಾಗ್ರಹಗಳಿಂದ ಹೊರತಾಗಿಲ್ಲ. ಕಲೆಯು ರಾಜಕೀಯದೊಂದಿಗೆ ಮಾಡುವಂಥಾದ್ದು ಏನೂ ಇಲ್ಲ ಎಂಬ ಅಭಿಪ್ರಾಯವೇ ಒಂದು ರಾಜಕೀಯ ಮನೋಭಾವ.

ಹೇಗೆ ವಿವಿಧ ರೀತಿಯ ಅಂತಃಪ್ರೇರಣೆಗಳು ಒಂದರೊಟ್ಟಿಗೊಂದು ಯುದ್ಧಕ್ಕಿಳಿಯಬೇಕು ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಕಾಲದಿಂದ ಕಾಲಕ್ಕೆ ಅವು ಹೇಗೆ ಬದಲಾವಣೆ ಹೊಂದಬೇಕು ಎಂಬುದನ್ನು ನಿಚ್ಚಳವಾಗಿ ಕಾಣಬಹುದಾಗಿದೆ. ನೀವು ಮೊದಲು ದೊಡ್ಡವರಾಗಿ ಬೆಳೆಯುತ್ತಿದ್ದಂತೆಯೇ ನಿಮ್ಮದೇ ಸ್ವಭಾವದ ಬಗ್ಗೆ ಮಾತನಾಡತೊಡಗುವುದು ಸ್ವಾಭಾವಿಕ. ನನ್ನ ವ್ಯಕ್ತಿತ್ವದಲ್ಲಿ, ಬರಹದ ಕುರಿತಾದ ಈ ಮೇಲೆ ಹೇಳಿದ ಮೊದಲ ಮೂರೂ ಪ್ರೇರಣೆಗಳು ನಾಲ್ಕನೆಯದನ್ನು ಮೀರಿಸುತ್ತವೆ. ಶಾಂತವಾದ ವಯಸ್ಸಿನಲ್ಲಿ ನಾನು ಅಲಂಕಾರಮಯ ಅಥವಾ ಕೇವಲ ವಿವರಣಾತ್ಮಕತೆಯಿಂದ ಕೂಡುದ ಪುಸ್ತಕಗಳನ್ನು ಬರೆದಿರಬಹುದು. ರಾಜಕೀಯದ ಕುರಿತಾದ ನನ್ನ ಒಲವಿನಿಂದಾಗಿ ಬಹುತೇಕವಾಗಿ ಅವು ಬಹಳಷ್ಟು ಜನರಿಗೆ ಗೊತ್ತಾಗದೇ ಹೋಗಿರಬಹುದು. ಈಗಿದ್ದಂತೆಯೇ, ಓಮದು ರೀತಿಯ ಒತ್ತಾಯದ ಕಾರಣಕ್ಕಾಗಿ ನಾನು ಒಬ್ಬ ರಾಜಕೀಯ ಗ್ರಂಥಕಾರನಾಗಿ ಬೆಳಕಿಗೆ ಬರಬೇಕಾಯಿತು. ಮೊದಲು, ನಾನು ಐದು ವರ್ಷಗಳ ಕಾಲವನ್ನು ನನಗೆ ಒಗ್ಗದ ವೃತ್ತಿಯಲ್ಲಿ ದುಡಿಯಬೇಕಾಯಿತು. ( ಬರ್ಮಾದಲ್ಲಿದ್ದ ಇಂಡಿಯನ್ ಇಂಪೀರಿಯಲ್ ಪೋಲಿಸ್ ಇಲಾಖೆಯಲ್ಲಿ). ಆ ಮೇಲೆ ನಾನು ಬಡತನವನ್ನು, ಸೋಲಿನ ರುಚಿಯನ್ನು ಅನುಭವಿಸಬೇಕಾಯಿತು. ಇದು ಅಧಿಕಾರದ ಬಗೆಗಿನ ನನ್ನ ಆಕ್ರೋಶವನ್ನು ಹೆಚ್ಚಿಸಿತು. ಅಲ್ಲದೇ, ಕೆಲಸಗಾರ ವರ್ಗವೊಂದರ ಇರುವಿಕೆಯ ಕುರಿತಾಗಿ ಮೊತ್ತಮೊದಲಬಾರಿಗೆ ನನ್ನಲ್ಲಿ ಅರಿವನ್ನು ಉಂಟುಮಾಡಿತು. ಹಾಗೆಯೇ, ಬರ್ಮಾದಲ್ಲಿ ನಾನು ಮಾಡಿದ ಕೆಲಸದ ಅನುಭವವು ಸಾಮ್ರಾಜ್ಯಶಾಹಿಯ ಕುರಿತು ನನಗೆ ಕೆಲಮಟ್ಟಿನ ತಿಳುವಳಿಕೆಯನ್ನು ನೀಡಿತ್ತು. ಅದರೆ ಈ ಅನುಭವಗಳು ನನಗೆ ಒಂದು ಕರಾರುವಾಕ್ಕಾದ ರಾಜಕೀಯ ದೃಷ್ಟಿಕೋನವನ್ನು ನೀಡಲು ಸಾಕಾಗುವಷ್ಟಿರಲಿಲ್ಲ. ಆನಂತರ ಬಂದದ್ದೆಂದರೆ ಹಿಟ್ಲರ್, ಸ್ಪ್ಯಾನಿಶ್ ಸಿವಿಲ್ ವಾರ್, ಇತ್ಯಾದಿ. ೧೯೩೫ರ ಕೊನೆಯ ಹೊತ್ತಿಗೆ ನಾನು ದೃಢವಾದ ನಿರ್ಧಾರವನ್ನು ಕೈಗೊಳ್ಳುವಲ್ಲಿ ಇನ್ನೂ ಸಫಲನಾಗಿರಲಿಲ್ಲ.

೧೯೩೬-೩೭ರಲ್ಲಿ ನಡೆದ  ಸ್ಪ್ಯಾನಿಶ್ ಸಿವಿಲ್ ವಾರ್ ಮತ್ತಿತರ ಘಟನೆಗಳು ನನ್ನ ದಿಕ್ಕನ್ನು ಬದಲಾಯಿಸಿದವು. ತದನಂತರ ನಾನೆಲ್ಲಿ ನಿಂತಿದ್ದೇನೆಂಬುದರ ಅರಿವು ನನಗಾಯಿತು. ೧೯೩೬ ರಿಂದ ನಾನು ಬರೆದ ಗಂಭೀರ ಬರಹಗಳ ಪ್ರತಿಯೊಂದೂ ಸಾಲೂ, ನಾನು ತಿಳಿದುಕೊಂಡಂತೆ, ನೇರವಾಗಿ ಅಥವಾ ಪರೋಕ್ಷವಾಗಿ ಸರ್ವಾಧಿಕಾರಿ ಪ್ರಭುತ್ವದ ವಿರುದ್ಧ ಅಥವಾ ಪ್ರಜಾಪ್ರಭುತ್ವ ಮಾದರಿಯ ಸಮಾಜವಾದದ ಪರವಾಗಿ ಬರೆದವಾಗಿದ್ದವು.  ನಮ್ಮದೇ ಆದ ಕಾಲಘಟ್ಟದ ಸಂದರ್ಭದಲ್ಲಿ ಈ ರೀತಿಯ ವಸ್ತು-ವಿಷಯಗಳನ್ನು ಬರೆಯಲು ತಪ್ಪಿಸಿಕೊಳ್ಳುವುದು ಶುದ್ಧ ಮತಿಹೀನ ಕೆಲಸವೆಂದೇ ನನಗನ್ನಿಸುತ್ತದೆ. ಪ್ರತಿಯೊಬ್ಬರೂ ಗುರುತು ಮರೆಸಿ ಅಥವಾ ತಲೆತಪ್ಪಿಸಿಕೊಂಡು ಇವುಗಳ ಬಗ್ಗೆ ಬರೆಯುತ್ತಾರೆ. ಯಾವ ಪಕ್ಷವನ್ನು ಓರ್ವನು ವಹಿಸುತ್ತಾನೆ ಹಾಗೂ ಯಾವರೀತಿಯ ಕ್ರಮವನ್ನು ಪಾಲಿಸುತ್ತಾನೆ ಎಂಬುದೇ ಇಲ್ಲಿರುವ ಸರಳ ಪ್ರಶ್ನೆ. ಇದೆಲ್ಲದಕ್ಕಿಂತ ಹೆಚ್ಚಿನದಾಗಿ ಓರ್ವನ ರಾಜಕೀಯ ಪೂರ್ವಾಗ್ರಹವೂ ಇಲ್ಲಿ ಪ್ರಸ್ತುತವಾಗುತ್ತದೆ. ಸೌಂದರ್ಯಾನುಭೂತಿಯನ್ನು ಹಾಗೂ ಬೌದ್ಧಿಕ ಐಕ್ಯತೆಯನ್ನು ತ್ಯಾಗ ಮಾಡದೇ ರಾಜಕೀಯವಾಗಿ ನಾಟಕವಾಡುವ ಸಂಭವವೇ ಇಲ್ಲಿ ಹೆಚ್ಚಾಗಿ ಕಾಣಬರುತ್ತದೆ.

ಕಳೆದ ಹತ್ತುವರ್ಷಗಳ ಉದ್ದಕ್ಕೂ ನಾನು ಹೆಚ್ಚಾಗಿ ಮಾಡಬಯಸಿದ್ದೇನೆಂದರೆ ರಾಜಕೀಯ ಬರವಣಿಗೆಯನ್ನು ಒಂದು ಕಲೆಯನ್ನಾಗಿಸಲು ಪ್ರಯತ್ನಿಸಿದ್ದು. ನನ್ನ ಬರವಣಿಗೆಯ ಪ್ರಾರಂಭದ ಭಾಗವು ಯಾವಾಗಲೂ ಒಂದು ರೀತಿಯ ಸಹಭಾಗಿತ್ವದ ಭಾವನೆಯನ್ನು, ನ್ಯಾಯದ ಪರಿಕಲ್ಪನೆಯನ್ನು ನೀಡುತ್ತದೆ. ನಾನೊಂದು ಪುಸ್ತಕವನ್ನು ಬರೆಯಲು ಕುಳಿತಾಗಲೆಲ್ಲ, ನನಗೆ ನಾನು ಹೇಳಿಕೊಳ್ಳದೇ ಇರುವುದೇನೆಂದರೆ, ನಾನು ಒಂದು ಕಲಾತ್ಮಕವಾದ ಬರವಣಿಗೆಯನ್ನು ಮಾಡುತ್ತಿದ್ದೇನೆ, ಎನ್ನುವುದು. ನಾನೇಕೆ ಅದನ್ನು ಬರೆಯುತ್ತಿದ್ದೇನೆಂದರೆ, ಅಲ್ಲಿ ನಾನು ತೆರೆದು ತೋರಿಸಲಿಚ್ಛಿಸುವ ಶುದ್ಧ ಸುಳ್ಳೊಂದಿದೆ. ಆ ಕೆಲ ಅಂಶಗಳ ಮೇಲೆ ನಾನು ಗಮನವನ್ನು ಸೆಳೆಯಲು ಇಚ್ಛಿಸುತ್ತೇನೆ. ನನ್ನ ಪ್ರಾರಂಭದ ಗಮನವೆಲ್ಲ ಇರುವುದು ಅದನ್ನು ಕೇಳುವ ಕಿವಿಯನ್ನು ಪಡೆದುಕೊಳ್ಳುವುದರಲ್ಲಿ. ಒಂದುವೇಳೆ ಅದು ಸೌಂದರ್ಯಾನುಭೂತಿಯ ಅನುಭವವನ್ನು ನೀಡದೇ ಹೋದರೆ, ಒಂದು ಪುಸ್ತಕವನ್ನು ಬರೆಯುವ ಅಥವಾ ನಿಯತಕಾಲಿಕಕ್ಕೆ ಉದ್ದವಾದ ಒಂದು ಲೇಖನವನ್ನು ಬರೆಯುವ ಬರವಣಿಗೆಯನ್ನು ಮಾಡುವುದು ನನಗೆ ಶಕ್ಯವಿಲ್ಲ. ನನ್ನ ಕೆಲಸವನ್ನು ಪರೀಕ್ಷೆ ಮಾಡಬಯಸುವ ಯಾರೇ ಇರಲಿ, ಪೂರ್ಣಪ್ರಮಾಣದ ರಾಜಕಾರಣಿಯು ಅಪ್ರಸ್ತುತವೆಂದು ಕಡೆಗಣಿಸಬಹುದಾದ ಒಂದು ನಿರ್ಭಿಡೆಯ ತಾತ್ವಿಕ ಪ್ರತಿಪಾದನೆ ಅಲ್ಲಿರುವುದನ್ನು ಕಾಣಬಹುದು. ನಾನು ಬಾಲ್ಯದಲ್ಲಿ ಪಡೆದುಕೊಂಡ ಜಗತ್ತಿನ ಕುರಿತಾದ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬಿಟ್ಟುಬಿಡಲು ಇಚ್ಛಿಸುವುದಿಲ್ಲ ಅಥವಾ ಹಾಗೆ ಮಾಡಲು ನನಗೆ ಸಾಧ್ಯವಾಗುವುದಿಲ್ಲ. ಎಲ್ಲಿಯವರೆಗೆ ನಾನು ಜೀವಂತವಾಗಿರುತ್ತೇನೆಯೋ, ಅಲ್ಲಿಯವರೆಗೂ ಈ ಭೂಮಿಯನ್ನು ಪ್ರೀತಿಸುವ ಹಾಗೂ ಇಲ್ಲಿರುವ ಘನ ವಿಷಯಗಳನ್ನು ಆಸ್ವಾದಿಸುವ ಹಾಗೂ ಉಪಯುಕ್ತವಲ್ಲದ ಮಾಹಿತಿಗಳನ್ನು ತಿರಸ್ಕರಿಸುವ ಗದ್ಯದ ಶೈಲಿಯನ್ನು ನಾನು ಬಲವಾಗಿ ಅನುಭವಿಸುತ್ತೇನೆ.ನನ್ನೊಳಗಿನ ಆ ಭಾಗವನ್ನು ಅದುಮಿಕೊಳ್ಳುವುದರಲ್ಲಿ ಪ್ರಯತ್ನ ಮಾಡುವುದು ಏನನ್ನೂ ಸಾಧಿಸಗೊಡುವುದಿಲ್ಲ. ಪ್ರಾಥಮಿಕವಾಗಿ ಸಾರ್ವಜನಿಕವಾಗಿರುವ, ಈ ಕಾಲಘಟ್ಟವು ನಮ್ಮೆಲ್ಲರ ಮೇಲೆ ಹೇರುವ ಒತ್ತಡವಾದ, ವೈಯಕ್ತಿಕವಲ್ಲದ ಚಟುವಟಿಕೆಗಳ ಮದ್ಯೆ ನನ್ನ ಸ್ವಭಾವರೂಢವಾದ ನನಗೆ ಮೆಚ್ಚುಗೆಯಾಗುವ ಹಾಗೂ ಹಿಡಿಸಲಾರದ ಸಂಗತಿಗಳ ಸಮನ್ವಯಗೊಳಿಸುವ ಕೆಲಸವಾಗಬೇಕಿದೆ.

ಅದಷ್ಟು ಸುಲಭದ ಮಾತಲ್ಲ. ಅದು ನಿರ್ಮಿತಿಯ ಹಾಗೂ ಭಾಷೆಯ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಸತ್ಯದ ಕುರಿತಾದ ಸಮಸ್ಯೆಗಳನ್ನು ಹೊಸದಾದ ದಾರಿಯಲ್ಲಿ ಅದು ತೆರೆದಿಡುತ್ತದೆ. ಅದು ಹುಟ್ಟುಹಾಕುವ ಅಹಿತಕರ ಸಂಕಷ್ಟವನ್ನು ವಿವರಿಸಲು ನಾನಿಲ್ಲೊಂದು ಉದಾಹರಣೆಯನ್ನು ನೀಡುತ್ತೇನೆ. ಸ್ಪ್ಯಾನಿಷ್ ಸಿವಿಲ್ ವಾರಿನ ಕುರಿತಾದ ನನ್ನ ಪುಸ್ತಕ, ಹೋಮೇಜ್ ಟೊ ಕೆಟಲೋನಿಯಾ, ಒಂದು ಶುದ್ಧಾಂಗವಾದ ರಾಜಕೀಯ ಗ್ರಂಥ. ಆದರೆ ಬಹುಮುಖ್ಯವಾಗಿ ಒಂದು ರೀತಿಯ ನಿರ್ಲಿಪ್ತತೆಯಿಂದ ಹಾಗೂ ಆ ರೂಪದ ಬರಹದ ಮೇಲಣ ಗೌರವದಿಂದ ಅದು ಬರೆಯಿಸಿಕೊಂಡಿದೆ. ನನ್ನ ಸಾಹಿತ್ಯಿಕ ಸ್ಫುರಣೆಗಳನ್ನು ಮೀರದೇ ಅಥವಾ ಮುರಿಯದೇ, ಸಂಪೂರ್ಣ ಸತ್ಯವನ್ನು ಹೇಳಲು ಅಲ್ಲಿ ತುಂಬ ಕಷ್ಟಪಟ್ಟಿದ್ದೇನೆ. ಆದರೆ, ಇನ್ನಿತರ ವಿಷಯಗಳಲ್ಲಿ ಅದು ತುಂಬ ದೀರ್ಘವಾದ ಅಧ್ಯಾಯವನ್ನು, ವಿಪುಲವಾದ ಸುದ್ದಿಪತ್ರಿಕೆಗಳ ಹೇಳಿಕೆಗಳನ್ನು ಹಾಗೂ ಪ್ರಾಂಕೋನೊಂದಿಗೆ ಸಂಚುಗಾರಿಕೆಯಲ್ಲಿ ತೊಡಗಿದ್ದರೆಂಬ ಅಪವಾದವನ್ನು ಹೊಂದಿದ ಟ್ರೋಟ್ಸ್‌ಕಿಯಿಸ್ಟ್‌ರನ್ನು ಸಮರ್ಥಿಸಿ ಬರೆಯಲ್ಪಟ್ಟಿದೆ. ಒಂದೆರಡು ವರ್ಷಗಳ ನಂತರ ಸಾಮಾನ್ಯ ಓದುಗನ ಆಸಕ್ತಿಯನ್ನು ಕಳೆದುಕೊಳ್ಳುವ ಈ ರೀತಿಯ ಅಧ್ಯಾಯವು ಖಂಡಿತವಾಗಿಯೂ ಇಡೀ ಗ್ರಂಥವನ್ನು ಹಾಳುಮಾಡುತ್ತದೆ. ನಾನು ತುಂಬ ಗೌರವಿಸುವ ಓರ್ವ ವಿಮರ್ಶಕರೊಬ್ಬರು ಒಂದು ಭಾಷಣವನ್ನು ನನಗೆ ಓದಿಹೇಳಿದರು. ಎಲ್ಲ ವಿಷಯಗಳನ್ನೂ ನೀನಲ್ಲಿ ಏಕೆ ಇಟ್ಟಿರುವೆ?ಎಂದು ಕೇಳಿ ಹೇಳಿದ್ದರು, ಒಂದು ಉತ್ತಮ ಗ್ರಂಥವಾಗಬಹುದಾದ ಪುಸ್ತಕವನ್ನು ನೀನು ಪತ್ರಿಕೋದ್ಯಮದ ಬರವಣಿಗೆಯನ್ನಾಗಿ ಮಾಡಿದ್ದೀಯಾ, ಎಂದು. ಅವರು ಹೇಳಿದ್ದೂ ಕೂಡ ಸತ್ಯವಾಗಿತ್ತು. ಆದರೆ ಆರೀತಿ ಬರೆಯುವುದು ನನಗೆ ಸಾಧ್ಯವಾಗಿರಲಿಲ್ಲ. ಇಂಗ್ಲೆಂಡಿನಲ್ಲಿ ಕೆಲವೇ ಕೆಲವು ಜನರು ತಿಳಿದುಕೊಳ್ಳಲು ಅರ್ಹರಾಗಿದ್ದ, ಮುಗ್ಧ ಗಂಡಸರು ತಪ್ಪಾಗಿ ಅಪರಾಧಿಗಳೆಂದು ಬಿಂಬಿಸಲ್ಪಟ್ಟ ಒಂದು ಸಂಗತಿಯು ನನಗೆ ಹೇಗೋ ಗೊತ್ತಾಯಿತು. ಆ ಕುರಿತು ನಾನು ಕೋಪಗೊಳ್ಳದೇ ಹೋಗಿದ್ದರೆ, ನಾನೆಂದೂ ಆ ಗ್ರಂಥವನ್ನು ಬರೆಯುತ್ತಿರಲಿಲ್ಲ.
ಒಂದಲ್ಲ ಒಂದು ರೀತಿಯಲ್ಲಿ ಈ ಸಮಸ್ಯೆಯು ಮತ್ತೆ ಬರುತ್ತದೆ. ಭಾಷೆಯ ಸಮಸ್ಯೆಯು ಸೂಕ್ಷ್ಮವಾದದ್ದು. ಇದು ಚರ್ಚೆಗೆ ತುಂಬ ದೀರ್ಘವಾದ ಸಮಯವನ್ನು ತೆಗೆದುಕೊಳ್ಳುತ್ತದೆ. ಕಳೆದ ವರ್ಷಗಳಲ್ಲಿ ನಾನು ಕಡಿಮೆ ರಂಜನೀಯವಾಗಿ ಹಾಗೂ ಹೆಚ್ಚು ಕರಾರುವಾಕ್ಕಾಗಿ ಬರೆಯಲು ಪ್ರಯತ್ನಿಸಿದ್ದೇನೆ ಎಂದಷ್ಟೇ ನಾನು ಹೇಳಬಹುದು. ಯಾವುದೇ ಕಾರಣಕ್ಕೂ, ಯಾವುದೇ ರೀತಿಯ ಶೈಲಿಯ ಬರವಣಿಗೆಯಲ್ಲಿ ನೀವು ಪರಿಣತಿ ಪಡೆದುಕೊಂಡ ಸಮಯದಲ್ಲಿಯೂ ಅದನ್ನು ಮೀರಿ ಬೆಳೆದಿರುತ್ತೀರಿ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ರಾಜಕೀಯ ಉದ್ದೇಶ ಹಾಗೂ ಕಲಾತ್ಮಕ ಉದ್ದೇಶಗಳೆರಡನ್ನೂ ಒಂದಾಗಿ ಹೆಣೆಯಲು, ಸಂಪೂರ್ಣ ಪ್ರಜ್ಞಾಪೂರ್ವಕವಾಗಿ ನಾನೇನು ಮಾಡುತ್ತಿದ್ದೇನೆಂಬುದನ್ನು ನನ್ನ ಮೊದಲ ಪುಸ್ತಕ ಆನಿಮಲ್ ಫಾರ್ಮ್ನಲ್ಲಿ ನಾನು ಪ್ರಯತ್ನಿಸಿದ್ದೇನೆ. ಕಳೆದ ಏಳು ವರ್ಷಗಳಲ್ಲಿ ನಾನು ಕಾದಂಬರಿಯನ್ನೇ ಬರೆಯಲಿಲ್ಲ. ಆದರೆ ಇನ್ನೊಂದನ್ನು ಕೆಲವೇ ದಿನಗಳಲ್ಲಿ ಬರೆಯುವ ಭರವಸೆಯಿದೆ. ಅದು ಸೋಲಾಗಲೆಂದೇ ಇದೆ. ಪ್ರತಿಯೊಂದೂ ಪುಸ್ತಕವೂ ಕೂಡ ಒಂದು ಸೋಲೇ! ಆದರೆ, ನಾನು ಯಾವ ರೀತಿಯ ಗ್ರಂಥವನ್ನು ಬರೆಯಬೇಕೆಂಬುದರ ಕುರಿತ ಕೆಲ ಮಟ್ಟಿನ ಸಾದೃಶ್ಯತೆ ನನಗೆ ಗೊತ್ತಿದೆ.

ಹಿಂದಿನ ಒಂದು ಅಥವಾ ಎರಡು ಪುಟಗಳನ್ನು ಪುನಃ ನೋಡಿದರೆ, ನನ್ನ ಬರವಣಿಗೆಯು ಸಂಪೂರ್ಣವಾಗಿ ಸಾರ್ವತ್ರಿಕ ಉತ್ಸಾಹದಿಂದ ಕಂಡುಬಂದಿರುವ ಪ್ರೇರಣೆಗಳೆಂಬಂತೆ ಮಾಡಿರುವುದನ್ನು ನಾನು ಕಾಣಬಲ್ಲೆ. ಅದೇ ಕೊನೆಯ ಛಾಪಾಗಿ ಉಳಿಯಬೇಕೆಂದು ನಾನು ಬಯಸುವುದಿಲ್ಲ. ಎಲ್ಲ ಬರಹಗಾರರೂ ಪೊಳ್ಳು ಪ್ರತಿಷ್ಠೆಯನ್ನು ಹೊಂದಿರುತ್ತಾರೆ, ಸ್ವಾರ್ಥಿಗಳಾಗಿರುತ್ತಾರೆ, ಹಾಗೂ ಆಲಸಿಗಳಾಗಿರುತ್ತಾರೆ. ಅವರೆಲ್ಲರ ಅಂತಃಪ್ರೇರಣೆಗಳ ಮೂಲದಲ್ಲಿ ಗಾಢವಾದ ಗುಟ್ಟಿರುತ್ತದೆ. ಪುಸ್ತಕವೊಂದನ್ನು ಬರೆಯುವುದು ಭಯಂಕರವಾದದ್ದು, ಬಸವಳಿಯುವಂತಹದ್ದು. ಇದೊಂದು ಹೋರಾಟ, ದೀರ್ಘ ಆವರ್ತಗಳುಳ್ಳ ನೋವಿನಿಂದ ಕೂಡಿರುವ ಅನಾರೋಗ್ಯ ಸ್ಥಿತಿಯಂತೆ. ಯಾವವನು ರಾಕ್ಷಸನನ್ನೊಬ್ಬನನ್ನು ತಡೆದು ಕೊಳ್ಳುವುದು ಅಥವಾ ಅರ್ಥೈಸಿಕೊಳ್ಳುವುದು ಸಾಧ್ಯವಿಲ್ಲವೋ ಹಾಗೆ ಅಂತಹ ರಾಕ್ಷಸೀ ಶಕ್ತಿಯೊಂದು ಇಲ್ಲದೇ ಹೋದರೆ ಈ ರೀತಿಯ ಬರವಣಿಗೆಯ ಕೆಲಸವನ್ನು ಯಾವಾಗಲೂ ಕೈಗೆತ್ತಿಕೊಳ್ಳಬಾರದು. ಅದೇ ರಾಕ್ಷಸೀ ಸ್ವಭಾವವೇ ಮಗುವಿನ ಕೀರಲು ಕೂಗನ್ನು ಕೂಡಲೇ ಗಮನಿಸುವಂತೆ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇಷ್ಟೆಲ್ಲ ಆಗಿಯೂ, ನಿರಂತರವಾಗಿ ತನ್ನದೇ ಸ್ವಂತ ವ್ಯಕ್ತಿತ್ವವನ್ನು ಅಳಿಸಲು ಹೋರಾಟ ಮಾಡದೇ, ಓದಬಹುದಾದ ಬರವಣಿಗೆಯನ್ನು ಮಾಡುವುದು ಸಾಧ್ಯವಿಲ್ಲವೆಂಬುದೂ ಸತ್ಯವಾದ ಸಂಗತಿ. ಒಂದು ಒಳ್ಳೆಯ ಗದ್ಯವೆಂದರೆ ಕಿಟಕಿಯ ಚೌಕಟ್ಟಿನಂತೆ. ನನ್ನ ಯಾವ ಪ್ರೇರಣೆಗಳು ಬಲವತ್ತರವಾಗಿವೆ ಎಂಬುದನ್ನು ನಿಖರವಾಗಿ ನಾನು ಹೇಳಲಾರೆ, ಆದರೆ, ಅವುಗಳಲ್ಲಿ ಯಾವವುಗಳನ್ನು ನಾನು ಅನುಸರಿಸಬೇಕೆಂಬುದು ನನಗೆ ತಿಳಿದಿದೆ. ನನ್ನೆಲ್ಲ ಕೃತಿಗಳನ್ನು ಪುನಃ ಅವಲೋಕಿಸಿದಾಗ, ನಾನು ಬರೆದಿರುವ ಜೀವವಿಲ್ಲದ ಬರಹಗಳಲ್ಲಿ ಏಕರೂಪತೆಯಿಂದ ಕೂಡಿದ, ರಾಜಕೀಯ ಉದ್ದೇಶಗಳ ಕೊರತೆಯಿರುವ ಹಾಗೂ ಪರ್ಪಲ್ ಪ್ಯಾಸೇಜುಗಳಲ್ಲಿ ನಿಷ್ಠೆ ತಪ್ಪಿರುವ, ಅರ್ಥವೇ ಇಲ್ಲದ ವಾಕ್ಯಗಳನ್ನು ರಚಿಸಿರುವ, ಅಲಂಕಾರಿಕ ವಿಶೇಷಣಗಳು ಹಾಗೂ ಸಾಮಾನ್ಯವಾಗಿ ಅಸಂಬದ್ಧವಾಗಿರುವ  ಎಲ್ಲವನ್ನೂ ನಾನು ನೋಡಬಲ್ಲೆ.







No comments:

Post a Comment